ಅತ್ಯಾಚಾರ ಆರೋಪಿಗಳ ಎನ್‌ಕೌಂಟರ್‌: ಶುಕ್ರವಾರ ಬೆಳ್ಳಂಬೆಳಗ್ಗೆ ನಡೆದಿದ್ದೇನು?

ಹೈದರಾಬಾದ್‌: ಸರಣಿ ಹತ್ಯೆ ಯತ್ನಗಳಿಂದ ಪಾರಾಗಿದ್ದ ಉತ್ತರ ಪ್ರದೇಶದ ಉನ್ನಾವೋ ಅತ್ಯಾಚಾರ ಸಂತ್ರಸ್ತೆ ಮೇಲೆ ಗುರುವಾರ ನಡೆದ ಭೀಕರ ಕೊಲೆ ಯತ್ನದ ಸುದ್ದಿ ರಾಷ್ಟ್ರವನ್ನೇ ಬೆಚ್ಚಿ ಬೀಳಿಸಿತ್ತು. ಅತ್ಯಾಚಾರ, ಹತ್ಯೆ ಸುದ್ದಿಗಳನ್ನೇ ಕೇಳಿ ಆವೇಶದಿಂದ ಕುದಿಯುತ್ತ ಮಲಗಿದ್ದ ಜನಕ್ಕೆ ಶುಕ್ರವಾರ ಬೆಳಗ್ಗೆ ಅಕ್ಷರಶಃ ಹರ್ಷೋಧ್ಘಾರವನ್ನು ನೀಡಿದೆ. ಬೆಳಗ್ಗೆ ಎದ್ದು ಮೊಬೈಲ್‌ ನೋಡುತ್ತಿದ್ದಂತೆ ಹೈದರಾಬಾದ್‌ ಪಶುವೈದ್ಯೆ ಅತ್ಯಾಚಾರ ಆರೋಪಿಗಳ ಎನ್‌ಕೌಂಟರ್‌ ಸುದ್ದಿ ಕಾಣಿಸಿಕೊಂಡಿದೆ. ಇದರಿಂದ ಖುಷಿಯಾದ ಜನ ವಾಟ್ಸ್‌ಆ್ಯಪ್‌ ಸ್ಟೇಟಸ್‌ಗಳಲ್ಲಿ, ಫೇಸ್‌ಬುಕ್‌, ಟ್ವೀಟರ್‌ಗಳಿಗೆ ಅಪ್‌ಲೋಡ್‌ ಮಾಡಿ ತೆಲಂಗಾಣ ಪೊಲೀಸರ ಕ್ರಮವನ್ನು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ. ಮತ್ತಷ್ಟು ಅತ್ಯುಗ್ರವಾಗಿ ಶಿಕ್ಷಿಸಬೇಕಿತ್ತು ಎಂದೂ ಕಮೆಂಟಿಸುತ್ತಿದ್ದಾರೆ.

ಶುಕ್ರವಾರ ಬೆಳಂಬೆಳಗ್ಗೆ 3 ಗಂಟೆ ಸುಮಾರಿಗೆ ಬಂಧಿತ ಎಲ್ಲ ನಾಲ್ಕು ಆರೋಪಿಗಳನ್ನು ಪಶುವೈದ್ಯೆಯ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ನಡೆಸಿದ ಜಾಗದ ಬಗ್ಗೆ ಮಹಜರು ಪಡೆಯಲು ಹುಬ್ಬಳ್ಳಿ ಮೂಲದ ವಿಶ್ವನಾಥ್‌ ಸಜ್ಜನರ್‌ ನೇತೃತ್ವದ ತಂಡ ಕರೆತಂದಿದ್ದರು. ತನಿಖೆ ದೃಷ್ಟಿಯಿಂದ ಕೃತ್ಯ ಸಂಭವಿಸಿದನ್ನು ಪುನಃ ಸೃಷ್ಟಿ ಮಾಡುವ ಕೆಲಸದಲ್ಲಿ ಪೊಲೀಸರು ನಿರತರಾಗಿದ್ದರು. ಇದ್ದಕ್ಕಿದ್ದಂತೆ ಆರೋಪಿಗಳು ಪೊಲೀಸರ ಕೈಯಲ್ಲಿದ್ದ ಶಸ್ತ್ರಾಸ್ತ್ರಗಳನ್ನು ಕಿತ್ತುಕೊಂಡಿದ್ದಾರೆ.

ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿ, ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಈ ಸಂದರ್ಭ ಪೊಲೀಸರು ಆತ್ಮರಕ್ಷಣೆಗೋಸ್ಕರ ಆರೋಪಿಗಳ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಅಂತಿಮವಾಗಿ ನಾಲ್ವರು ಆರೋಪಿಗಳು ನೆಲಕ್ಕೆ ಉರುಳಿದ್ದಾರೆ. ಆರೋಪಿಗಳನ್ನು ಎನ್‌ಕೌಂಟರ್‌ ಮಾಡಿದಾಗ ಸಮಯ 3.30 ಆಗಿತ್ತು.

ಪಶುವೈದ್ಯ ಮೇಲಿನ ಪೈಶಾಚಿಕ ಅತ್ಯಾಚಾರ ಮತ್ತು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್‌ ರಾವ್‌ ಭಾರಿ ಆಕ್ರೋಶ ವ್ಯಕ್ತ ಪಡಿಸಿದ್ದರು. ಅವರೇನು ಮನುಷ್ಯರಾ? ಅವರು ಪ್ರಾಣಿಗಳು ಎಂದು ರೋಶಾವೇಶದಿಂದ ಅಬ್ಬರಿಸಿದ್ದರು. ಈ ಪ್ರಕರಣಕ್ಕೆ ತಾರ್ಕಿಕ ಅಂತ್ಯವನ್ನು ಶೀಘ್ರದಲ್ಲೇ ನೀಡುವ ಭರವಸೆಯನ್ನು ನೀಡಿದ್ದರು. ತೆಲಂಗಾಣ ಪೊಲೀಸರ ಶಕ್ತಿಯೇನು ಎಂಬುದನ್ನು ತಿಳಿಯಪಡಿಸುವುದಾಗಿಯೂ ಹೇಳಿಕೆ ನೀಡಿದ್ದರು. ಈ ನಡುವೆ ರಸ್ತೆ ಸಾರಿಗೆ ಕಾರ್ಪೋರೇಶನ್‌ನಲ್ಲಿ ಮಹಿಳೆಯರಿಗಿದ್ದ ರಾತ್ರಿ ಪಾಳಿ ಕೆಲಸವನ್ನು ತಕ್ಷಣ ತೆರವುಗೊಳಿಸಿದ್ದರು.

ಹೈದರಾಬಾದ್‌ ಪಶುವೈದ್ಯಯನ್ನು ಪೈಶಾಚಿಕವಾಗಿ ಹತ್ಯೆಗೈದವರ ಸಾವಿನ ಸುದ್ದಿ ಕೇಳಲು ವಿದ್ಯಾರ್ಥಿನಿಯರು, ಮಹಿಳೆಯರು ಮತ್ತು ಒಟ್ಟು ರಾಷ್ಟ್ರದ ಮಂದಿಯೇ ಅದೆಷ್ಟು ಕಾತರದಿಂದ ಕಾದಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ