ಬೆಂಗಳೂರು, ಮೇ 5- ಮತದಾರರಿಗೆ ಹಂಚಲು ಬಿಬಿಎಂಪಿ ವಾರ್ಡ್ ಕಚೇರಿಯಲ್ಲಿ ಸಂಗ್ರಹಿಸಿಡಲಾಗಿದ್ದ ಲಕ್ಷಾಂತರ ಮೌಲ್ಯದ ಪಾತ್ರೆ, ಸ್ಟವ್, ಕುಕ್ಕರ್ ಮತ್ತಿತರ ವಸ್ತುಗಳನ್ನು ಚುನಾವಣಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ವಿಜಯನಗರದ ಬಿಜೆಪಿ ಅಭ್ಯರ್ಥಿಯಾಗಿರುವ ಎಚ್.ರವೀಂದ್ರ ಅವರಿಗೆ ಈ ವಸ್ತುಗಳು ಸೇರಿದ್ದವು ಎನ್ನಲಾಗಿದೆ.
ವಿಜಯನಗರ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ ಗಾಳಿ ಆಂಜನೇಯ ಸ್ವಾಮಿ ವಾರ್ಡ್ನಲ್ಲಿ ಬಿಜೆಪಿ ಅಭ್ಯರ್ಥಿ ಎಚ್.ರವೀಂದ್ರ ಅವರ ಬೆಂಬಲಿಗರು ಮತದಾರರಿಗೆ ಪಾತ್ರೆ, ಸ್ಟವ್, ಕುಕ್ಕರ್ ಮತ್ತಿತರ ವಸ್ತುಗಳನ್ನು ಹಂಚುತ್ತಿದ್ದಾರೆ ಎಂದು ಸಾರ್ವಜನಿಕರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು.
ದೂರಿನ ಆಧಾರದ ಮೇರೆಗೆ ಪೆÇಲೀಸರ ಸಹಕಾರದೊಂದಿಗೆ ಚುನಾವಣಾ ಆಯೋಗದ ಎಂಸಿಸಿ ಅಧಿಕಾರಿಗಳು ಮೈಸೂರು ರಸ್ತೆಯ ಟಿಂಬರ್ ಯಾರ್ಡ್ ಬಡಾವಣೆಯಲ್ಲಿರುವ ಬಿಬಿಎಂಪಿ ವಾರ್ಡ್ ಕಚೇರಿ ಮೇಲೆ ದಾಳಿ ನಡೆಸಿದಾಗ ಮತದಾರರಿಗೆ ಹಂಚಲು ಸಂಗ್ರಹಿಸಿಡಲಾಗಿದ್ದ ಲಕ್ಷಾಂತರ ಮೌಲ್ಯದ ವಸ್ತುಗಳು ಕಂಡುಬಂದವು.
ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ ಎಲ್ಲ ವಸ್ತುಗಳನ್ನು ಚುನಾವಣಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.