ಜ್ಯೋತಿಷಿಗೆ ಥಳಿಸಿದ ಮಹಿಳಾ ಸಂಘಟನೆಗಳ ಸದಸ್ಯೆಯರು

ಬೆಂಗಳೂರು, ಆ.21- ಪೂರ್ವಜನ್ಮದ ಕಥೆ ಹೇಳಿ ಯುವತಿಯ ಮನಪರಿವರ್ತನೆಗೆ ಯತ್ನಿಸಿದ್ದಾನೆಂದು ಆರೋಪಿಸಿ ಮಹಿಳಾ ಸಂಘಟನೆಗಳು ಜ್ಯೋತಿಷಿಯೊಬ್ಬರನ್ನು ಥಳಿಸಿ ಹನುಮಂತನಗರ ಠಾಣೆ ಪೊಲೀಸರಿಗೆ ಒಪ್ಪಿಸಿವೆ.

ನಗರದಲ್ಲಿ ವಾಸವಿರುವ ಕುಟುಂಬವೊಂದು ಮಗಳ ಮದುವೆ ಮಾಡಲು ಜ್ಯೋತಿಷಿಗಳನ್ನು ಸಂಪರ್ಕಿಸಿದ್ದಾಗ ಜ್ಯೋತಿಷಿಯೊಬ್ಬರ ಪರಿಚಯವಾಗಿತ್ತು.

ಈ ಜ್ಯೋತಿಷಿ ಇವರ ಮನೆಗೆ ಬಂದು ಯುವತಿಗೆ ಪೂರ್ವಜನ್ಮದ ಕಥೆ ಹೇಳಿ ತಾನು ಪೂರ್ವಜನ್ಮದಲ್ಲಿ ನಿನ್ನ ಗಂಡನಾಗಿದ್ದೆ ಎಂದು ಮನಪರಿವರ್ತಿಸಿದ್ದಾನೆ. ಈ ವಿಷಯ ತಿಳಿದು ಕಂಗಾಲಾದ ಪೋಷಕರು ಮಹಿಳಾ ಸಂಘಟನೆಗಳಿಗೆ ತಿಳಿಸಿದ್ದಾರೆ.

ಶ್ರೀನಿವಾಸನಗರದಲ್ಲಿ ವಾಸವಾಗಿರುವ ಜ್ಯೋತಿಷಿ ಮನೆಗೆ ಇಂದು ಬೆಳಗ್ಗೆ ಮಹಿಳಾ ಸಂಘಟನೆಗಳು ಧಾವಿಸಿ ಜ್ಯೋತಿಷಿಗೆ ಥಳಿಸಿ ನಂತರ ಹನುಮಂತನಗರ ಪೊಲೀಸರಿಗೆ ಒಪ್ಪಿಸಿದ್ದಾರೆ.

ಈ ನಡುವೆ ಯುವತಿಯ ತಂದೆ ಜ್ಯೋತಿಷಿ ವಿರುದ್ಧ ಹನುಮಂತನಗರ ಠಾಣೆಗೆ ಅರ್ಜಿ ಸಲ್ಲಿಸಿದ್ದು, ಈ ಅರ್ಜಿಯನ್ನು ಪೊಲೀಸರು ವಿಚಾರಣೆ ಮಾಡುತ್ತಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ