ನವಜೀವನದ ಹೊಸ್ತಿಲು ತುಳಿಯಲು ಸ್ಟಾರ್ ನಟ ನಟಿಯರ ಸಜ್ಜು

ಬೆಂಗಳೂರು,ಡಿ.12-ಬಾಲಿವುಡ್‍ನಲ್ಲಿ ವಿವಾಹಗಳ ಸಂಭ್ರಮಕ್ಕೆ ತೆರೆ ಬೀಳುತಿದ್ದಂತೆ ಸ್ಯಾಂಡಲ್‍ವುಡ್‍ನಲ್ಲೂ ನವಜೀವನದ ಹೊಸ್ತಿಲು ತುಳಿಯಲು ಸ್ಟಾರ್ ನಟ-ನಟಿಯರು ಸಜ್ಜಾಗುತ್ತಿದ್ದಾರೆ.

ಬೆಳ್ಳಿತೆರೆ ಮೇಲೆ ಯಶಸ್ವಿ ಜೋಡಿಯಾಗಿ ಮಿಂಚಿದ್ದ ಸ್ಯಾಂಡಲ್‍ವುಡ್‍ನ ದೂದ್‍ಪೇಡ ಖ್ಯಾತಿಯ ದಿಗಂತ್ ಹಾಗೂ ಅನಾರ್ಕಲಿ ಎಂದೇ ಪರಿಚಿತರಾಗಿರುವ ಐಂದ್ರಿತಾ ರೇ ಇದೀಗ ಹಸೆಮಣೆ ಏರಲಿದ್ದಾರೆ.

ಮನಸಾರೆ ಚಿತ್ರದ ಮೂಲಕ ಬೆಳ್ಳಿ ಪರದೆ ಮೇಲೆ ಸೂಪರ್ ಜೋಡಿ ಎಂದು ಗುರುತಿಸಿಕೊಂಡಿದ್ದ ದಿಗಂತ್ ಮತ್ತು ಐಂದ್ರಿತಾ ರೇ ಇಂದು ಸಂಜೆ ಚಿಕ್ಕಬಳ್ಳಾಪುರ ನಂದಿಬೆಟ್ಟದ ತಪ್ಪಲಿನಲ್ಲಿರುವ ಡಿಸ್ಕವರಿ ವಿಲೇಜ್ ರೆಸಾರ್ಟ್‍ನಲ್ಲಿ ತಾರಾ ಜೋಡಿಗಳ ವಿವಾಹ ನಡೆಯುತ್ತಿದೆ. ನಿನ್ನೆ ಸಂಜೆ ಅರಿಶಿನ ಕಾರ್ಯಕ್ರಮ ವಿಜೃಂಭಣೆಯಿಂದ ಜರುಗಿದೆ.

ಮದುವೆಯೂ ಬ್ರಾಹ್ಮಣ ಮತ್ತು ಬೆಂಗಾಲಿ ಸಂಪ್ರದಾಯದಲ್ಲಿ ನೆರವೇರಲಿದೆ.ಚಿತ್ರರಂಗದ ಶಿವರಾಜ್‍ಕುಮಾರ್, ಪುನೀತ್ ರಾಜ್‍ಕುಮಾರ್ ಸುದೀಪ್, ದರ್ಶನ್, ಪ್ರಜ್ವಲ್ ದೇವರಾಜ್, ಸೇರಿದಂತೆ ಹಲವು ಗಣ್ಯರು, ಸ್ನೇಹಿತರು, ಸಂಬಂಧಿಕರು ನವಜೋಡಿಗಳಿಗೆ ಶುಭಾಶಯ ಕೋರಿದ್ದಾರೆ.
ಕಳೆದ 9 ವರ್ಷಗಳಿಂದ ಪ್ರೀತಿಸುತ್ತಿದ್ದ ಈ ತಾರಾ ಜೋಡಿ ಇಂದು ವಿವಾಹ ಬಂಧನಕ್ಕೆ ಒಳಗಾಯಿತು.

ಬಾಲಿವುಡ್ ಹಾಗೂ ಸ್ಯಾಂಡಲ್‍ವುಡ್‍ನಲ್ಲಿ ನಡೆಯುತ್ತಿರುವ ಸ್ಟಾರ್ ನಟ-ನಟಿಯರ ಮದುವೆಗಳು ವಿಜೃಂಭಣೆಯಲ್ಲಿ ನಡೆದವು.ಆದರೆ, ಪ್ರಕೃತಿಯ ಬಗ್ಗೆ ವಿಶೇಷ ಕಾಳಜಿ ಹೊಂದಿರುವ ದಿಗಂತ್-ಐಂದ್ರಿತಾ ರೇ ವಿವಾಹ ಹಚ್ಚ ಹಸುರಿನ ವಾತಾವರಣದಲ್ಲಿ ನಡೆಯಿತು.

ಐಂದ್ರಿತಾ ರೇ ಮತ್ತು ದಿಗಂತ್ ಇಬ್ಬರೂ ಮನಸಾರೆ, ಪಾರಿಜಾತ ಚಿತ್ರಗಳಲ್ಲಿ ನಟಿಸಿದ್ದಾರೆ. ದಿಗಂತ್ ಮುಂಗಾರು ಮಳೆ ಚಿತ್ರದಲ್ಲಿ ಕಾಣಿಸಿಕೊಂಡು ನಂತರ ಗಾಳಿಪಟ, ಮೀರಾ ಮಾದ ರಾಘವ, ಪಂಚರಂಗಿ, ಮಸ್ತ್ ಮಜಾ ಮಾಡಿ, ಲೈಫು ಇಷ್ಟೇನೆ, ಚೌಕ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ಐಂದ್ರಿತಾ ರೇ ಮೆರವಣಿಗೆ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ನಂತರ ನೂರು ಜನ್ಮಕೂ, ವೀರ ಪರಂಪರೆ, ಭಜರಂಗಿ, ಜಂಗ್ಲಿ, ಪರಮಾತ್ಮ, ರಜನಿಕಾಂತ, ಚೌಕ ಚಿತ್ರಗಳಲ್ಲಿ ನಟಿಸಿದ್ದಾರೆ.

ಚಿತ್ರ ನಿರ್ಮಾಪಕ ಶೈಲೇಂದ್ರ ಬಾಬು ಅವರ ಪುತ್ರ ನಾಯಕನಟ ಸುಮಂತ್ ಶೈಲೇಂದ್ರ ಬಾಬು ಕೂಡ ಇಂದು ಬೆಳಗ್ಗೆ ಅನಿತಾ ಅವರನ್ನು ವರಿಸಿದ್ದಾರೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಇಂದು ಬೆಳಗ್ಗೆ ಮುಹೂರ್ತ ನೆರವೇರಿದ್ದು, ನಿನ್ನೆ ಸಂಜೆ ಆರತಕ್ಷತೆ ಸಮಾರಂಭ ನಡೆದಿತ್ತು. ಆರತಕ್ಷತೆಗೆ ಚಿತ್ರರಂಗ ಮತ್ತು ರಾಜಕೀಯ ಗಣ್ಯರು ಆಗಮಿಸಿ ಹೊಸ ಜೋಡಿಗಳಿಗೆ ಶುಭಾಶಯ ಕೋರಿದರು.
ದಿಲ್‍ವಾಲಾ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಸುಮಂತ್ ತಿರುಪತಿ ಎಕ್ಸ್‍ಪ್ರೆಸ್, ಆಟ, ಭಲೆ ಜೋಡಿ ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿದ್ದು, ತೆಲುಗಿನಲ್ಲೂ ಕೂಡ ನಟಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ