ನಾಳೆ ರಾಜ್‍ಘಾಟ್‍ನಲ್ಲಿ ಐದು ಗಂಟೆಗಳ ಸತ್ಯಾಗ್ರಹ ನಡೆಸಲಿರುವ ಕಾಂಗ್ರೆಸ್

ನವದೆಹಲಿ, ಡಿ.22- ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆ ಸೇರಿದಂತೆ ವಿವಿಧ ವಿಷಯಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ನಾಳೆ ದೆಹಲಿಯಲ್ಲಿನ ಮಹಾತ್ಮಗಾಂಧಿ ಸಮಾಧಿ ಇರುವ ರಾಜ್‍ಘಾಟ್‍ನಲ್ಲಿ ಐದು ಗಂಟೆಗಳ ಸತ್ಯಾಗ್ರಹ ನಡೆಸಲಿದೆ.

ವಾಸ್ತವವಾಗಿ ಇಂದು ಬೆಳಗ್ಗೆ ಕಾಂಗ್ರೆಸ್ ಸತ್ಯಾಗ್ರಹ ನಡೆಸಲು ಉದ್ದೇಶಿಸಿತ್ತಾದರೂ, ರಾಮಲೀಲಾ ಮೈದಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ರ್ಯಾಲಿ ಹಿನ್ನೆಲೆಯಲ್ಲಿ ಅನುಮತಿ ನಿರಾಕರಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸತ್ಯಾಗ್ರಹವನ್ನು ನಾಳೆಗೆ ಮುಂದೂಡಿತ್ತು.

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ನಡೆಯಲಿರುವ ಈ ಸತ್ಯಾಗ್ರಹದಲ್ಲಿ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್, ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ, ಗುಲಾಂ ನಬಿ ಅಜಾದ್, ಆದೀರ್ ರಂಜನ್ ಚೌಧರಿ, ಆನಂದ ಶರ್ಮ, ಅಹಮದ್ ಪಟೇಲ್ ಸೇರಿದಂತೆ ಅನೇಕ ನಾಯಕರು ಭಾಗವಹಿಸುವರು.

ಕೇಂದ್ರ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆ ಮೊದಲಾದ ವಿವಾದಿತ ಮಸೂದೆಗಳ ಮೂಲಕ ಸಂವಿಧಾನದ ನೀತಿಗಳನ್ನು ಉಲ್ಲಂಘಿಸುತ್ತಿದೆ. ಪ್ರಧಾನಿ ನೇತೃತ್ವದ ಆಡಳಿತದ ಏಕಪಕ್ಷೀಯ ನಿರ್ಧಾರಗಳಿಂದ ದೇಶದಲ್ಲಿ ಅಶಾಂತಿ ತಲೆದೋರಿದೆ. ಆರ್ಥಿಕ ವ್ಯವಸ್ಥೆ ಕುಂಠಿತಗೊಂಡಿದೆ, ರೈತರು, ಕಾರ್ಮಿಕರು ಮತ್ತು ಬಡವರ ಸ್ಥಿತಿ ಶೋಚನೀಯವಾಗಿದೆ. ನಿರುದೋಗ್ಯ ಸಮಸ್ಯೆ ಹೆಚ್ಚಾಗಿದೆ ಎಂದು ಆರೋಪಿಸಿ ನಾಳೆ ಕಾಂಗ್ರೆಸ್ ಧರಣಿ ಸತ್ಯಾಗ್ರಹ ನಡೆಸಲಿದೆ.

ಅತಿಗಣ್ಯ ವ್ಯಕ್ತಿಗಳು ಮತ್ತು ಪಕ್ಷದ ಮುಖಂಡರು ಈ ಪ್ರತಿಭಟನೆಯಲ್ಲಿ ಭಾಗವಹಿಸುವುದರಿಂದ ರಾಜ್‍ಘಾಟ್ ಸುತ್ತಮುತ್ತ ಭಾರೀ ಬಂದೋಬಸ್ತ್ ಮಾಡಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ