ಈ ಬಾರಿ ಕಾಂಗ್ರೆಸ್ ಗೆಲುವು ಖಚಿತ ಎಂದು ಕಾಂಗ್ರೆಸ್ ಅಭ್ಯರ್ಥಿ ವಿಜಯಕುಮಾರ ಕೌಡಾಳ್ ವಿಶ್ವಾಸ ವ್ಯಕ್ತ

ಬೀದರ್, ಮೇ 4- ಔರಾದ್ ಕ್ಷೇತ್ರದಲ್ಲಿ ಶಾಸಕ ಪ್ರಭು ಚವ್ಹಾಣ್ ಅವರ ವಿರೋಧಿ ಅಲೆಯಿದ್ದು, ಈ ಬಾರಿ ಕಾಂಗ್ರೆಸ್ ಗೆಲುವು ಖಚಿತ ಎಂದು ಕಾಂಗ್ರೆಸ್ ಅಭ್ಯರ್ಥಿ ವಿಜಯಕುಮಾರ ಕೌಡಾಳ್ ವಿಶ್ವಾಸ ವ್ಯಕ್ತಪಡಿಸಿದರು.

ಶುಕ್ರವಾರ ದಾಬಕಾ ಸೇರಿ ವಿವಿಧೆಡೆ ಅಬ್ಬರದ ಪ್ರಚಾರ ನಡೆಸಿ ಬಿಜೆಪಿ ವಿರುದ್ಧ ವಾಗ್ದಾಳಿ ಮಾಡಿದರು. ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ಬಡವರ, ದೀನ-ದಲಿತರ ಮತ್ತು ರೈತರ ಹಿತ ಕಾಪಾಡಿದೆ. ಎಲ್ಲ ವರ್ಗದವರಿಗೆ ಮೇಲೆತ್ತಲು ಯೋಜನೆ ಜಾರಿ ತಂದಿದೆ. ಹೀಗಾಗಿ ಜನತೆ ಪಕ್ಷದ ಪರ ಒಲವು ಹೊಂದಿದ್ದಾರೆ ಎಂದರು.

ಕ್ಷೇತ್ರ ಮಾದರಿ ಮಾಡುವೆ ಎಂದೆಲ್ಲ ಹೇಳಿದ ಚವ್ಹಾಣ್ ಏನು ಮಾದರಿಯಾಗಿ ಮಾಡಿದ್ದಾರೆ ತೋರಿಸಲಿ. ಬಿಜೆಪಿಯವರು ಸುಳ್ಳು ಹೇಳುವಲ್ಲಿ ನಿಸ್ಸೀಮರು. ಇಲ್ಲಿಂದ ಹಿಡಿದು ದಿಲ್ಲಿವರೆಗೂ ಇದೇ ತರಹದ ನಾಯಕರು ಬಿಜೆಪಿಯಲ್ಲಿದ್ದಾರೆ. ಚುನಾವಣೆ ಮುನ್ನ ನರೇಂದ್ರ ಮೋದಿ ಅವರು ಕೊಟ್ಟ ಭರವಸೆ ಸಹ ಈಡೇರಿಸಿಲ್ಲ. ಕಪ್ಪು ಹಣ ತಂದು, ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ.

ಜಮೆ ಮಾಡುವುದಾಗಿ ಹೇಳಿದ್ದು ನಾಲ್ಕು ವರ್ಷ ಕಳೆದರೂ ಏನಾಯಿತು ಎಂದು ಪ್ರಶ್ನಿಸಿದರು.
ಔರಾದ್ ಶಾಸಕರಿಗೆ ಜನಪರ ಕಾಳಜಿಯಿಲ್ಲ. ಕಳೆದ ಹತ್ತು ವರ್ಷದ ಇವರ ಅವಧಿಯಲ್ಲಿ ಕ್ಷೇತ್ರದಲ್ಲಿ ಒಂದೂ ದೊಡ್ಡ ಕೆಲಸಗಳು ಆಗಿಲ್ಲ. ದಿನವೂ ಇಲ್ಲದೊಂದು ಸುಳ್ಳು ಹೇಳಿಕೆ, ಭರವಸೆಗಳನ್ನು ಕೊಡುತ್ತ ಜನರಿಗೆ ದಿಕ್ಕು ತಪ್ಪಿಸಿದ್ದಾರೆ. ಈಗ ಜನ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ವಿಧಾನ ಪರಿಷತ್ ಸದಸ್ಯ ವಿಜಯಸಿಂಗ್ ಮಾತನಾಡಿ, ಔರಾದ್‍ನಲ್ಲಿ ಬಿಜೆಪಿ ಆಟ ಈ ಬಾರಿ ನಡೆಯಲ್ಲ. ಎರಡು ಅವಧಿಗೆ ಶಾಸಕರಾಗಿರುವ ಪ್ರಭು ಚವ್ಹಾಣ್ ವಿಫಲರಾಗಿದ್ದಾರೆ. ಹೇಳಿಕೊಳ್ಳುವಂತ ಅಭಿವೃದ್ಧಿ ಕೆಲಸ ಮಾಡಿಲ್ಲ ಎಂದು ದೂರಿದರು.
ಪ್ರಮುಖರಾದ ಉಮೇಶ ನಾಯಕ್, ಆನಂದ ಚಹ್ವಾಣ್, ಚಂದ್ರಸಿಂಗ್ ರಾಠೋಡ್, ಅಮರ ಜಾಧವ, ಎಂಡಿ ಸೈಯದ್ ಮಸ್ತ ಇತರರಿದ್ದರು.
—-

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ