ನ.25ರಿಂದ ಲೀಗ್ ಕಂ ನಾಕೌಟ್ ಕ್ರಿಕೆಟ್ ಟೂರ್ನಿ

ದಾವಣಗೆರೆ: ದಿವಂಗತ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಸವಿನೆನಪಿನ ಅಂಗವಾಗಿ ರಾಷ್ಟ್ರಮಟ್ಟದ ಟೆನ್ನಿಸ್ ಬಾಲ್ ಹೊನಲು-ಬೆಳಕಿನ ಲೀಗ್ ಕಂ ನಾಕೌಟ್ ಕ್ರಿಕೆಟ್ ಟೂರ್ನಿಯನ್ನು ನ.25ರಿಂದ 29ರವರೆಗೆ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ದಾವಣಗೆರೆ ಇಲೆವೆನ್ಸ್ ಕ್ರಿಕೆಟ್ ಕ್ಲಬ್ ಹಾಗೂ ಜಿಲ್ಲಾ ಕ್ರೀಡಾಪಟುಗಳ ಸಾಂಸ್ಕ್ರತಿಕ ಸಂಘದ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ ಮಾತನಾಡಿ, 5 ದಿನಗಳ ಕಾಲ ನಡೆಯುವ ಟೂರ್ನಿಯಲ್ಲಿ ಕೇರಳ, ಚೆನೈ, ಗೋವಾ, ಮಹಾರಾಷ್ಟ್ರ, ಬೆಂಗಳೂರು, ಮೈಸೂರು, ಮಂಗಳೂರು, ಉಡುಪಿ, ತುಮಕೂರು, ಶಿವಮೊಗ್ಗ, ಹುಬ್ಬಳ್ಳಿ ಸೇರಿದಂತೆ ವಿವಿಧೆಡೆಗಳಿಂದ ಒಟ್ಟು 24 ಆಹ್ವಾನಿತ ತಂಡಗಳು ಭಾಗವಹಿಸಲಿವೆ. 320 ಆಟಗಾರರಿಗೆ ಉಚಿತವಾಗಿ ಊಟ, ವಸತಿ ಮಾಡಲಾಗುವುದು ಎಂದರು.
ವಿಜೇತರಿಗೆ ಪ್ರಥಮ ಬಹುಮಾನ 3,55,555, ದ್ವಿತೀಯ ಬಹುಮಾನ 2,55,555 ರೂ. ಮತ್ತು ತೃತೀಯ ಬಹುಮಾನವಾಗಿ 1,25,555 ರೂ. ಹಾಗೂ ಆಕರ್ಷಕ ಟ್ರೋಪಿ ನೀಡಲಾಗುವುದು. ವೈಯಕ್ತಿಕ ಉತ್ತಮ ಆಲ್ ರೌಂಡರ್‍ಗೆ ಹೀರೊ ಹೊಂಡ ಬೈಕ್ ನೀಡಲಾಗುವುದು. ಪಂದ್ಯ ವೀಕ್ಷಿಸಲು ಕ್ರೀಡಾಭಿಮಾನಿಗಳಿಗೆ ಗ್ಯಾಲರಿ ವ್ಯವಸ್ಥೆ ಮಾಡಿದ್ದು, ಮೂರನೇ ತೀರ್ಪುಗಾರರ ವ್ಯವಸ್ಥೆ ಇರುತ್ತದೆ. ಎಲ್ಲಾ ಪಂದ್ಯಾವಳಿಗಳೂ ಯೂಟ್ಯೂಬ್‍ನಲ್ಲಿ ನೇರ ಪ್ರಸಾರಗೊಳ್ಳಲಿವೆ. ವಿಶೇಷವಾಗಿ 8 ಅಫೀಶಿಯಲ್ ಕಪ್ ಪಂದ್ಯಾವಳಿ ನಡೆಯಲಿದ್ದು,ಪೊಲೀಸ್, ಪತ್ರಕರ್ತರು, ವರ್ತಕರು, ಪಾಲಿಕೆ ಸದಸ್ಯರು, ವಕೀಲರ ತಂಡ ಭಾಗವಹಿಸಲಿವೆ ಎಂದು ಅವರು ವಿವರಿಸಿದರು.

ಜಯಪ್ರಕಾಶ್ ಗೌಡ್, ಶಿವಣ್ಣ, ಚಂದ್ರು, ಮಧು, ಯುವರಾಜ್, ರಾಘವೇಂದ್ರ, ಯೋಗೀಶ್ ಇತರರು ಸುದ್ದಿಗೋಷ್ಠಿಯಲ್ಲಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ