ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್‍ರವರಿಗೆ ವೀರಚಕ್ರ ಪ್ರಶಸ್ತಿ

ನವದೆಹಲಿ, ಆ.8- ಅಂತಾರಾಷ್ಟ್ರೀಯ ಗಡಿ ರೇಖೆಯಲ್ಲಿ ಫೆ.27ರಂದು ಪಾಕಿಸ್ತಾನದ ಎಫ್-16 ಯುದ್ಧ ವಿಮಾನ ಹೊಡೆದುರುಳಿಸಿ ಪರಾಕ್ರಮ ತೋರಿದ ಭಾರತೀಯ ವಾಯು ಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರಿಗೆ ವೀರಚಕ್ರ ಪ್ರಶಸ್ತಿಯನ್ನು ನೀಡಿ ಸರ್ಕಾರ ಘೋಷಿಸುವ ಸಾಧ್ಯತೆ ಇದೆ.

ಐದು ಮಿರಾಜ್ -2000 ಯುದ್ಧ ವಿಮಾನಗಳು ಪಾಕಿಸ್ತಾನಕ್ಕೆ ನುಗ್ಗಿ ಅಲ್ಲಿನ ಉಗ್ರ ನೆಲೆಗಳನ್ನು ಧ್ವಂಸಗೊಳಿಸಿದ ನಂತರ ಪಾಕಿಸ್ತಾನದ ಎಫ್-16 ಜೆಟ್ ವಿಮಾನ ಹೊಡೆದುರುಳಿದ ಶೌರ್ಯಕ್ಕಾಗಿ ವಾಯು ಪಡೆಯ ಈ ಪದಕವನ್ನು ನೀಡಲಾಗುತ್ತಿದೆ.

ಫೆ.14ರಂದು ನಡೆದ ಪುಲ್ವಾಮಾ ದಾಳಿಯ ಪ್ರತೀಕಾರವಾಗಿ ಭಾರತೀಯ ಸೇನಾ ಪಡೆ ಪಾಕಿಸ್ತಾನದ ಬಾಲ್‍ಕೋಟ್‍ನಲ್ಲಿ ಸರ್ಜಿಕಲ್ ದಾಳಿ ನಡೆಸಿ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿತ್ತು. ಬಳಿಕ ಭಾರತೀಯ ವಾಯು ಗಡಿ ದಾಟಿ ಬಂದ ಪಾಕಿಸ್ತಾನದ ಎಫ್-16 ಯುದ್ಧ ವಿಮಾನ ಜೊತೆಗೆ ಕಾಳಗ ನಡೆಸಿದ್ದ ಅಭಿನಂದನ್ ಅದನ್ನು ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿದ್ದರು.

ಅದಾದ ನಂತರ ಪ್ಯಾರಾಚೂಟ್ ಮೂಲಕ ಪಾಕಿಸ್ತಾನದ ನೆಲಕ್ಕೆ ಧುಮುಕ್ಕಿದ್ದ ಅವರನ್ನು ಅಲ್ಲಿನ ಸೇನೆ ಬಂಧಿಸಿತ್ತು. 60 ಗಂಟೆಗಳ ನಂತರ ಮಾ.1ರಂದು ಭಾರತಕ್ಕೆ ವಾಪಸ್ ಕಳುಹಿಸಿತ್ತು.ವೀರಚಕ್ರ ಯೋಧರಿಗೆ ನೀಡಲಾಗುವ ಮೂರನೆಯ ಅತ್ಯುನ್ನತ ಪ್ರಶಸ್ತಿಯಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ