ತಿಹಾರ್ ಜೈಲು ಸೆಲ್ ನಂಬರ್ 7 ರಲ್ಲಿ ಪಿ. ಚಿದಂಬರಂ ಸಾಮಾನ್ಯ ಕೈದಿ

ಹೊಸದಿಲ್ಲಿ: ಐಎನ್ಎಕ್ಸ್ ಮೀಡಿಯಾ ಹಗರಣದಲ್ಲಿ ಸಿಬಿಐ ತನಿಖಾ ಸಂಸ್ಥೆಯಿಂದ ಬಂಧನಕ್ಕೊಳಗಾಗಿರುವ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಇದೀಗ ತಿಹಾರ್ ಜೈಲು ನಂಬರ್ 7 ನಲ್ಲಿ ಸಾಮಾನ್ಯ ಕೈದಿ. 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಳಗಾಗಿ ಜೈಲು ಸೇರಿರುವ ಚಿದಂಬರಂ ಅವರನ್ನು ತಿಹಾರ್ ಜೈಲಿನಲ್ಲಿರುವ ಪ್ರತ್ಯೇಕ ಸೆಲ್ ನಲ್ಲಿ ಇಡಲಾಗಿದ್ದು ಝೆಡ್ ಭದ್ರತೆ ಒದಗಿಸಲಾಗಿದೆ. ಆರ್ಥಿಕ ಅಪರಾಧ ಆರೋಪದಡಿಯಲ್ಲಿ ಬಂಧನಕ್ಕೊಳಗಾದವರನ್ನು ಈ ಜೈಲಿನಲ್ಲಿ ಇಡಲಾಗುತ್ತದೆ.

ವಿಐಪಿ ಕೈದಿಯಾಗಿರುವ ಚಿದಂಬರಂ ಅವರಿಗೆ ವಿಶೇಷ ಸೌಲಭ್ಯಗಳನ್ನು ಒದಗಿಸಿಕೊಡಲಾಗಿಲ್ಲ. ಚಿದಂಬರಂ ಪರ ವಕೀಲರ ಕೋರಿಕೆಯಂತೆ ಟಿವಿ, ಜೈಲಿನ ಲೈಬ್ರೆರಿ ಬಳಸುವ ಅವಕಾಶ ಹಾಗೂ ಪಾಶ್ಚಾತ್ಯ ಶೈಲಿಯ ಶೌಚಾಲಯ ಸೌಲಭ್ಯವನ್ನಷ್ಟೇ ನೀಡಲಾಗಿದೆ.

ಜೈಲಿನ ಮೊದಲ ದಿನ ರಾತ್ರಿ ಚಿದಂಬರಂ ಮಿತ ಆಹಾರ ಸೇವಿಸಿ ಔಷಧವನ್ನು ತೆಗೆದುಕೊಂಡಿದ್ದಾರೆ ಎಂದು ಜೈಲು ಮೂಲಗಳು ತಿಳಿಸಿವೆ. ಜೈಲಿನಲ್ಲಿ ಪ್ರತಿದಿನ 7 ರಿಂದ 8 ಗಂಟೆಯ ಒಳಗಾಗಿ ಕೈದಿಗಳಿಗೆ ಊಟ ನೀಡಲಾಗುತ್ತದೆ. ನಿತ್ಯ ರೋಟಿ, ದಾಲ್ ಹಾಗೂ ತರಕಾರಿ ಪಲ್ಯ ನೀಡಲಾಗುತ್ತದೆ.

ಪುತ್ರ ಬಂಧಿಯಾಗಿದ್ದ ಕೊಠಡಿಯಲ್ಲಿ ಇದೀಗ ಅಪ್ಪನ ಸರದಿ !

ನ್ಯಾಯಾಂಗ ಬಂಧನಕ್ಕೊಳಗಾಗಿ ತಿಹಾರ್ ಜೈಲು ಸೇರಿರುವ ಪಿ.ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ಕೂಡಾ ಐಎನ್ಎಕ್ಷ್ ಮೀಡಿಯಾ ಹಗರಣ ಪ್ರಕರಣದಲ್ಲಿ ಸಿಬಿಐನಿಂದ ಬಂಧನಕ್ಕೊಳಗಾಗಿದ್ದರು.

ವಿಶೇಷ ಏನಂದರೆ, ಪುತ್ರ ಕಾರ್ತಿ ಇದ್ದ ಜೈಲು ಕೊಠಡಿಯಲ್ಲಿ ಇದೀಗ ಪಿ.ಚಿದಂಬರಂ ಬಂಧಿಯಾಗಿದ್ದಾರೆ. ಜೊತೆಗೆ, ಅಗಸ್ತಾ ವೆಸ್ಟ್ ಲ್ಯಾಂಡ್ ಹಾಗೂ ಬ್ಯಾಂಕ್ ಹಗರಣ ಆರೋಪದಡಿಯಲ್ಲಿ ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್ ನಾಥ್ ಸಹೋದರ ಅಳಿಯ ರತುಲ್ ಪುರಿ ಕೂಡಾ ಜೈಲಿನ ಇದೇ ಸೆಲ್ ನಲ್ಲಿ ಬಂಧಿಯಾಗಿದ್ದರು.

ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ಮಾಜಿ ಕೇಂದ್ರ ಸಚಿವ ಪಿ. ಚಿದಂಬರ್ ಅವರನ್ನು ದೆಹಲಿಯ ವಿಶೇಷ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಅವರು 19 ರ ವರೆಗೆ ತಿಹಾರ್ ಜೈಲಿನಲ್ಲಿ ಇರಬೇಕಾಗುತ್ತದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ