ಯುವ ದಸರಾ ವೇದಿಕೆಯಲ್ಲೇ ನಿವೇದಿತಾ-ಚಂದನ್ ಶೆಟ್ಟಿ ನಿಶ್ಚಿತಾರ್ಥ; ಸೋಷಿಯಲ್ ಮೀಡಿಯಾದಲ್ಲಿ ಟೀಕೆಗಳ ಸುರಿಮಳೆ

ಮೈಸೂರು: ಬಿಗ್ ಬಾಸ್ ಸೀಸನ್ ಫೈವ್ನಲ್ಲಿ ರೋಮ್ಯಾಂಟಿಕ್ ಜೋಡಿಯಾಗಿ ಹೆಸರು ಮಾಡಿದ್ದ ಕನ್ನಡ ರ್ಯಾಪರ್ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅವರು ಯುವ ದಸರಾ ವೇದಿಕೆಯಲ್ಲೇ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಸೀಸನ್ ವಿನ್ನರ್ ಚಂದನ್ ಶೆಟ್ಟಿ ಅವರು ಕಾರ್ಯಕ್ರಮದ ವೇದಿಕೆಯಲ್ಲೇ ನಿವೇದಿತಾ ಗೌಡ ಅವರಿಗೆ ಪ್ರೊಪೋಸ್ ಮಾಡಿದ್ದಾರೆ. ನಿನ್ನೆ ರಾತ್ರಿ ಇವರಿಬ್ಬರದ್ದು ಪ್ರೊಪೋಸ್ಗಷ್ಟೇ ಸೀಮಿತವಾಗದೇ ಎಂಗೇಜ್ಮೆಂಟ್ ಕೂಡ ಆಗಿದೆ. ರಾತ್ರಿ 11ಗಂಟೆಗೆ ಮುಗಿಯಬೇಕಿದ್ದ ಯುವ ದಸರಾ ಕಾರ್ಯಕ್ರಮವು ಇವರಿಬ್ಬರ ನಿಶ್ಚಿತಾರ್ಥದಿಂದಾಗಿ ಒಂದು ಗಂಟೆ ತಡವಾಗಿ ಮುಕ್ತಾಯಗೊಂಡಿದೆ.

ನಿನ್ನೆಯ ಕಾರ್ಯಕ್ರಮದ ಮಧ್ಯದಲ್ಲಿ ಚಂದನ್ ಶೆಟ್ಟಿ ಅವರು ತಾನು ನಿವೇದಿತಾ ಅವರನ್ನು ಮದುವೆಯಾಗುತ್ತಿರುವುದಾಗಿ ಘೋಷಿಸಿದರು. ವೇದಿಕೆಯಲ್ಲಿ ಪ್ರೇಕ್ಷಕರ ಸಮ್ಮುಖದಲ್ಲೇ ನಿವೇದಿತಾಗೆ ಪ್ರೊಪೋಸ್ ಮಾಡಿದ ಚಂದನ್ ತನ್ನ ಪ್ರಿಯತಮೆಗೆ ಉಂಗುರ ಕೂಡ ತೊಡಿಸಿ ಆಲಂಗಿಸಿದರು. ಇಬ್ಬರೂ ಪರಸ್ಪರ ಮುತ್ತನ್ನೂ ವಿನಿಮಯ ಮಾಡಿಕೊಂಡರು.

ನಿವೇದಿತಾ ಗೌಡ, ಚಂದನ್ ಶೆಟ್ಟಿ ಅವರ ನಿಶ್ಚಿತಾರ್ಥ ಬಹಳ ರೋಮ್ಯಾಂಟಿಕ್ ಆಗಿದ್ದಂತೂ ಹೌದು. ಆದರೆ, ಯುವ ದಸರಾದಂಥ ವೇದಿಕೆಯನ್ನು ದುರ್ಬಳಕೆ ಮಾಡಿಕೊಂಡ ವಿವಾದವೂ ಅವರಿಬ್ಬರನ್ನು ಸುತ್ತುವರಿದಿದೆ. ಖಾಸಗಿ ಕಾರ್ಯಕ್ರಮದಲ್ಲಿ ಎಂಗೇಜ್ಮೆಂಟ್ ಮಾಡಿಕೊಳ್ಳುವುದನ್ನು ಬಿಟ್ಟು ದಸರಾ ವೇದಿಕೆಯನ್ನು ಬಳಕೆ ಮಾಡಿಕೊಂಡಿದ್ದು ವ್ಯಾಪಕ ಟೀಕೆಗೂ ಕಾರಣವಾಗಿದೆ.
ಗೌಡ-ಶೆಟ್ಟಿ ಜೋಡಿ ದಸರಾ ವೇದಿಕೆಯಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳುವ ಸಂಗತಿಯನ್ನು ಯುವ ದಸರಾ ಉಪಸಮಿತಿಗೆ ತಿಳಿಸಿರಲಿಲ್ಲವಂತೆ. ನಿನ್ನೆಯ ಕಾರ್ಯಕ್ರಮದ ಪಟ್ಟಿಯಲ್ಲಿ ಚಂದನ್ ಶೆಟ್ಟಿ ಅವರ ಹಾಡುಗಾರಿಕೆ ಇತ್ತು. ನಿವೇದಿತಾ ಗೌಡ ಅವರು ವೇದಿಕೆ ಏರುವುದು ನಿಗದಿಯಾಗಿರಲಿಲ್ಲ. ಆದರೂ ಅವರಿಗೆ ವೇದಿಕೆ ಏರಲು ಅವಕಾಶ ಮಾಡಿಕೊಟ್ಟಿದ್ದು ಯಾಕೆ ಎಂಬ ಪ್ರಶ್ನೆ ಎದ್ದಿದೆ. ಮೈಸೂರು ಜಿಲ್ಲಾ ಪೊಲೀಸ್ ಅಧೀಕ್ಷಕ ರಿಶ್ಯಂತ್ ಅವರು ಉಪ ವಿಶೇಷಾಧಿಕಾರಿಯಾಗಿರುವ ಯುವ ದಸರಾ ಉಪಸಮಿತಿ ನಿರ್ಲಕ್ಷ್ಯ ಇದಕ್ಕೆ ಕಾರಣವೆಂದು ಹೇಳಲಾಗುತ್ತಿದೆ. ಬೇರೆ ದಿನಗಳಲ್ಲಾದರೆ ರಾತ್ರಿ 11ಗಂಟೆಗೆ ಸರಿಯಾಗಿ ಕಾರ್ಯಕ್ರಮ ಮುಗಿಸಲು ಕಟ್ಟಪ್ಪಣೆ ಹೊರಡಿಸುವ ಸಮಿತಿಯು ಸೆಲಬ್ರಿಟಿಗಳಿಗೋಸ್ಕರ ಒಂದು ಗಂಟೆ ಹೆಚ್ಚುವರಿ ಸಮಯ ನೀಡಿದ್ದು ಯಾಕೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನಿಸಲಾಗುತ್ತಿದೆ.
ಸೋಷಿಯಲ್ ಮೀಡಿಯಾದಲ್ಲಿ ನಿವೇದಿತಾ ಗೌಡ ಮತ್ತು ಚಂದನ್ ಶೆಟ್ಟಿ ಇಬ್ಬರನ್ನೂ ಟ್ರೋಲ್ ಮಾಡಲಾಗುತ್ತಿದೆ. ದಸರಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಅವರನ್ನೂ ಟ್ರೋಲಿಗರು ಬಿಟ್ಟಿಲ್ಲ. ನೆರೆ ಪರಿಹಾರಕ್ಕೆ ದುಡ್ಡಿಲ್ಲ ಎಂದವರು ಸೆಲಬ್ರಿಟಿಗಳ ನಿಶ್ಚಿತಾರ್ಥಕ್ಕೆ ಎಲ್ಲಿಂದ ದುಡ್ಡು ಬಂದು ಎಂದು ಕೆಲ ವ್ಯಕ್ತಿಗಳು ಪ್ರಶ್ನಿಸಿದ್ದಾರೆ. ದಸರಾದಲ್ಲಿ ಮದುವೆ, ಆಹಾರ ಮೇಳದಲ್ಲಿ ಬೀಗರ ಊಟ, ಯುವ ದಸರಾದಲ್ಲಿ ನಿಶ್ಚಿತಾರ್ಥ ಇತ್ಯಾದಿ ಥರಹಾವೇರಿ ಸ್ಟೇಟಸ್ ಮತ್ತು ಪೋಸ್ಟ್ ಹಾಕಿ ಸೋಷಿಯಲ್ ಮೀಡಿಯಾದಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲಾಗುತ್ತಿದೆ.

ಬಿಗ್ ಬಾಸ್-5 ಕಾರ್ಯಕ್ರಮ ವೇಳೆಯಿಂದಲೂ ನಿವೇದಿತಾ ಗೌಡ ಮತ್ತು ಚಂದನ್ ಶೆಟ್ಟಿ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಆ ಸೀಸನ್​ನ ವಿನ್ನರ್ ಚಂದನ್ ಶೆಟ್ಟಿ ಅವರು ನಿವೇದಿತಾ ಅವರನ್ನು ವರಿಸುತ್ತಾರೆಂಬ ಸುದ್ದಿ ಆಗಿನಿಂದಲೇ ಚಾಲನೆಯಲ್ಲಿತ್ತು. ಈಗ ಅವರ ವಿವಾಹಕ್ಕೆ ಮುಹೂರ್ತ ಫಿಕ್ಸ್ ಆಗುವುದು ನಿಶ್ಚಿತವಾಗಿದೆ. ನಿನ್ನೆ ಯುವ ದಸರಾ ವೇದಿಕೆಯಲ್ಲಿ ನಿವೇದಿತಾಗೆ ಪ್ರೊಪೋಸ್ ಮಾಡಿ ಉಂಗುರ ತೊಡಿಸಿದ್ದ ಚಂದನ್ ಶೆಟ್ಟಿ ಇವತ್ತು ಬೆಳ್ಳಂಬೆಳಗ್ಗೆ ನಿವೇದಿತಾ ಮನೆಗೆ ಹೋಗಿ ಅವರ ಪೋಷಕರನ್ನು ಭೇಟಿಯಾಗಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ