ಭಾರೀ ಮಳೆ ಮತ್ತು ಪ್ರವಾಹ ಪರಿಸ್ಥಿತಿ ಹಿನ್ನಲೆ-ಸುಮಾರು 10 ಸಾವಿರ ವಿದ್ಯಾರ್ಥಿಗಳ ಪರಿಸ್ಥಿತಿ ಅತಂತ್ರ

ಬೆಂಗಳೂರು,ಆ.17- ಭಾರೀ ಮಳೆ ಮತ್ತು ಪ್ರವಾಹ ಪರಿಸ್ಥಿತಿಯಿಂದ ಉತ್ತರ ಕರ್ನಾಟಕ, ಉತ್ತರ ಕನ್ನಡ ಜಿಲ್ಲೆಗಳ ಸುಮಾರು 10 ಸಾವಿರ ವಿದ್ಯಾರ್ಥಿಗಳ ಪರಿಸ್ಥಿತಿ ಅತಂತ್ರವಾಗಿದೆ.
ನೆರೆ ಹಾವಳಿಯಿಂದ ಮನೆಗಳು ಕೊಚ್ಚಿ ಹೋಗಿ, ಮನೆಗಳಿಗೆ ನೀರು ನುಗ್ಗಿ ತಮ್ಮ ವಿದ್ಯಾಭ್ಯಾಸದ ದಾಖಲೆಗಳು ನಾಶವಾಗಿರುವುದು ವಿದ್ಯಾರ್ಥಿಗಳ ಭವಿಷ್ಯವನ್ನು ಆತಂಕಕ್ಕೀಡು ಮಾಡಿವೆ.

ಬೆಳಗಾವಿ, ಬಾಗಲಕೋಟೆ, ಯಾದಗಿರಿ, ರಾಯಚೂರು ಜಿಲ್ಲೆಗಳ ನೂರಾರು ಗ್ರಾಮಗಳು ಜಲಾವೃತಗೊಂಡು ಮನೆಗಳು ಕುಸಿದು ಬಿದ್ದ ಪರಿಣಾಮ ವಿದ್ಯಾರ್ಥಿಗಳ ಅಂಕಪಟ್ಟಿ ಇನ್ನಿತರೆ ದಾಖಲೆಗಳು ನಾಶವಾಗಿರುವುದು ಪೆÇೀಷಕರನ್ನು ಮತ್ತು ವಿದ್ಯಾರ್ಥಿಗಳನ್ನು ಚಿಂತೆಗೀಡು ಮಾಡಿವೆ. ಹೊಸ ದಾಖಲೆಗಳನ್ನು ಪಡೆಯಲು ಹಣವೂ ಇಲ್ಲದೇ ಪರದಾಡುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ.

12 ಜಿಲ್ಲೆ, 86 ತಾಲೂಕುಗಳ 2000ಕ್ಕೂ ಹೆಚ್ಚು ಗ್ರಾಮಗಳು ನೆರೆ ಹಾವಳಿಯಿಂದ ತತ್ತರಿಸಿ ಹೋಗಿದ್ದು ಜನರ ಬದುಕು ದುಸ್ತರವಾದರೆ ವಿದ್ಯಾರ್ಥಿಗಳ ಪರಸ್ಥಿತಿ ಶೋಚನೀಯವಾಗಿದೆ.ಜೀವನವಿಡೀ ಓದಿ ಗಳಿಸಿದ ಪ್ರಮಾಣ ಪತ್ರಗಳು ನೀರಿನಲ್ಲಿ ತೋಯ್ದು ಹೋಗಿವೆ. ಕೆಲವೆಡೆ ಕೊಚ್ಚಿ ಹೋಗಿ ನಾಶವಾಗಿವೆ. ಇದು ಒಂದು ಗ್ರಾಮದ ಪರಿಸ್ಥಿತಿಯಲ್ಲ ಬಹುತೇಕ ಗ್ರಾಮಗಳಲ್ಲೂ ಇದೇ ಪರಿಸ್ಥಿತಿ ಕಂಡುಬಂದಿದೆ.ತಮ್ಮ ಜಮೀನು ಪತ್ರ, ಮನೆ ಪತ್ರ ಸೇರಿದಂತೆ ಇನ್ನಿತರೆ ದಾಖಲೆಗಳು ನಾಶವಾಗಿರುವುದರ ಜೊತೆ ವಿದ್ಯಾರ್ಥಿಗಳ ದಾಖಲೆಗಳೂ ನಾಶವಾಗಿರುವುದು ಆತಂಕವನ್ನು ಸೃಷ್ಠಿಸಿದೆ. ನಕಲು ಪ್ರತಿಗಳನ್ನು ಪಡೆಯಲು ವಿದ್ಯಾರ್ಥಿಗಳು ಪರದಾಡುತ್ತಿರುವ ಎದುರಾಗಿದೆ.

ಎಸ್‍ಎಸ್‍ಎಲ್‍ಸಿ, ಪಿಯುಸಿ, ಬಿಎ ಸೇರಿದಂತೆ ಇನ್ನಿತರ ಪ್ರಮಾಣ ಪತ್ರಗಳು ನಾಶವಾಗಿದ್ದು, ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ಡೋಲಾಯಮಾನವಾಗಿದೆ.ಒಂದೆಡೆ ಪರಿಹಾರ ಕೇಂದ್ರಗಳಲ್ಲಿ ಪರಿತಪಿಸುತ್ತಿರುವ ಪೆÇೀಷಕರು.ಮತ್ತೊಂದೆಡೆ ತಮ್ಮ ಭವಿಷ್ಯದ ದಾಖಲೆಗಳನ್ನು ಕಳೆದುಕೊಂಡು ವಿದ್ಯಾರ್ಥಿಗಳು ಚಿಂತಿತರಾಗಿದ್ದಾರೆ.

ರೋಣ ತಾಲೂಕು ಹೊಳೆಹಾಲೂರಿನಲ್ಲಿ ಸುಮಾರು 50 ಮನೆಗಳು ನೆಲಸಮವಾಗಿವೆ. ಇನ್ನೂ ಹಲವು ಮನೆಗಳು ಕುಸಿದು ಹೋಗುವ ಸ್ಥಿತಿಯಲ್ಲಿವೆ. ಮಲಪ್ರಭ ನದಿ ನೀರು ಉಕ್ಕಿ ಹರಿದು ಗ್ರಾಮ ಜಲಾವೃತಗೊಂಡ ಪರಿಣಾಮ ಮನೆಗಳೆಲ್ಲಾ ಬಿದ್ದು ಹೋಗಿ ಇಲ್ಲೂ ಕೂಡ ನೂರಾರು ವಿದ್ಯಾರ್ಥಿಗಳು ತಮ್ಮ ದಾಖಲೆಗಳಿಗಾಗಿ ಪರದಾಡುತ್ತಿದ್ದುದು ಕಂಡು ಬಂತು.
ಬೆಳಗಾವಿಯ ಅಥಣಿ, ರಾಯಭಾಗ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಇದೇ ಪರಿಸ್ಥಿತಿ ಎದುರಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ