ದೇಶವನ್ನು ಭ್ರಷ್ಟಾಚಾರದಿಂದ ಕ್ಲೀನ್ ಮಾಡುತ್ತೇವೆ ಎಂಬ ಪ್ರಧಾನಿ ಮೋದಿ ದ್ವ್ವಿಮುಖ ನೀತಿ ಮತ್ತು ಗೋಮುಖ ವ್ಯಾಘ್ರತನ ಬಯಲಾಗಿದೆ: ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ

 

ಬೆಂಗಳೂರು, ಮೇ 17- ರಾಜ್ಯದಲ್ಲಿ ಕೆಟ್ಟ ರಾಜಕಾರಣಕ್ಕೆ ಪ್ರಧಾನಿ ಮೋದಿಯವರು ನಾಂದಿ ಹಾಡಿದ್ದಾರೆ. ದೇಶವನ್ನು ಭ್ರಷ್ಟಾಚಾರದಿಂದ ಕ್ಲೀನ್ ಮಾಡುತ್ತೇವೆ ಎಂದು ಹೇಳುವ ಅವರ ದ್ವ್ವಿಮುಖ ನೀತಿ ಮತ್ತು ಗೋಮುಖ ವ್ಯಾಘ್ರತನ ಬಯಲಾಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಗುಡುಗಿದರು.

ಸರ್ಕಾರ ಹಕ್ಕು ರಚನೆ ಸಂಬಂಧ ರಾಜ್ಯಪಾಲರ ಕ್ರಮ ಖಂಡಿಸಿ ಕಾಂಗ್ರೆಸ್, ಜೆಡಿಎಸ್ ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿ.ಎಸ್.ಯಡಿಯೂರಪ್ಪ ಅವರಿಗೆ ಬಹುಮತ ಸಾಬೀತುಪಡಿಸಲು 15 ದಿನಗಳ ಸಮಯಾವಕಾಶ ನೀಡಿರುವುದು ಕೆಟ್ಟ ರಾಜಕೀಯ ಪರಂಪರೆಗೆ ನಾಂದಿಯಾಗಿದೆ. ದೇಶವನ್ನು ಶುಚಿಗೊಳಿಸುತ್ತೇವೆ ಎನ್ನುವವರ ದ್ವಿಮುಖ ನೀತಿ ಜನರಿಗೆ ಅರ್ಥವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯಡಿಯೂರಪ್ಪನವರು 2008-09ರಲ್ಲಿ ಬಹುಮತ ಸಾಬೀತುಪಡಿಸಲು ಪ್ರತಿಯೊಬ್ಬ ಶಾಸಕರಿಗೆ 25 ರಿಂದ 30 ಕೋಟಿ ಕೊಟ್ಟು ರಾಜೀನಾಮೆ ಕೊಡಿಸಿ ಆಪರೇಷನ್ ಕಮಲ ಮಾಡಿದ್ದರು. ಈ ಬಾರಿಯೂ ಅದೇ ರೀತಿ ಮಾಡುವ ಸಾಧ್ಯತೆ ಇದೆ.

ಕಾಂಗ್ರೆಸ್, ಜೆಡಿಎಸ್‍ನ ಯಾವ ಶಾಸಕರೂ ಬಿಜೆಪಿ ಲೂಟಿ ಮಾಡಿರುವ ಹಣವನ್ನು ಸ್ವೀಕರಿಸುವುದಿಲ್ಲ. ಬಿಜೆಪಿಯಲ್ಲಿ ಯಡಿಯೂರಪ್ಪನವರ ನಾಯಕತ್ವದಿಂದ ಬೇಸತ್ತ 12ಕ್ಕೂ ಹೆಚ್ಚು ಶಾಸಕರು ರಾಜೀನಾಮೆ ಕೊಡುವವರಿದ್ದಾರೆ. ಪ್ರಮಾಣ ವಚನ ಸ್ವೀಕರಿಸಲು ರಾಜ್ಯಪಾಲರು ನೀಡಿರುವ ಕ್ರಮ ಅಸಂವಿಧಾನಿಕ. ಯಡಿಯೂರಪ್ಪನವರು ಪ್ರಮಾಣ ವಚನ ಸ್ವೀಕರಿಸಿ ಮುಖ್ಯಮಂತ್ರಿಯಾಗಿದ್ದಾರೆ, ಆಗಲಿ. ಬಹುಮತ ಹೇಗೆ ಸಾಬೀತುಪಡಿಸುತ್ತಾರೆ..? ರಾಜ್ಯಪಾಲರು ಕೇಂದ್ರದ ಏಜೆಂಟರಂತೆ ವರ್ತಿಸುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ನಾವು ನಮ್ಮ ಸಂಖ್ಯಾಬಲ ಪ್ರದರ್ಶಿಸಲೆಂದೇ ಪ್ರತಿಭಟನೆ ನಡೆಸಿದ್ದೇವೆ. ಮತ್ತೆ ರಾಜ್ಯಪಾಲರನ್ನು ಭೇಟಿ ಮಾಡುವ ಅವಶ್ಯಕತೆ ಇಲ್ಲ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬಿಜೆಪಿ ನಡೆಯನ್ನು ಕಂಡಿಸಿ ನಾವು ಪ್ರತಿಭಟನೆ ಮಾಡುತ್ತೇವೆ. ಎಲ್ಲಾ ರಾಜ್ಯಗಳ ಪ್ರಾದೇಶಿಕ ಪಕ್ಷಗಳ ಮುಖ್ಯಮಂತ್ರಿಗಳ ಜತೆ ಮಾತನಾಡಿದ್ದೇನೆ. ದೇಶದ ರಕ್ಷಣೆಗೆ ಕೈ ಜೋಡಿಸಬೇಕೆಂದು ಮನವಿ ಮಾಡಿದ್ದೇನೆ ಎಂದು ಹೇಳಿದರು.

ಬಿಜೆಪಿ ಇಡಿ ಮೂಲಕ ಬೆದರಿಕೆ ಹಾಕುತ್ತಿದೆ. ಶಾಸಕ ಆನಂದ್‍ಸಿಂಗ್ ಅವರನ್ನು ಹಿಡಿದಿಟ್ಟುಕೊಂಡಿದೆ. ವಾಮಮಾರ್ಗದ ಮೂಲಕ ಅಧಿಕಾರ ಹಿಡಿಯಲು ಹೊರಟಿದೆ. ರಾಜ್ಯದ ಜನತೆ ಇವರ ವಿರುದ್ಧ ತಿರುಗು ಬೀಳುತ್ತಾರೆ ಎಂದು ಎಚ್ಚರಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ