ವ್ಯಕ್ತಿಗಿಂತ ಪಕ್ಷ ದೊಡ್ಡದು-ಜೆ.ಪಿ.ನಡ್ಡಾ

ಬೆಂಗಳೂರು,ಆ.22-ಸಚಿವ ಸ್ಥಾನ ಸಿಗದೆ ಅತೃಪ್ತಗೊಂಡಿರುವ ಶಾಸಕರ ಬ್ಲಾಕ್‍ಮೇಲ್‍ಗೆ ಯಾವುದೇ ಕಾರಣಕ್ಕೂ ಮಣಿಯದೆ ಸರ್ಕಾರವನ್ನು ಆತ್ಮಸ್ಥೈರ್ಯದಿಂದ ಮುನ್ನಡೆಸಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಬೆಂಬಲಕ್ಕೆ ಹೈಕಮಾಂಡ್ ನಿಂತಿದೆ.

ಒಂದು ಬಾರಿ ಶಾಸಕರ ಬ್ಲಾಕ್‍ಮೇಲ್‍ಗಳಿಗೆ ಬಗ್ಗಿದರೆ ಮುಂದೆ ಇದೇ ರೀತಿ ಒತ್ತಡದ ತಂತ್ರಗಳನ್ನು ಮುಂದುವರೆಸುತ್ತಲೇ ಇರುತ್ತಾರೆ. ಪಕ್ಷದ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಬೇಕು ಎಂದು ಸೂಚನೆ ಕೊಡಿ. ಒಂದು ವೇಳೆ ಅಷ್ಟಕ್ಕೂ ಮಣಿಯದಿದ್ದರೆ ನೀವು ಜಗ್ಗಲೇಬಾರದು ಎಂದು ಕೇಂದ್ರ ವರಿಷ್ಠರು ಬಿ.ಎಸ್.ವೈಗೆ ಧೈರ್ಯ ತುಂಬಿದ್ದಾರೆ.

2008ರಲ್ಲಿ ಇದೇ ರೀತಿ ಶಾಸಕರ ಬ್ಲಾಕ್‍ಮೇಲ್‍ಗೆ ಬಗ್ಗಿದ್ದರಿಂದಲೇ ಸರ್ಕಾರಕ್ಕೂ ಕೆಟ್ಟ ಹೆಸರು ಬಂದಿತ್ತು. ಅದೇ ಪಕ್ಷಕ್ಕೂ ಮುಳುವಾಯಿತು. ಪಕ್ಷದ ಚಿಹ್ನೆ ಮತ್ತು ನಮ್ಮದೇ ಬಿ ಫಾರಂ ಮೇಲೆ ಗೆದ್ದಿರುವವರು ಪಕ್ಷದ ಚೌಕಟ್ಟಿಗೆ ಒಳಪಡಬೇಕು. ವ್ಯಕ್ತಿಗಿಂತ ಪಕ್ಷ ದೊಡ್ಡದು ಎಂಬ ಸಂದೇಶವನ್ನು ಎಲ್ಲರಿಗೂ ತಿಳಿಸಬೇಕೆಂದು ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ ಬಿಎಸ್‍ವೈಗೆ ಸೂಚಿಸಿದ್ದಾರೆ.

ಸಂಪುಟ ವಿಸ್ತರಣೆಯಾದ ನಂತರ ಕಳೆದೆರಡು ದಿನಗಳಿಂದ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿರುವ ನಡ್ಡಾ, ಶಾಸಕರ ಬೇಡಿಕೆಗಳಿಗೆ ಸೊಪ್ಪು ಹಾಕದಂತೆ ಸಲಹೆ ಮಾಡಿದ್ದಾರೆ.

ಈ ಹಿಂದೆ ರೆಡ್ಡಿ ಸಹೋದರರು ಇದೇ ರೀತಿ ಕೆಲವು ಶಾಸಕರನ್ನು ಹೈದರಾಬಾದ್‍ಗೆ ಕರೆದುಕೊಂಡು ಹೋಗಿ ರೆಸಾರ್ಟ್‍ನಲ್ಲಿ ಕೂಡಿಟ್ಟರು. ಪರಿಣಾಮ ನಿಮ್ಮ ನಾಯಕತ್ವ, ಸರ್ಕಾರ ಮತ್ತು ಪಕ್ಷಕ್ಕೂ ಮಸಿ ಬಳಿಯುವ ಕೆಲಸವಾಯಿತು.

ಈಗ ಸಚಿವ ಸ್ಥಾನ ಸಿಗದಿರುವ ಕಾರಣಕ್ಕೆ ಅಸಮಾಧಾನಗೊಂಡಿರುವ ಶಾಸಕರ ಒತ್ತಡಕ್ಕೆ ಮಣಿದರೆ ಮುಂದೆ ಪಕ್ಷದಲ್ಲಿ ಇನ್ನೊಂದು ರೀತಿಯ ಬಣಗಳು ಸೃಷ್ಟಿಯಾಗುತ್ತವೆ. ಪ್ರಾರಂಭದಲ್ಲೇ ಇದನ್ನು ಚಿವುಟಿ ಹಾಕಬೇಕೆಂದು ಹೈಕಮಾಂಡ್ ಸ್ಪಷ್ಟ ಮಾತುಗಳಲ್ಲಿ ಹೇಳಿದೆ.

ಹೈಕಮಾಂಡ್‍ನಿಂದಲೇ ಸಂಪೂರ್ಣ ಬೆಂಬಲ ಸಿಗುತ್ತಿರುವ ಹಿನ್ನೆಲೆಯಲ್ಲಿ ಬಿಎಸ್‍ವೈ ಯಾವುದೇ ಶಾಸಕರ ಒತ್ತಡಕ್ಕೆ ಕ್ಯಾರೆ ಎನ್ನುತ್ತಿಲ್ಲ. ಮಂಗಳವಾರ ಮಧ್ಯಾಹ್ನದಿಂದಲೇ ಅಸಮಾಧಾನಿತರ ಜೊತೆ ಹಂತ ಹಂತವಾಗಿ ಮಾತುಕತೆ ಮೂಲಕ ಸಮಾಧಾನಪಡಿಸುವ ಪ್ರಯತ್ನವನ್ನು ಮಾಡಿದ್ದಾರೆ.

ಶಾಸಕರಾದ ರೇಣುಕಾಚಾರ್ಯ, ಉಮೇಶ್‍ಕತ್ತಿ, ಬಾಲಚಂದ್ರ ಜಾರಕಿ ಹೊಳಿ, ಮುರುಗೇಶ್‍ನಿರಾಣಿ, ತಿಪ್ಪಾರೆಡ್ಡಿ, ಗೂಳಿಹಟ್ಟಿ ಶೇಖರ್ ಸೇರಿದಂತೆ ಅನೇಕರ ಜೊತೆ ಈಗಾಗಲೇ ಸಭೆ ನಡೆಸಿ ಯಾವುದೇ ರೀತಿಯ ಪಕ್ಷವಿರೋಧಿ ಚಟುವಟಿಕೆ ಇಲ್ಲವೆ, ಭಿನ್ನಮತ ನಡೆಸಬಾರದೆಂದು ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾರೆ.

ಹೈಕಮಾಂಡ್ ಸೂಚನೆಯಂತೆ ಸಂಪುಟ ವಿಸ್ತರಣೆ ಮಾಡಲಾಗಿದೆ. ಇದಕ್ಕೆ ಎಲ್ಲರೂ ಒಪ್ಪಿಕೊಳ್ಳಬೇಕು. ಎರಡನೇ ಹಂತದ ವಿಸ್ತರಣೆಯಲ್ಲಿ ಯಾರ್ಯಾರೂ ಅವಕಾಶ ವಂಚಿತರಾಗಿದ್ದಾರೋ ಅವರೆಲ್ಲರಿಗೂ ಸ್ಥಾನಮಾನ ನೀಡಲಾಗುವುದು.

ಅನಗತ್ಯವಾಗಿ ಪ್ರತ್ಯೇಕ ಸಭೆಗಳನ್ನು ನಡೆಸುವುದು, ಮಾಧ್ಯಮಗಳಿಗೆ ಹೇಳಿಕೆ ನೀಡುವ ಮೂಲಕ ಮುಜುಗರ ಸೃಷ್ಟಿಸುವುದು ಮಾಡಬಾರದು. ಕ್ಷೇತ್ರದಲ್ಲಿ ಏನೇ ಕೆಲಸ, ಕಾರ್ಯಗಳಿದ್ದರೂ ನಾನು ಮಾಡಿಕೊಡುತ್ತೇನೆ. ಆದರೆ ಸರ್ಕಾರಕ್ಕೆ, ಇಲ್ಲವೆ ಪಕ್ಷಕ್ಕೆ ಮುಜುಗರ ತರುವ ಕೆಲಸ ಮಾಡಿದರೆ ಸಹಿಸುವುದಿಲ್ಲ. ರಾಜ್ಯದಲ್ಲಿ ಈಗಾಗಲೇ ಅತಿವೃಷ್ಟಿಯಿಂದಾಗಿ ಸಾಕಷ್ಟು ಜನರು ಸಂಕಷ್ಟದಲ್ಲಿದ್ದಾರೆ. ಅವರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸವನ್ನು ಮಾಡಬೇಕು ಎಂದು ಸಲಹೆ ಮಾಡಿದ್ದಾರೆ.

ಹೀಗಾಗಿಯೇ ಭಿನ್ನಮತೀಯರು ಅಸಮಾಧಾನವಿದ್ದರೂ ಬಹಿರಂಗವಾಗಿ ಹೇಳಿಕೊಳ್ಳದೆ ಬಿಸಿತುಪ್ಪವನ್ನು ಉಗುಳಲೂ ಆಗದ, ನುಂಗಲು ಆಗದ ಸ್ಥಿತಿಯಲ್ಲಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ