ಎಲ್ಲರೂ ಮತದಾನ ಮಾಡಿ; ಸಿದ್ದರಾಮಣ್ಣರನ್ನು ಗೆಲ್ಲಿಸಿ; ನಟ ದರ್ಶನ್ ಮನವಿ

ಮೈಸೂರು:ಮೇ-5: ಜೆಡಿಎಸ್‌ ಕಾರ್ಯಕರ್ತರ ವಿರೋಧದ ನಡುವೆಯೂ ನಟ ದರ್ಶನ್‌ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪ್ರಚಾರ ನಡೆಸಿದರು.

ರಮ್ಮನಹಳ್ಳಿಯಲ್ಲಿ ಪ್ರಚಾರ ನಡೆಸಿದ ಅವರು, ದಿವಂಗತ ರಾಕೇಶ್ ಸಿದ್ದರಾಮಯ್ಯರನ್ನು ನೆನೆದರು. ರಾಕೇಶ್ ನಿಧನರಾದಾಗ ಸಿದ್ದರಾಮಯ್ಯರನ್ನು ನೋಡಿದೆ. ಪುತ್ರ ನಿಧನವಾದ 10 ರಿಂದ 15 ದಿನಗಳ ಬಳಿಕ ಸಿಎಂ ಮೇಲೆದ್ದರು. ಜನ ನನ್ನನ್ನು ಗೆಲ್ಲಿಸಿದ್ದಾರೆ. ಅವರಿಗಾಗಿ ಕೆಲಸ ಮಾಡಬೇಕು ಎಂದು ಹೇಳಿದ್ದರು. ಮನುಷ್ಯನಿಗೆ ಕಷ್ಟ ಬರುತ್ತೆ. ಆದರೆ ಕೈಗೆ ಬಂದ ಮಗ ಮೃತಪಟ್ಟರೂ ಕುಗ್ಗದೆ ಜನರಿಗಾಗಿ ಹಿಗ್ಗಿ ಕೆಲಸ ಮಾಡಿದ್ದಾರೆ ಎಂದು ಹೇಳಿದರು.

ಸಿದ್ದರಾಮಯ್ಯ ಅವರನ್ನು ಗೆಲ್ಲಿಸಿ ಅಂತ ನಾನೂ ಮನವಿ ಮಾಡುತ್ತೇನೆ. ಅವರೊಬ್ಬ ಡೇರ್ ಅಂಡ್ ಡೆವಿಲ್ ಆದ ಸಿದ್ರಾಮಣ್ಣ ಎಂದು ಹೇಳಿದರು. ಮೇ 12ಕ್ಕೆ ನಡೆಯುವ ಚುನಾವಣೆಯಲ್ಲಿ ಎಲ್ಲರೂ ಮತದಾನ ಮಾಡಿ, ಸಿದ್ದರಾಮಣ್ಣ ಅವರಿಗೆ ನಿಮ್ಮ ಅಮೂಲ್ಯ ಮತ ನೀಡಿ ಗೆಲ್ಲಿಸಿ ಎಂದು ಕರೆ ನೀಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ