ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಐಎಸ್‍ಐಯ ಗಿಳಿ-ಬಿಜೆಪಿ ಸಂಸದ ಡಾ.ಸುಬ್ರಹ್ಮಣ್ಯನ್

ನವದೆಹಲಿ, ಆ.22- ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅಲ್ಲಿನ ಬೇಹುಗಾರಿಕೆ ಸಂಸ್ಥೆ ಐಎಸ್‍ಐಯ ಗಿಳಿ ಎಂದು ಬಿಜೆಪಿ ಸಂಸದ ಡಾ.ಸುಬ್ರಹ್ಮಣ್ಯನ್ ಸ್ವಾಮಿ ವ್ಯಂಗ್ಯವಾಡಿದ್ದಾರೆ.

ಸಂವಿಧಾನ ವಿಧಿ 370ನ್ನು ರದ್ದುಪಡಿಸಿದ ಕೇಂದ್ರ ಸರ್ಕಾರದ ನಿರ್ಣಯದ ಬಗ್ಗೆ ಕಾಶ್ಮೀರ ಕುರಿತ ಚರ್ಚಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಮ್ರಾನ್ ಖಾನ್ ಒಬ್ಬ ಡಮ್ಮಿ ಪ್ರಧಾನಿ. ಐಎಸ್‍ಐ ತಾಳಕ್ಕೆ ಕುಣಿಯುವ ಅತ್ಯಂತ ದುರ್ಬಲ ನಾಯಕ. ಇದು ನನ್ನ ಅಭಿಪ್ರಾಯವೇ ಹೊರತು ಪಕ್ಷದ್ದಲ್ಲ ಎಂದು ಹೇಳಿದ್ದಾರೆ.

ಫಾರಿನ್ ಕರೆಸ್ಪಾಂಡೆನ್ಸ್ ಕ್ಲಬ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಬಗ್ಗೆ ಮಾತನಾಡಲು ಮಾತ್ರ ವಿಷಯ ಉಳಿದಿದೆ. ಅದು ಭಾರತಕ್ಕೆ ಸೇರಿದ್ದಾಗಿದೆ ಎಂದರು.

ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಗೆ ಸಂಬಂಧಪಟ್ಟಂತೆ ಅವರು ಐಎಸ್‍ಐನ ಡಮ್ಮಿ, ಐಎಸ್‍ಐ ಹೇಳಿದಂತೆ ಕೇಳುವ ಗಿಣಿ, ಹೀಗಾಗಿ ಐಎಸ್‍ಐ ಮಾತನಾಡುವ ಭಾಷೆಯಲ್ಲಿಯೇ ಮಾತನಾಡುತ್ತಾರೆ ಎಂದರು.

ಈ ಸಂದರ್ಭದಲ್ಲಿ ಸಂವಿಧಾನ ವಿಧಿ 370ನ್ನು ರದ್ದು ಮಾಡಿರುವ ಕುರಿತು ಮಾತನಾಡಿದ ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ.ರಾಜಾ ಕಾಶ್ಮೀರದಲ್ಲಿನ ಪರಿಸ್ಥಿತಿಯನ್ನು ಕೇಂದ್ರ ಸರ್ಕಾರ ನಿಭಾಯಿಸುತ್ತಿರುವ ರೀತಿಯನ್ನು ಕೂಡ ಪ್ರಶ್ನೆ ಮಾಡಿದರು. ಕಾಶ್ಮೀರ ವಿಷಯದಲ್ಲಿ ಚೀನಾ ಮತ್ತು ಅಮೆರಿಕಾ ಹಸ್ತಕ್ಷೇಪ ಮಾಡುತ್ತಿರುವುದರಿಂದ ಅದು ಚತುರ್ಭುಜ ಸಮಸ್ಯೆಯಾಗಿದೆ. ಭಾರತ ಮತ್ತು ಪಾಕಿಸ್ತಾನದ ದ್ವಿಪಕ್ಷೀಯ ಮಾತುಕತೆಯ ವಿಷಯವಾಗಿ ಉಳಿದಿಲ್ಲ ಎಂದು ಟೀಕಿಸಿದರು.

ಸಂವಿಧಾನ ವಿಧಿ 370ನ್ನು ರದ್ದುಪಡಿಸಿರುವ ಮೋದಿ ಸರ್ಕಾರದ ಕ್ರಮ ಮಾಸ್ರ್ಟ ಸ್ಟ್ರೋಕ್ ಎಂದು ಬಣ್ಣಿಸಿದ ಖ್ಯಾತ ವಕೀಲ ಹಾಗೂ ರಾಜ್ಯಸಭಾ ಸದಸ್ಯ ಕೆಟಿಎಸ್ ತುಲ್ಸಿ ಸರ್ಕಾರದ ನಡೆಯ ಕಾನೂನಾತ್ಮಕತೆಯನ್ನು ಪ್ರಶ್ನಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ