ರಾಜ್ಯದಲ್ಲಿ ಬೆರಳೆಣಕೆಯಷ್ಟು ಮಹಿಳಾ ಬ್ಯಾಂಕ್‍ಗಳು ಮಾತ್ರ ಉಳಿದಿವೆ-ಮಾಜೆ ಸಚಿವ ಎಚ್.ಕೆ.ಪಾಟೀಲ್

ಬೆಂಗಳೂರು, ಆ. 25- ಮಹಿಳಾ ಸಹಕಾರಿ ಬ್ಯಾಂಕ್‍ಗಳು ಲಾಭದ ಜೊತೆಗೆ ಮಹಿಳಾ ಉದ್ಯೋಗ ಸೃಷ್ಠಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಮಾಜಿ ಸಚಿವ ಎಚ್.ಕೆ.ಪಾಟೀಲ್ ಹೇಳಿದರು.

ಪುಟ್ಟಣ್ಣ ಚೆಟ್ಟಿ ಪುರ ಭವನದಲ್ಲಿ ಏರ್ಪಡಿಸಿದ್ದ ಲಕ್ಷ್ಮೀ ಮಹಿಳಾ ಸಹಕಾರ ಬ್ಯಾಂಕ್ ನಿಯಮಿತದ ರಜತ ಮಹೋತ್ಸವದಲ್ಲಿ ಮಾತನಾಡಿದ ಅವರು, ಅರ್ಬನ್ ಬ್ಯಾಂಕ್‍ಗಳು ಬೆಳೆದ ವೇಗದಲ್ಲಿ ಮಹಿಳಾ ಬ್ಯಾಂಕ್‍ಗಳು ಬೆಳೆದಿಲ್ಲ. ಇದು ದೇಶದ ದುರ್ದೈವದ ಸಂಗತಿ.ಈ ಹಿಂದೆ ರಾಜ್ಯದಲ್ಲಿ ಮಹಿಳಾ ಬ್ಯಾಂಕ್ ಸ್ಥಾಪನೆಗೆ ಆದ್ಯತೆ ನೀಡಲಾಗಿತ್ತು.ಆದರೆ ನಿರೀಕ್ಷಿತ ಮಟ್ಟದಲ್ಲಿ ಬೆಳೆದು ಬರಲಿಲ್ಲ. ಸದ್ಯ ರಾಜ್ಯದಲ್ಲಿ ಬೆರಳೆಣಕೆಯಷ್ಟು ಮಹಿಳಾ ಬ್ಯಾಂಕ್‍ಗಳು ಮಾತ್ರ ಉಳಿದಿವೆ ಎಂದರು.
ಇತ್ತೀಚೆಗೆ ಬ್ಯಾಂಕ್‍ಗಳ ನಿಬಂಧನೆಗಳನ್ನು ಸರಳಿಕರಣಗೊಳಿಸಲಾಗಿದ್ದು, ಉನ್ನತಿಯತ್ತ ಮಹಿಳಾ ಬ್ಯಾಂಕ್ ಹೆಜ್ಜೆ ಇಡಬೇಕಾಗಿದೆ.ರಾಜ್ಯದಲ್ಲಿ 264 ಸಹಕಾರಿ ಬ್ಯಾಂಕ್‍ಗಳಿದ್ದು, 400 ಕೋಟಿಗೂ ಹೆಚ್ಚು ಲಾಭ, ಐದು ಲಕ್ಷ ಕೋಟಿ ಬಂಡವಾಳದಲ್ಲಿ ಹೆಜ್ಜೆ ಹಾಕಲಾಗುತ್ತಿವೆ. ಇದು ಅತ್ಯದ್ಭುತ ಬೆಳವಣಿಗೆಯಾಗಿದೆ ಎಂದರು.

ಪಟ್ಟಣ ಸಹಕಾರಿ ಸಂಘದ ಸದಸ್ಯ ಕೃಷ್ಣಾ ಮಾತನಾಡಿ, ಪ್ರಾರಂಭದಲ್ಲಿ ಉನ್ನತ ಮಟ್ಟಕ್ಕೆ ಬೆಳೆಯುವ ಸಹಕಾರಿ ಬ್ಯಾಂಕ್‍ಗಳು ನಂತರದಲ್ಲಿ ಆರ್‍ಬಿಐನ ಕಠಿಣ ನಿಬಂಧನೆಗಳಿಂದ ಕ್ಷೀಣಿಸುತ್ತಿವೆ. ಹೀಗಾಗಿ ಸಹಕಾರಿ ಕ್ಷೇತ್ರದ ಅಭಿವೃದ್ದಿಗೆ ಆರ್‍ಬಿಐ ಸರಳ ನಿಬಂಧನೆಗಳನ್ನು ಜಾರಿಗೊಳಿಸಬೇಕು ಎಂದರು.
ಮಾಜಿ ಸಂಸದೆ ಡಾ. ಲೀಲಾದೇವಿ ಆರ್. ಪ್ರಸಾದ್ ಮಾತನಾಡಿ, ಕರ್ನಾಟಕ ಸಹಕಾರ ಕ್ಷೇತ್ರದಲ್ಲಿ ಮಹಿಳೆಯರ ಏಳಿಗೆಗಾಗಿ ಪ್ರತೀ ಜಿಲ್ಲೆಯಲ್ಲಿ ಮಹಿಳಾ ಬ್ಯಾಂಕ್ ಹುಟ್ಟು ಹಾಕಲಾಗಿದೆ.ಮಹಿಳಾ ಬ್ಯಾಂಕ್‍ಳು ಯಾವ ರಾಷ್ಟ್ರೀಯ ಬ್ಯಾಂಕ್‍ಳಿಗೂ ಕಮ್ಮಿಯಿಲ್ಲದಂತೆ ಮುನ್ನಡೆಯುತ್ತಿವೆ ಎಂದರು.

ಸಹಕಾರಿ ಬ್ಯಾಂಕ್‍ಗಳಲ್ಲಿ ಹಣ ಹೂಡಿಕೆ ಮಾಡಿದ ಪ್ರತಿಯೊಬ್ಬರೂ ಸದಸ್ಯತ್ವದ ಹಕ್ಕಿರುತ್ತದೆ.ಆದರೆ ರಾಷ್ಟ್ರೀಯ ಬ್ಯಾಂಕ್‍ಗಳಲ್ಲಿ ಆ ವ್ಯವಸ್ಥೆಯಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ, ಪಟ್ಟಣ ಸಹಕಾರಿ ಸಂಘದ ಸದಸ್ಯ ಕೃಷ್ಣಾ, ಬ್ಯಾಂಕ್ ಅಧ್ಯಕ್ಷೆ ವಿ.ಕಮಲಾ ನಟರಾಜನ್, ಸಂಸ್ಥಾಪಕ ಅಧ್ಯಕ್ಷೆ ಡಾ.ವಾಸವಿ ರಂಗಮಾಧಾಮ್, ಉಪಾಧ್ಯಕ್ಷೆ ಸವಿತಾ ಪ್ರಕಾಶ್, ನಿರ್ದೇಶಕರಾದ ಎ.ಎಂ.ತೇಜಾವತಿ, ಎ. ನಿರ್ಮಲಾ, ಆರ್.ಅಂಜಲಿ, ಪವಿತ್ರಾ ಶ್ರೀನಾಥ್, ವಿಜಯಲಕ್ಷ್ಮೀ, ಲತಾ ಶೇರ್ಖ, ಬಿ.ಪರ್ಜನಾ, ಕೆ.ಎಚ್.ಲಕ್ಷ್ಮೀ, ಆರ್.ಎಸ್. ಮಂಜುನಾಥ್, ವ್ಯವಸ್ಥಾಪಕ ಟಿ. ಗೋವಿಂದಯ್ಯ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ