ರಾಜ್ಯಾದ್ಯಂತ 11 ಕಡೆ ಎಸಿಬಿ ಅಧಿಕಾರಿಗಳ ದಾಳಿ

 

ಬೆಂಗಳೂರು,ಮೇ4-ಇಂದು ಬೆಳ್ಳಂಬೆಳಗ್ಗೆ ಎಸಿಬಿ ಅಧಿಕಾರಿಗಳ ತಂಡ ರಾಜ್ಯಾದ್ಯಂತ 11 ಕಡೆ ದಾಳಿ ಮಾಡಿ ನಾಲ್ವರು ಅಧಿಕಾರಿಗಳ ಕಚೇರಿ, ನಿವಾಸಗಳ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ.

ಬಳ್ಳಾರಿಯ ಕೆಎನ್‍ಎನ್‍ಎಲ್ ಕೆನಾಲ್ ಡಿವಿಷನ್ ಕಾರ್ಯಪಾಲಕ ಅಭಿಯಂತರ ಎಸ್.ಅಡ್ಡಪ್ಪ ಅವರ ಬಳ್ಳಾರಿಯಲ್ಲಿನ ಗಾಂಧಿನಗರದ ವಾಸದ ಮನೆ ಹಾಗೂ ಇವರು ಕರ್ತವ್ಯ ನಿರ್ವಹಿಸುತ್ತಿದ್ದ ಕಚೇರಿಗಳ ಮೇಲೆ ದಾಳಿ ನಡೆಸಿದ್ದಾರೆ.

ವಿಜಯಪುರದ ಈಶಾನ್ಯ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ರಾಜಶೇಖರ್, ಸುರೇಶ್ ಗಜಕೋಶ್ ಅವರ ವಾಸದ ಎರಡು ಮನೆ ಹಾಗೂ ಕಚೇರಿ ಮೇಲೆ ದಾಳಿ ನಡೆಸಿದ್ದಾರೆ.

ಗುಂಡ್ಲುಪೇಟೆಯ ಪಂಚಾಯತ್‍ರಾಜ್ ಇಂಜಿನಿಯರಿಂಗ್ ವಿಭಾಗದ ಸಹಾಯಕ ಅಭಿಯಂತರ ಎನ್.ರವಿಕುಮಾರ್ ಅವರ ಕಚೇರಿ ಹಾಗೂ ನಿವಾಸ, ಮೈಸೂರಿನ ರಾಮಕೃಷ್ಣನಗರದ ವಾಸದ ಮನೆ, ಕುವೆಂಪು ನಗರದ ಮನೆಗಳನ್ನು ಶೋಧನೆ ನಡೆಸಿದ್ದಾರೆ.

ಇನ್ನು ಕೋಲಾರದ ಸಬ್‍ರಿಜಿಸ್ಟ್ರಾರ್ ಕಚೇರಿಯ ದ್ವಿತೀಯ ದರ್ಜೆಯ ಸಹಾಯಕ ಅಶ್ವತಪ್ಪ ಅವರ ವಾಸದ ಮನೆ,ಕಚೇರಿ ಹಾಗೂ ಹಂಚಿನಗ್ರಾಮದಲ್ಲಿರುವ ನಿವಾಸದ ಮೇಲೆ ದಾಳಿ ಮಾಡಿ ಅಪಾರ ಪ್ರಮಾಣದ ದಾಖಲೆಗಳನ್ನು ವಶಪಡಿಸಿಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ