ಬಿಬಿಎಂಪಿಯಿಂದ ನಗರದಲ್ಲಿ ಬೇಕಾಬಿಟ್ಟಿ ಸ್ಕೈ ವಾಕ್ ನಿರ್ಮಾಣ-ಸಂಚಾರಿ ಪೊಲೀಸರ ಆಕ್ರೋಶ

ಬೆಂಗಳೂರು, ಆ.3-ನಗರದಲ್ಲಿ ಬೇಕಾಬಿಟ್ಟಿ ಸ್ಕೈ ವಾಕ್ ನಿರ್ಮಿಸಿರುವ ಬಿಬಿಎಂಪಿ ವಿರುದ್ಧ ಸಂಚಾರಿ ಪೊಲೀಸರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾವು ಸೂಚಿಸಿರುವ ಪ್ರದೇಶಗಳನ್ನು ಬಿಟ್ಟು ಬಿಬಿಎಂಪಿಯವರು ಬೇಕಾಬಿಟ್ಟಿ ಪಾದಚಾರಿ ಮೇಲ್ಸೇತುವೆಗಳನ್ನು ನಿರ್ಮಿಸಿರುವುದರಿಂದ ನಗರದಲ್ಲಿ ಸಂಚಾರಿ ದಟ್ಟಣೆ ಹೆಚ್ಚಾಗಲು ಕಾರಣವಾಗಿದೆ ಎಂದು ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಹರಿಶೇಖರನ್ ಪಾಲಿಕೆಗೆ ಪತ್ರ ಬರೆದಿದ್ದಾರೆ.

ನಗರದ 34 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪಾದಚಾರಿಗಳ ಸಂಖ್ಯೆ ಹೆಚ್ಚಿರುವ ಹಾಗೂ ಅಪಘಾತ ಉಂಟಾಗುವ ರಸ್ತೆಗಳಲ್ಲಿ ಸ್ಕೈ ವಾಕ್ ನಿರ್ಮಿಸುವಂತೆ 109 ಸ್ಥಳಗಳನ್ನು ಗುರುತಿಸಿ ಬಿಬಿಎಂಪಿಗೆ ಸಲ್ಲಿಸಲಾಗಿತ್ತು.

ಆದರೆ, ಪಾಲಿಕೆ ಅಧಿಕಾರಿಗಳು ಸಂಚಾರಿ ಪೊಲೀಸರು ನೀಡಿದ ಪಟ್ಟಿಯಂತೆ ಪಾದಚಾರಿ ಮೇಲ್ಸೇತುವೆ ನಿರ್ಮಿಸದೆ ಬೇರೆ ಪ್ರದೇಶಗಳಲ್ಲಿ ಸ್ಕೈ ವಾಕ್ ನಿರ್ಮಾಣ ಮಾಡಿದ್ದಾರೆ. ಇದರಿಂದ ಪಾದಚಾರಿಗಳಿಗಷ್ಟೆ ಅಲ್ಲದೆ ವಾಹನ ಸಂಚಾರಕ್ಕೂ ಸಮಸ್ಯೆಯಾಗುತ್ತಿದೆ ಎಂದು ಹರಿಶೇಖರನ್ ಆರೋಪಿಸಿದ್ದಾರೆ.

ಜಾಹೀರಾತುದಾರರು ಬಿಬಿಎಂಪಿ ಅಧಿಕಾರಿಗಳ ಮೇಲೆ ಒತ್ತಡ ತಂದು ಪೊಲೀಸರು ಸೂಚಿಸಿರುವ ಪ್ರದೇಶಗಳನ್ನು ಬದಲಿಸಿ ತಮಗೆ ಬೇಕಾದ ಸ್ಥಳಗಳಲ್ಲಿ ಮೇಲ್ಸೇತುವೆಗಳನ್ನು ನಿರ್ಮಿಸಿಕೊಂಡಿದ್ದಾರೆ ಎಂದು ಹರಿಶೇಖರನ್ ದೂರಿದ್ದಾರೆ.

ಇನ್ನು ಮುಂದೆ ಸ್ಕೈ ವಾಕ್ ನಿರ್ಮಾಣಕ್ಕೂ ಮುನ್ನ ಸಂಚಾರಿ ಪೊಲೀಸರೊಂದಿಗೆ ಜಂಟಿ ಸ್ಥಳ ಪರಿಶೀಲನೆ ನಡೆಸಬೇಕು. ಮೇಲ್ಸೇತುವೆಗಳ ನಿರ್ಮಾಣ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗದಂತೆ ಎಚ್ಚರ ವಹಿಸಬೇಕು ಎಂದು ಅವರು ಪತ್ರದಲ್ಲಿ ಎಚ್ಚರಿಸಿದ್ದಾರೆ.

ಮೈಸೂರು ರಸ್ತೆಯ ಗೋಪಾಲನ್ ಮಾಲ್ ಎದುರಿಗೆ ಒಂದು ಸ್ಕೈ ವಾಕ್ ನಿರ್ಮಿಸಲಾಗಿದ್ದು, 100 ಮೀಟರ್ ಅಂತರದಲ್ಲಿರುವ ಸ್ಮಶಾನದ ಎದುರು ಪಾದಚಾರಿ ಮೇಲ್ಸೇತುವೆ ನಿರ್ಮಿಸಲಾಗಿದೆ. ಈ ಮಾರ್ಗಗಳನ್ನು ಪಾದಚಾರಿಗಳು ಬಳಸುವುದೇ ಅಪರೂಪ. ಸ್ಮಶಾನದ ಮುಂದೆ ನಿರ್ಮಿಸಿರುವ ಸ್ಕೈ ವಾಕ್‍ಗಳ ಮೇಲೆ ದೆವ್ವಗಳು ಓಡಾಡುತ್ತವೆಯೇ ಎಂದು ಕಳೆದ ಪಾಲಿಕೆ ಸಭೆಯಲ್ಲಿ ಬಿಜೆಪಿ ಸದಸ್ಯ ಉಮೇಶ್‍ಶೆಟ್ಟಿ ಆರೋಪಿಸಿದ್ದರು.

ಶೆಟ್ಟಿ ಅವರ ಆರೋಪದ ಬೆನ್ನಲ್ಲೆ ಸಂಚಾರಿ ಪೊಲೀಸರು ಬಿಬಿಎಂಪಿಯವರು ಬೇಕಾಬಿಟ್ಟಿ ಪಾದಚಾರಿ ಮೇಲ್ಸೇತುವೆ ನಿರ್ಮಿಸುತ್ತಿದ್ದಾರೆ ಎಂದು ಆರೋಪಿಸಿರುವುದು ಪಾಲಿಕೆ ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಕೈಗನ್ನಡಿಯಾಗಿದೆ.

ಅವಕಾಶ ನೀಡುವುದಿಲ್ಲ: ಇನ್ನು ಮುಂದೆ ಪೊಲೀಸ್ ಇಲಾಖೆಯವರು ನೀಡಿರುವ ಪಟ್ಟಿಯಂತೆ ಯಾವುದೇ ಒತ್ತಡಕ್ಕೆ ಮಣಿಯದೆ ಸ್ಕೈ ವಾಕ್ ನಿರ್ಮಾಣ ಮಾಡಲಾಗುವುದು ಎಂದು ಮೇಯರ್ ಗಂಗಾಂಬಿಕೆ ಭರವಸೆ ನೀಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ