ಕೆಎಸ್‍ಆರ್‍ಟಿಸಿಯಿಂದ ಗರಿಷ್ಠ 13.67 ಕೋಟಿ ರೂ.ಗಳ ವರಮಾನ ಗಳಿಕೆ

ಬೆಂಗಳೂರು, ಮಾ.3- ದೇಶದಲ್ಲೇ ಅತ್ಯುತ್ತಮ ಸಾರಿಗೆ ವ್ಯವಸ್ಥೆ ಮೂಲಕ ಹೆಗ್ಗಳಿಕೆ ಪಡೆದು ಹಲವಾರು ಪ್ರತಿಷ್ಠಿತ ಪ್ರಶಸ್ತಿ ಪುರಸ್ಕಾರಗಳಿಗೆ ಪಾತ್ರವಾಗಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‍ಆರ್‍ಟಿಸಿ) ಮತ್ತೊಂದು ಮಹತ್ವದ ಸಾಧನೆ ಮಾಡಿದೆ. ನಿಗಮದ ಇತಿಹಾಸದಲ್ಲೇ ಪ್ರಥಮ ಬಾರಿಗೆ ಅತ್ಯಧಿಕ ಆದಾಯ ಅಂದರೆ ಗರಿಷ್ಠ 13.67 ಕೋಟಿ ರೂ.ಗಳ ವರಮಾನ ಗಳಿಸಿದೆ.
ಶಾಂತಿ ನಗರ ಕೇಂದ್ರ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಕೆಎಸ್‍ಆರ್‍ಟಿಸಿ ಅಧ್ಯಕ್ಷ ಕೆ.ಗೋಪಾಲ್ ಪೂಜಾರಿ, ಈ ವರ್ಷ ಮಂಡಳಿಯು 10.27 ಕೋಟಿ ರೂ.ಗಳ ನಿವ್ವಳ ಲಾಭ ಗಳಿಸಿದೆ ಎಂದರು.
2014ರಲ್ಲಿ ಬಸ್ ದರವನ್ನು ಪರಿಷ್ಕರಣೆ ಮಾಡಿ ಶೇ.7.96ರಷ್ಟು ಹೆಚ್ಚಿಸಲಾಗಿತ್ತು. 2015ರಲ್ಲಿ ಪ್ರಯಾಣ ದರವನ್ನು ಶೇ.2ರಷ್ಟು ಇಳಿಸಲಾಗಿತ್ತು ಎಂದು ತಿಳಿಸಿದರು.
ಸಂಸ್ಥೆಯ ಸಾಧನೆಗಳ ಬಗ್ಗೆ ಮಾಹಿತಿ ನೀಡಿದ ಅವರು, ಸಂಸ್ಥೆಗೆ 1,621 ಹೊಸ ಬಸ್‍ಗಳನ್ನು ಸೇರ್ಪಡೆ ಮಾಡಲಾಗಿದೆ. ಪ್ರಯಾಣಿಕರಿಗೆ ಉತ್ತಮ ಸೌಲಭ್ಯಗಳೊಂದಿಗೆ ಶೌಚಾಲಯ ವ್ಯವಸ್ಥೆ ಮಾಡಲಾಗಿದೆ. ಬಸ್ ನಿಲ್ದಾಣಗಳ ಆವರಣದಲ್ಲಿ ಶುಚಿತ್ವಕ್ಕೆ ಆದ್ಯತೆ ನೀಡಲಾಗಿದ್ದು, ಈ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ವಿವರಿಸಿದರು.
ಬೆಂಗಳೂರು ಕೇಂದ್ರೀಯ ವಲಯ, ರಾಮನಗರ, ಮಂಡ್ಯ ಸೇರಿದಂತೆ ಕೆಲವು ವಿಭಾಗಗಳ ಬಸ್ ನಿಲ್ದಾಣಗಳ ಆವರಣಗಳಲ್ಲಿ ಶೌಚಾಲಯಗಳ ನಿರ್ವಹಣೆಯನ್ನು ಮೆಸರ್ಸ್ ಸುಲಭ್ ಇಂಟರ್ ನ್ಯಾಷನಲï ಸಂಸ್ಥೆಗೆ ವಹಿಸಲಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಇತರ ಬಸ್‍ನಿಲ್ದಾಣಗಳಿಗೂ ಈ ಸೌಲಭ್ಯವನ್ನು ವಿಸ್ತರಿಸಲಾಗುವುದು ಎಂದು ಅವರು ಹೇಳಿದರು.
ಅಲ್ಲದೇ ಪ್ರತಿಷ್ಠಿತ ಸಾರಿಗೆ ಸೇವೆಗಳಲ್ಲಿ ಪ್ರಯಾಣಿಕರಿಗೆ ಮಿನರಲ್ ವಾಟರ್ ಬಾಟಲ್‍ಗಳನ್ನು ಪೂರೈಸಲಾಗುವುದು. 500 ಮಿ.ಲೀ. ಪ್ಯಾಕೆಜ್ಡ್ ಕುಡಿಯುವ ನೀರಿನ ಬಾಟಲ್‍ಗಳನ್ನು ಸ್ಪರ್ಧಾತ್ಮಕ ದರಗಳಲ್ಲಿ ಅಂದರೆ 4.30 ರೂ.ಗಳಿಗೆ ನೀಡಲು ರಾಜ್ಯ ಸರ್ಕಾರಿ ಸ್ವಾಮ್ಯದ ಎಂಎಸ್‍ಪಿಎಲïಗೆ ವಹಿಸಲಾಗಿದೆ ಎಂದು ಅವರು ತಿಳಿಸಿದರು.
45 ಬಸ್‍ಮಿತ್ರಗಳ ಸೇವೆ :
ಅಪಘಾತ ನಡೆದ ಸ್ಥಳಗಳಿಗೆ ತ್ವರಿತವಾಗಿ ತಲುಪಿ ಸಂತ್ರಸ್ತರಿಗೆ ನೆರವು ನೀಡಲು ಹಾಗೂ ತ್ವರಿತ ಪರಿಹಾರ ಒದಗಿಸಲು ಅನುಕೂಲವಾಗುವಂತೆ 45 ಬಸ್ ಮಿತ್ರ ವಾಹನಗಳನ್ನು ಶೀಘ್ರವೇ ಪರಿಚಯಿಸಲಾಗುವುದು. ಇದಕ್ಕಾಗಿ ಗೋಲ್ಡನ್ ಅವರ್ ಟ್ರಸ್ಟ್ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಅವರು ಪ್ರಕಟಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ