ಎರಡು ಆಯಾಮಗಳಲ್ಲಿ ಮಂಗಳೂರು ಗಲಭೆಯ ತನಿಖೆ-ಸಚಿವ ಬಸವರಾಜ್ ಬೊಮ್ಮಾಯಿ

ಬೆಂಗಳೂರು,ಡಿ.24-ಮಂಗಳೂರಿನಲ್ಲಿ ನಡೆದ ಕೋಮು ಗಲಭೆ ಒಂದು ವ್ಯವಸ್ಥಿತ ಸಂಚು. ಇದರ ತನಿಖೆ ನಂತರ ತಪ್ಪಿತಸ್ಥರು ಯಾರೇ ಇದ್ದರೂ ಅವರಿಗೆ ಕಾನೂನು ಪ್ರಕಾರವೇ ಶಿಕ್ಷೆಯಾಗಲಿದೆ ಎಂದು ಗೃಹ ಎಚ್ಚರಿಕೆ ನೀಡಿದ್ದಾರೆ.

ಪೋಲೀಸರ ಮೇಲೆ ದಾಳಿ ಮಾಡಿದವರು ಅಮಾಯಕರೇ? ಎಂದು ಪ್ರಶ್ನಿಸಿದ ಅವರು, ಮೇಲ್ನೋಟಕ್ಕೆ ಇದೊಂದು ವ್ಯವಸ್ಥಿತ ಸಂಚು ಎಂದು ಕಂಡುಬಂದಿದೆ. ಹೀಗಾಗಿ ಸಿಐಡಿ ಮತ್ತು ನ್ಯಾಯಾಂಗ ತನಿಖೆಗೆ ಆದೇಶ ಮಾಡಿದ್ದೇವೆ ಎಂದು ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಲಭೆ ಸೃಷ್ಟಿಸುವವರಲ್ಲಿ ಎರಡು ರೀತಿ ಇದ್ದಾರೆ. ಒಂದು ತಂಡ ಕೇರಳದಿಂದ ಬಂದಿದ್ದರೆ ಮತ್ತೊಂದು ತಂಡ ಕಾಲೇಜಿಗೆ ಪ್ರವೇಶ ಪಡೆಯಲು ಬಂದಂತವರು ಎಂದು ಮಾಹಿತಿ ನೀಡಿದರು.

ಪೋಲೀಸರ ಪ್ರಾಥಮಿಕ ತನಿಖೆಯಿಂದ ಈ ಗಲಭೆಯು ವ್ಯವಸ್ಥಿತ ಸಂಚು ಎಂಬುದು ಗೊತ್ತಾಗಿದೆ. ತನಿಖೆಯಿಂದ ತಪ್ಪಿತಸ್ಥರು ಯಾರು ಎಂಬುದು ಗೊತ್ತಾಗಲಿದೆ. ಯಾರೇ ಭಾಗಿಯಾಗಿದ್ದರೂ ಕಾನೂನಿನಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂದರು.

ಅಮಾಯಕರಾಗಿದ್ದರೆ ಅವರು ಪೋಲೀಸರ ಮೇಲೆ ಹಲ್ಲೆ ನಡೆಸುವುದಾಗಲಿ, ಕಲ್ಲು ಎಸೆಯುವಂತಹ ದುಷ್ಕøತ್ಯ ನಡೆಸುತ್ತಿರಲಿಲ್ಲ ಎಂದು ವಿರೋಧ ಪಕ್ಷದವರಿಗೆ ಟಾಂಗ್ ನೀಡಿದರು.

ಎರಡು ಆಯಾಮಗಳಲ್ಲಿ ಮಂಗಳೂರು ಗಲಭೆಯ ತನಿಖೆ ಮಾಡಿಸಲಾಗುವುದು. ಉಡುಪಿ ಜಿಲ್ಲಾಧಿಕಾರಿಯವರು ಮ್ಯಾಜಿಸ್ಟ್ರೇಟ್ ತನಿಖೆ ನಡೆಸಲಿದ್ದಾರೆ. ಗಲಭೆ ಏಕೆ ಆಯಿತು? ಯಾರು ಮಾಡಿದರು? ಎಂಬುದರ ಬಗ್ಗೆ ತನಿಖೆ ನಡೆಸಲಿದ್ದು, ಮುಕ್ತವಾಗಿ ತನಿಖೆ ನಡೆಸಲು ಸರ್ಕಾರ ಎಲ್ಲ ರೀತಿಯ ಸಹಕಾರ ನೀಡಲಿದೆ ಎಂದು ಹೇಳಿದರು.

ಮಾನವ ಹಕ್ಕುಗಳ ಆಯೋಗದ ಪ್ರಕಾರ ಘಟನೆ ಕುರಿತಂತೆ ನಾವು ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶ ನೀಡಲಾಗಿದೆ. ಅಂತಿಮ ವರದಿ ಬಂದ ನಂತರ ತಪ್ಪಿತಸ್ಥರು ಯಾರು ಎಂಬುದು ತಿಳಿಯಲಿದೆ ಎಂದರು.

ಮಾಜಿ ಸಚಿವ ಯು.ಟಿ.ಖಾದರ್ ಮೇಲೆ ಎಫ್‍ಐಆರ್ ದಾಖಲಾಗಿದೆ. ಯಾವ ಸೆಕ್ಷನ್‍ನಡಿ ದೂರು ದಾಖಲಾಗಿದೆಯೋ ಅದರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ. ಮಂಗಳೂರು ಪೋಲೀಸರು ಕಾನೂನಿನ ಪ್ರಕಾರವೇ ಕ್ರಮ ಕೈಗೊಳ್ಳುತ್ತಾರೆ ಎಂದು ನುಡಿದರು.

ಮುಖ್ಯಮಂತ್ರಿ ಯಡಿಯೂರಪ್ಪನವರು ಘಟನೆ ಕುರಿತಂತೆ ಪೋಲೀಸರಿಗೆ ಕ್ಲೀನ್‍ಚೀಟ್ ಕೊಟ್ಟಿಲ್ಲ. ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮಾತ್ರ ಪ್ರತಿಭಟನೆ ನಡೆಸಿದವರು ಅಮಾಯಕರು ಎಂದು ಹೇಳಿದ್ದಾರೆ. ತನಿಖೆಯ ನಂತರವೇ ಸತ್ಯಾಸತ್ಯತೆ ತಿಳಿಯಲಿದೆ. ಪೋಲೀಸರ ಹೇಳಿಕೆಯನ್ನು ಆಧರಿಸಿ ಸಿಎಂ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಎಲ್ಲಿಯೂ ಅವರು ಘಟನೆ ಕುರಿತಂತೆ ಯಾರಿಗೂ ಕ್ಲೀನ್‍ಚಿಟ್ ಕೊಟ್ಟಿಲ್ಲ.ಸಿದ್ದರಾಮಯ್ಯ ಮಾತ್ರ ತನಿಖೆಗೂ ಮುನ್ನವೇ ಅಮಾಯಕರು ಎಂದು ಹೇಳುತ್ತಿರುವುದು ಸರಿಯೇ ಎಂದು ಪ್ರಶ್ನಿಸಿದರು.

ಘಟನೆ ಕುರಿತಂತೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ನಿಮ್ಮ ರಾಜೀನಾಮೆಗೆ ಒತ್ತಾಯಿಸಿದ್ದಾರಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅವರು ನಮ್ಮ ಸಹೋದರ. ಪ್ರೀತಿಯಿಂದ ಹೇಳಿರಬಹುದು. ಇಂತಹ ಸಮಯದಲ್ಲಿ ಅವರು ನಮ್ಮ ಜೊತೆ ಇರಬೇಕೆಂದು ಮನವಿ ಮಾಡಿದರು.

ಹಿಂದೆ ರಾಜ್ಯದಲ್ಲಿ ಅನೇಕ ಗಲಭೆಗಳು ನಡೆದಾಗ ಯಾರೊಬ್ಬರೂ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಟ್ಟಿಲ್ಲ. ಕಾಂಗ್ರೆಸ್-ಜೆಡಿಎಸ್ ಅವಧಿಯಲ್ಲೂ ಗೋಲಿಬಾರ್ ಪ್ರಕರಣಗಳು ನಡೆದಿವೆ ಎಂದು ಪರೋಕ್ಷವಾಗಿ ಬೊಮ್ಮಾಯಿ ಎಚ್‍ಡಿಕೆಗೆ ಟಾಂಗ್ ಕೊಟ್ಟರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ