ಮುಧೋಳ್(ಬಿ) ಗ್ರಾಮದಲ್ಲಿ ಕಾಂಗ್ರೇಸ್ ಪಾದಯಾತ್ರೆ ಕೌಡಾಳ್ ಪರ ವಿಜಯಸಿಂಗ್ ಬ್ಯಾಟಿಂಗ್

ಬೀದರ್, ಮೇ 5- ಔರಾದ್ ಕ್ಷೇತ್ರದ ಮುಧೋಳ್(ಬಿ) ಗ್ರಾಮದಲ್ಲಿ ಶನಿವಾರ ಕಾಂಗ್ರೆಸ್ ಕಾರ್ಯಕರ್ತರು ಬೃಹತ್ ರೋಡ್ ಶೋ ಮಾಡುವ ಮೂಲಕ ಪಾದಯಾತ್ರೆ ನಡೆಸಿ, ಕಾಂಗ್ರೆಸ್ ಅಭ್ಯರ್ಥಿ ವಿಜಯಕುಮಾರ ಕೌಡಾಳ್ ಪರವಾಗಿ ಮತಯಾಚನೆ ಮಾಡಿದರು.

ಗ್ರಾಮಕ್ಕೆ ಆಗಮಿಸುತ್ತಲೆ ಕಾಂಗ್ರೆಸ್ ಕಾರ್ಯಕರ್ತರು ಭರ್ಜರಿ ಸ್ವಾಗತ ಕೋರಿ ಬರಮಾಡಿಕೊಂಡರು. ವಿಧಾನ ಪರಿಷತ್ ಸದಸ್ಯ ವಿಜಯಸಿಂಗ್ ಮಾತನಾಡಿ, ಮತ್ತೊಮ್ಮೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದ್ದು, ಗೆಲ್ಲುವ ಕುದುರೆ ಕಾಂಗ್ರೆಸ್ ಅಭ್ಯರ್ಥಿಗೆ ಮಣೆ ಹಾಕಿ, ತಾಲೂಕಿನ ಅಭಿವೃದ್ಧಿಗೆ ಬೆಂಬಲಿಸಬೇಕು ಎಂದು ಕರೆ ನೀಡಿದರು.

ರಾಜ್ಯದಲ್ಲಿ ಈಗಾಗಲೇ ಸಿದ್ದರಾಮಯ್ಯನವರ ಸರ್ಕಾರ ಅನೇಕ ಜನೋಪಕಾರಿ ಕೆಲಸಗಳನ್ನು ಮಾಡಿದ್ದಾರೆ. ಅನ್ಯ ಪಕ್ಷಗಳಿಗೆ ಮತ ಹಾಕಿ ನಿಮ್ಮ ಮತಗಳನ್ನು ವ್ಯರ್ಥಮಾಡಬೇಡಿ. ಕಾಂಗ್ರೆಸ್ ಮತ ನೀಡಿ ಅಭಿವೃದ್ಧಿಗೆ ಸಹಕರಿಸಬೇಕು ಎಂದರು.

ಪಾದಯಾತ್ರೆಯಲ್ಲಿ ಮುಧೋಳ್‍ನ ವಿವಿಧ ಬಡಾವಣೆಗಳಿಗೆ ತೆರಳಿ ಮತಯಾಚನೆ ಮಾಡಲಾಯಿತು. ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು. ಅಭ್ಯರ್ಥಿ ವಿಜಯಕುಮಾರ ಕೌಡಾಳ್, ಪ್ರಮುಖರಾದ ಸೋಮು ಖಡ್ಕೆ, ಗಜಾನನ ವಟ್ಗೆ, ರಾಮ ನರೋಟೆ, ಬಾಬು ಸಿಂಗ್ ಹಜಾರಿ, ಪ್ರಕಾಶ ಪಾಟೀಲ್, ಆನಂದ ಚವ್ಹಾಣ್, ಲಕ್ಷ್ಮಣ ಸೋರಳ್ಳಿ, ಓಂಕಾರ್ ಕೋಟೆ, ಬಾಬುರಾವ ಹಲಬುರ್ಗೆ ಇತರರಿದ್ದರು.
==================================

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ