ಎಚ್ ಡಿಕೆಗೆ ರಮೇಶ್ ಜಾರಕಿಹೊಳಿಯೇ ಟಾರ್ಗೆಟ್; ಜೆಡಿಎಸ್ ಹೆಣೆದಿದೆ ಹೊಸ ತಂತ್ರ

ಬೆಂಗಳೂರು: ಕಾಂಗ್ರೆಸ್​-ಜೆಡಿಎಸ್​ ಮೈತ್ರಿ ಸರ್ಕಾರವನ್ನು ಬೀಳಿಸಲು ಕಾರಣವಾದ ಅನರ್ಹ ಶಾಸಕರಲ್ಲಿ ಬಹುತೇಕರು ಉಪಚುನಾವಣಾ ಕಣದಲ್ಲಿದ್ದಾರೆ. ಅನರ್ಹರನ್ನು ಸೋಲಿಸಲೇಬೇಕು ಎನ್ನುವ ಹಠಕ್ಕೆ ಬಿದ್ದಿರುವ ಮಾಜಿ ಮುಖ್ಯಮಂತ್ರಿಗಳಾದ ಎಚ್​ಡಿ ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ರಣತಂತ್ರ ರೂಪಿಸುತ್ತಿದ್ದಾರೆ. ಶಾಸಕರು ರೆಬೆಲ್​ ಆಗಲು ಮೂಲ ಕಾರಣ ಎಂದು ಹೇಳಲಾಗುತ್ತಿರುವ ರಮೇಶ್ ಜಾರಕಿಹೊಳಿಯನ್ನು ಸೋಲಿಸಲು ಈಗ ಎಚ್​ಡಿಕೆ ಹೊಸ ತಂತ್ರಗಾರಿಕೆ ರೂಪಿಸಿದ್ದಾರೆ.

ರಮೇಶ್​ ಜಾರಕಿಹೊಳಿ ಸ್ಪರ್ಧೆ ಮಾಡುತ್ತಿರುವ ಗೋಕಾಕ್​ ಕ್ಷೇತ್ರದಲ್ಲಿ ಜೆಡಿಎಸ್​​ ಬಲವೇ ಇಲ್ಲ. ಆದಾಗ್ಯೂ ಬೇರೆ ಪಕ್ಷದ ಅಭ್ಯರ್ಥಿಯನ್ನು ಸೆಳೆದು, ತಮ್ಮ ಪಕ್ಷದಿಂದ ಕಣಕ್ಕಿಳಿಸುವ ಮೂಲಕ ರಮೇಶ್ ಜಾರಕಿಹೊಳಿ ಸೋಲಿಸಲು ಎಚ್​ಡಿಕೆ ಮುಂದಾಗಿದ್ದಾರೆ.

ಜೆಡಿಎಸ್ ನಿಂದ ಅಶೋಕ್ ಪೂಜಾರಿ ಕಣಕ್ಕೆ ಇಳಿಯುತ್ತಿದ್ದಾರೆ. ಮೂಲತಃ ಬಿಜೆಪಿ ಆಗಿರುವ ಇವರು ಗೋಕಾಕ್​ ಕ್ಷೇತ್ರದ ಟಿಕೆಟ್​ ಆಕಾಂಕ್ಷಿ ಆಗಿದ್ದರು. ಬಿಜೆಪಿಯಲ್ಲಿ ಅನರ್ಹ ರಮೇಶ್​ ಜಾರಕಿಹೊಳಿಗೆ ಟಿಕೆಟ್​ ನೀಡಿದ ಹಿನ್ನೆಲೆಯಲ್ಲಿ, ಕಾಂಗ್ರೆಸ್​​ನಿಂದ ಟಿಕೆಟ್​ ಸಿಗಬಹುದು ಅಂದುಕೊಂಡಿದ್ದರು. ಆದರೆ, ಕಾಂಗ್ರೆಸ್​ ಲಖನ್​ ಜಾರಕಿಹೊಳಿಗೆ ಮಣೆ ಹಾಕಿತ್ತು. ಹೀಗಾಗಿ ಅಶೋಕ್​ರನ್ನು ಜೆಡಿಎಸ್​ನಿಂದ ಕಣಕ್ಕೆ ಇಳಿಸುತ್ತಿದ್ದಾರೆ ಕುಮಾರಸ್ವಾಮಿ.

ಇಂದು ಅಶೋಕ್ ಪೂಜಾರಿ‌ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಅಶೋಕ್ ಪೂಜಾರಿ ನಾಮಪತ್ರ ಸಲ್ಲಿಕೆಯಲ್ಲಿ ಎಚ್​​ಡಿಕೆ ಪಾಲ್ಗೊಳ್ಳಲಿದ್ದಾರೆ. ಬಳಿಕ ಅಶೋಕ್​ ಪೂಜಾರಿ ಪರ ಅವರು ಮತಯಾಚನೆ ಮಾಡಲಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ