ರಾಜ್ಯದಲ್ಲಿ ನಡೆಯಲಿದೆಯಾ 2ನೇ ಹಂತದ ಆಪರೇಷನ್ ಕಮಲ?; ಜೆಡಿಎಸ್​ ಶಾಸಕ ಬಿಚ್ಚಿಟ್ಟ ರಹಸ್ಯವೇನು?

ಮಂಡ್ಯ: ರಾಜ್ಯದಲ್ಲಿ ಬಿಜೆಪಿಯಿಂದ ಮತ್ತೆ ಆಪರೇಷನ್​ ಕಮಲ ನಡೆಯಲಿದೆಯಾ ಎಂಬ ಅನುಮಾನ ಶುರುವಾಗಿದೆ. ಆಪರೇಷನ್ ಕಮಲ ತಡೆಯಲು ಮುಂದಾದ ಜೆಡಿಎಸ್​ ಸಂಚು ಕೊನೆ ಕ್ಷಣದಲ್ಲಿ ಕೈತಪ್ಪಿದೆ ಎಂದು ತಿಳಿದು ಬಂದಿದೆ. ಯಾಕೆಂದರೆ ಮಂಡ್ಯದ ಜೆಡಿಎಸ್​ ಶಾಸಕ ಸುರೇಶ್​ಗೌಡ ಬಿಜೆಪಿಯ ಎರಡನೇ ಹಂತದ ಆಪರೇಷನ್​ ಕಮಲದ ರಹಸ್ಯ ಬಿಚ್ಚಿಟ್ಟಿದ್ದಾರೆ. ಈ ಬಾರಿಯ ಉಪಚುನಾವಣೆಯಲ್ಲಿ ಬಿಜೆಪಿಗೆ ನಿರೀಕ್ಷಿತ ಸ್ಥಾನ ಬರಲ್ಲ. ಆ ಕಾರಣಕ್ಕಾಗಿ ರಾಜ್ಯದಲ್ಲಿ ಮತ್ತೆ 2ನೇ ಹಂತದ ಆಪರೇಷನ್​ ಕಮಲ ನಡೆಯಬಹುದು ಎಂಬ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ನಾಗಮಂಗಲದಲ್ಲಿ ಮಾತನಾಡಿದ ಅವರು,  ಈ ಬಾರಿಯ ಉಪಚುನಾವಣೆಯಲ್ಲಿ ಬಿಜೆಪಿಗೆ ನಿರೀಕ್ಷಿತ ಸ್ಥಾನ ಬರಲ್ಲ. ಆ ಕಾರಣಕ್ಕಾಗಿ ರಾಜ್ಯದಲ್ಲಿ ಮತ್ತೆ 2ನೇ ಹಂತದ ಆಪರೇಷನ್​ ಕಮಲ ನಡೆಯಬಹುದು. ಈ ಆಪರೇಷನ್​ ಕಮಲ ತಡೆಯಲು ನಾವೇ ಬಿಜೆಪಿಗೆ ಬೆಂಬಲ ನೀಡಲು ನಿರ್ಧರಿಸಿದ್ದೆವು. ಅವರು ನಮ್ಮನ್ನು ಗೌರವಯುತವಾಗಿ ನಡೆಸಿಕೊಂಡರೆ, ಜೆಡಿಎಸ್​ ಪಕ್ಷ ಬಿಜೆಪಿಗೆ ಸಪೋರ್ಟ್​ ಮಾಡಲು ನಿರ್ಧರಿಸಿತ್ತು. ಆದರೆ ಪ್ರಸ್ತುತ ಅವರು ನಮ್ಮನ್ನು ನಡೆಸಿಕೊಳ್ಳುವ ರೀತಿ ನೋಡುತ್ತಿದ್ದರೆ ಅದು ಕಷ್ಟ. ಬಿಜೆಪಿಯವರು ನಮ್ಮ ವಿರುದ್ಧ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ ಎನಿಸುತ್ತದೆ ಎಂಬ ಶಂಕೆ ವ್ಯಕ್ತಪಡಿಸಿದ್ದಾರೆ.

2017-18ರಲ್ಲಿ ಕೊಟ್ಟ ಅನುದಾನ, ಅಗ್ರಿಮೆಂಟ್​ ಆಗಿದ್ದ ಕಾಮಗಾರಿ ಎಲ್ಲವನ್ನೂ ತಡೆದಿದ್ದಾರೆ. ಇದೆಲ್ಲವನ್ನು ನೋಡುತ್ತಿದ್ದರೆ ಅವರಿಗೆ ಅಧಿಕಾರ ಬೇಕು, ಉಳಿದಿದ್ದೆಲ್ಲಾ ಬೇಡ ಎನ್ನವ ಹಾಗೆ ಕಾಣಿಸುತ್ತಿದೆ. ಈ ಮುಂಚಿನಿಂದಲೂ ನಮಗೆ ಬಿಜೆಪಿ ಸೇರುವಂತೆ ಆಫರ್ ಬರುತ್ತಿದೆ. ನಮ್ಮ ಪಕ್ಷದಿಂದ ಯಾವ ಶಾಸಕರು ಬಿಜೆಪಿಗೆ ಹೋಗಲ್ಲ. ಇದೇ ಪರಿಸ್ಥಿತಿ ಎಷ್ಟು ದಿನ ಇರುತ್ತೆ ಅಂತ ನೋಡೋಣ. ಅಲ್ಲಿಯವರೆಗೂ ಎಲ್ಲವನ್ನೂ ಎದುರಿಸುತ್ತೇವೆ ಎಂದು ಸುರೇಶ್​ಗೌಡ ಹೇಳಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ