ಚಿನ್ನದ ಅಂಬಾರಿ ಹೊರುವ ಕ್ಯಾಪ್ಟನ್ ಅರ್ಜುನನಿಗೆ ಇಂದು ತಾಲೀಮು

ಮೈಸೂರು, ಸೆ.19- ದಸರಾ ಉತ್ಸವದ ಪ್ರಮುಖ ಆಕರ್ಷಣೆಯಾದ ಚಿನ್ನದ ಅಂಬಾರಿ ಹೊರುವ ಕ್ಯಾಪ್ಟನ್ ಅರ್ಜುನನಿಗೆ ಇಂದು ತಾಲೀಮು ಕೊಡಲಾಯಿತು.

750 ಕೆ.ಜಿ ತೂಕದ ಅಂಬಾರಿಯನ್ನು ಹೊತ್ತು ಜಂಬೂ ಸವಾರಿ ದಿನ ಅರ್ಜುನ ಸಾಗಲಿದ್ದಾನೆ. ಹಾಗಾಗಿ ಇಂದು 350 ಕೆ.ಜಿ. ತೂಕದ ಮರದ ಅಂಬಾರಿ ಹಾಗೂ 300 ಕೆ.ಜಿ. ತೂಕದ ಮರಳು ಮೂಟೆಯನ್ನು ಅರ್ಜುನನ ಬೆನ್ನಿಗೆ ಕಟ್ಟಿ ಕೊಂಡೊಯ್ಯಲಾಯಿತು.

ಅರಮನೆಯ ಆವರಣದಲ್ಲಿರುವ ಕ್ರೇನ್ ಮೂಲಕ ಅರ್ಜುನನಿಗೆ ಹೌಡಾ (ಮರದ ಅಂಬಾರಿ) ಮತ್ತು ಮರಳು ಮೂಟೆ ಹೊರಿಸಲಾಯಿತು.

ಅರಮನೆಯಿಂದ ರಾಜ ಗಾಂಭೀರ್ಯದಿಂದ ಸಾಗಿದ ಅರ್ಜುನ ಬನ್ನಿಮಂಟಪದವರಿಗೆ ಸಾಗಿ ಬಂದ ಅರ್ಜುನನೊಂದಿಗೆ ಅಭಿಮನ್ಯು ಸೇರಿ 11 ಆನೆಗಳು ಸಾಗಿದವು.

ವರಲಕ್ಷ್ಮಿಗರ್ಭಿಣಿಯಾಗಿರುವುದರಿಂದ ವಿಶ್ರಾಂತಿ ನೀಡಲಾಗಿದೆ. ಧನಂಜಯ ಬರಿ ತುಂಟಾಟದಲ್ಲೇ ತೊಡಗಿರುವುದರಿಂದ ಮಾರ್ಗ ಮಧ್ಯೆ ಏನಾದರೂ ಅವಘಡ ಸೃಷ್ಟಿಸಬಹುದೆಂಬ ಹಿನ್ನೆಲೆಯಲ್ಲಿ ಅವನನ್ನು ತಾಲೀಮಿನಿಂದ ದೂರ ಇಡಲಾಗಿದೆ.

ಹೌಡಾ (ಅಂಬಾರಿ) ಹೊರುವ ಮುನ್ನ ಅರ್ಜುನ ತ್ರಿನೇಶ್ವರ ದೇವಾಲಯಕ್ಕೆ ತೆರಳಿ ತ್ರಿನೇಶ್ವರನಿಗೆ ನಮಸ್ಕರಿಸಿ ನಂತರ ಮುಂಜೆ ಹೆಜ್ಜೆ ಹಾಕಿದುದು ವಿಶೇಷವಾಗಿತ್ತು.

ಅಂಬಾರಿ ಹೊತ್ತ ಅರ್ಜುನನ್ನು ಸಯ್ಯಾಜಿರಾವ್ ರಸ್ತೆಯ ಎರಡೂ ಕಡೆ ಸಾರ್ವಜನಿಕರು ಸಂಭ್ರಮದಿಂದ ವೀಕ್ಷಿಸಿದರು. ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ