ಐಎಂಎ ವಂಚನೆ ಪ್ರಕರಣದ ಹಿಂದೆ ಐಪಿಎಸ್​ ಅಧಿಕಾರಿ ಕೈವಾಡ? ಎಸ್​ಐಟಿಯಿಂದ ಅಜಯ್ ​ಹಿಲೋರಿ ವಿಚಾರಣೆ

ಬೆಂಗಳೂರು: ಐಎಂಎ ಜ್ಯುವೆಲ್ಸ್​ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಎಸ್​ಐಟಿ ಹಾಗೂ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಈಗ ಈ ಪ್ರಕರಣಕ್ಕೆ ಸಂಬಂಧಿಸಿ ಐಪಿಎಸ್ ಅಧಿಕಾರಿ ಅಜಯ್ ಹಿಲೋರಿ ಅವರನ್ನು ಎಸ್​ಐಟಿ ವಿಚಾರಣೆ ನಡೆಸಿರುವುದು ಸಾಕಷ್ಟು ಕುತೂಹಲ ಸೃಷ್ಟಿಸಿದೆ.

2018ರಲ್ಲಿ ಬೆಂಗಳೂರು ಪೂರ್ವ ವಿಭಾಗ ಡಿಸಿಪಿಯಾಗಿ ಅಜಯ್ ಹಿಲೋರಿ ಕಾರ್ಯ ನಿರ್ವಹಿಸಿದ್ದರು. ಐಎಂಎ ಜ್ಯುವೆಲ್ಸ್​ ಇರುವ ಶಿವಾಜಿನಗರ ಕೂಡ ಇವರ ಪೊಲೀಸ್​ ಠಾಣೆಯ ಅಡಿಯಲ್ಲೇ ಇತ್ತು. ಐಎಂಎ ವಂಚನೆ ಬಗ್ಗೆ ಮೊದಲ ಬಾರಿಗೆ ದೂರು ಬಂದರೂ ಅಜಯ್ ಹಿಲೋರಿ ಅದನ್ನು ದಾಖಲಿಸಲು ಹಿಂದೇಟು ಹಾಕಿದ್ದರು ಎನ್ನಲಾಗಿದೆ. ಈ ಹಗರಣದ ಬಗ್ಗೆ ಮೊದಲೇ ಮಾಹಿತಿ ಇದ್ದರೂ ಆ ಬಗ್ಗೆ ಏಕೆ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಅಜಯ್​ ಅವರನ್ನು ಪ್ರಶ್ನಿಸಲಾಗಿದೆ.
ಮನ್ಸೂರ್​ಗೆ ​ ಕ್ಲೀನ್ ಚಿಟ್ ಕೊಡಿಸಿದ್ದಾರೆ ಎನ್ನುವ ಆರೋಪವನ್ನು ಅಜಯ್ ಹಿಲೋರಿ ಎದುರಿಸುತ್ತಿದ್ದಾರೆ. ಪ್ರಕರಣ ಮುಚ್ಚಿ ಹಾಕಲು ಮನ್ಸೂರ್​ನಿಂದ ಅಜಯ್​ ಸಾಕಷ್ಟು ಕಿಕ್​ ಬ್ಯಾಕ್​ ಪಡೆದಿದ್ದಾರೆ ಎಂದು ಶಂಕಿಸಲಾಗಿದೆ. ಅಜಯ್ ಅವರ ​ ದೆಹಲಿ ಮನೆಗೆ ಪೀಠೋಪಕರಣಗಳನ್ನು ಚೀನಾದಿಂದ ತರಿಸಲಾಗಿತ್ತು. ಇದಕ್ಕೆ ಹಣ ನೀಡಿದ್ದು ಇದೇ ಮನ್ಸೂರ್​ ಎಂಬ ಮಾತೂ ಕೇಳಿಬಂದಿವೆ.

ಈ ಎಲ್ಲ ಕಾರಣಕ್ಕೆ ಅಜಯ್​ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ವಿಚಾರಣೆ ವೇಳೆ ಅವರು ನೀಡುವ ಮಾಹಿತಿಗಳು ಈ ಪ್ರಕರಣದಲ್ಲಿ ತುಂಬಾನೇ ಪ್ರಮುಖ ಪಾತ್ರ ವಹಿಸಲಿದೆ ಎನ್ನಲಾಗಿದೆ.
ಈ ಪ್ರಕರಣದಲ್ಲಿ ಕೆಳಹಂತದ ಪೊಲೀಸರು ಸರಿಯಾಗಿ ತನಿಖೆ ನಡೆಸಿಲ್ಲ ಎನ್ನುವ ಆರೋಪ ಇದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮಾರುಕಟ್ಟೆ ಮತ್ತು ಗುಪ್ತಚರ ವಿಭಾಗದ ಸೂಚನೆ ಮೇರೆಗೆ ತನಿಖೆ ನಡೆಯುತ್ತಿದೆ. ಡಿಸಿಪಿ ಗಿರೀಶ್, ಡಿಐಜಿ ರವಿಕಾಂತೇಗೌಡ ಅವರು ಅಜಯ್​ ಅವರನ್ನು ವಿಚಾರಣೆ ನಡೆಸುತ್ತಿದ್ದಾರೆ.
2 ಸಾವಿರ ಕೋಟಿ ರೂ. ವಂಚನೆ ಮಾಡಿ ದುಬೈನಲ್ಲಿ ತಲೆಮರೆಸಿಕೊಂಡಿದ್ದ ಮೊಹಮ್ಮದ್​  ಮನ್ಸೂರ್​ ಖಾನ್​ನನ್ನು ದೆಹಲಿಗೆ ಬರುತ್ತಿದಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದರು. ಮನ್ಸೂರ್ ಖಾನ್​ ವಿರುದ್ಧ ಕಮರ್ಷಿಯಲ್ ಸ್ಟ್ರೀಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಪ್ರಕರಣವನ್ನು ಸರ್ಕಾರ ಎಸ್ಐಟಿಗೆ ನೀಡಿತ್ತು. ಇದುವರೆಗೂ 40 ಸಾವಿರಕ್ಕೂ ಹೆಚ್ಚು ದೂರುಗಳು ಮನ್ಸೂರ್​ ಖಾನ್​ ವಿರುದ್ಧ ದಾಖಲಾಗಿವೆ. ಮನ್ಸೂರ್​ ಖಾನ್​ನನ್ನು 14 ದಿನಗಳ ನ್ಯಾಯಾಂಗ ಬಂಧನ ನೀಡಿ ಆ.1ರಂದು ಸಿಟಿ ಸಿವಿಲ್ ಕೋರ್ಟ್​ ಆದೇಶ ಹೊರಡಿಸಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ