ಸರ್ಕಾರ ಬೀಳಲು ಒಂದು ವಸ್ತು ಕಾರಣನೇ: ಸತೀಶ್ ಜಾರಕಿಹೊಳಿ ಹೇಳಿದ್ದೇನು?

ಬೆಳಗಾವಿ: ಮೈತ್ರಿ ಸರ್ಕಾರ ಉರುಳಲು ಜಾರಕಿಹೊಳಿ ಕುಟುಂಬ ಅಲ್ಲ ಒಂದು ವಸ್ತು ಕಾರಣ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಬಿಳಲು ವಸ್ತುನೇ ಕಾರಣವಾಗಿದೆ. ಆ ವಸ್ತುವಿನಿಂದಾಗಿ ಸರ್ಕಾರಕ್ಕೆ ಇಂತಹ ಪರಿಸ್ಥಿತಿ ಬಂದಿದೆ. ಆ ವಸ್ತು ಯಾವುದೆಂದು ಸಮಯ ಬಂದಾಗ ಹೇಳುತ್ತೆನೆ, ಹೇಳಲೇ ಬೇಕು. ಇಲ್ಲದಿದ್ದರೆ ಅದು ಇತಿಹಾಸದಲ್ಲಿ ನಮ್ಮ ಕುಟುಂಬದಿಂದಲೇ ಸರ್ಕಾರ ಉರುಳಿತು ಎಂಬ ಅಪಮಾನ ಉಳಿಯುತ್ತದೆ. ಆದರೆ ನಮ್ಮ ಕುಟುಂಬದಿಂದ ಉರುಳಲಿಲ್ಲ, ಒಂದು ವಸ್ತುವಿನಿಂದಲೇ ಸರ್ಕಾರಕ್ಕೆ ಹೀಗಾಯಿತು ಎಂದು ತಿಳಿಸಿದ್ದಾರೆ.

ರಾಜ್ಯದ ಬಹಳ ಜನಕ್ಕೆ ಸರ್ಕಾರ ಯಾಕೆ ಬಿದ್ದಿದೆ ಎಂದು ಗೊತ್ತಿಲ್ಲ. ಹೀಗಾಗಿ ಅದನ್ನು ತಿಳಿಸುವುದು ನನ್ನ ಕರ್ತವ್ಯವಾಗಿದ್ದು, ಸಮಯ ಬಂದಾಗ ಸರ್ಕಾರ ಬಿದ್ದಿದ್ದರ ಹಿಂದಿನ ಕಾರಣ ರಿವೀಲ್ ಮಾಡುವುದಾಗಿ ಅವರು ಹೇಳಿದರು.

ಇದೇ ಸಂದರ್ಭದಲ್ಲಿ ಅನರ್ಹ ವಿಚಾರ ಸಂಬಂಧ ಮಾತನಾಡಿದ ಅವರು, ಶಾಸಕರ ಅನರ್ಹತೆಯನ್ನ ಬಿಜೆಪಿಯವರು ಬ್ಲಾಕ್ ಮೇಲ್ ತಂತ್ರ ಎಂದು ಅರೋಪ ಮಾಡಿದ್ದಾರೆ. ಆದರೆ ಸುಪ್ರೀಂ ಕೋರ್ಟ್ ಈ ಬಗ್ಗೆ ಹೇಳಿದ್ದರು ಕೂಡ ಸ್ಪೀಕರ್ ಅವರಿಗೆ ತಮ್ಮದೇ ಆದ ತೀರ್ಮಾನ ಕೈಗೊಳ್ಳಲು ಅವಕಾಶ ಕೊಟ್ಟಿದ್ದಾರೆ. ಇಂತಹ ಸ್ಪೀಕರ್ ಇನ್ನು ಮುಂದೆ ಸಿಗಲು ಸಾಧ್ಯವಿಲ್ಲ. ಅವರು ನಮ್ಮ ಪಕ್ಷದವರೇ ಆಗಿರಬಹುದು. ಆದರೆ ನಿಯಮಗಳನ್ನು ಬಿಟ್ಟು ಏನೂ ಮಾಡಿಲ್ಲ. ಶಾಸಕರ ಅತೃಪ್ತತೆ ಬಗ್ಗೆ ನಾನು ಮೊದಲೇ ಮಾಹಿತಿ ನೀಡಿದ್ದೆ. ನಮ್ಮವರು ವಾಪಸ್ ಬರುತ್ತಾರೆ ಎಂಬ ವಿಶ್ವಾಸ ಇತ್ತು. ಆದರೆ ಇಂದು ತೆಗೆದುಕೊಂಡಿರುವ ನಿರ್ಧಾರ ಅತೃಪ್ತ ಶಾಸಕರಿಗೆ ಪಾಠ ಆಗಲಿದೆ ಎಂದರು.

ಪಕ್ಷ ವಿರೋಧಿ ಚುಟುವಟಿಕೆ ನಡೆಸಿದ ಶಾಸಕರನ್ನು ಅನರ್ಹಗೊಳಿಸಬೇಕಾಗಿದೆ. ನಿಯಮಗಳ ಅನ್ವಯ ಸ್ಪೀಕರ್ ಅವರು ಶಾಸಕರಿಗೆ ಸಮಯ ನೀಡಲೇ ಬೇಕಿತ್ತು. ಈಗ ಅನರ್ಹವಾದ ಶಾಸಕರಿಗೂ 3 ರಿಂದ 4 ಬಾರಿ ಅವಕಾಶ ಕೊಟ್ಟಿದ್ದಾರೆ. ಮುಂದಿನ ನಿರ್ಧಾರ ಬಗ್ಗೆ ಕಾದು ನೋಡುತ್ತಿದ್ದೇನೆ. ಅನರ್ಹ ಗೊಂಡ ಶಾಸಕರು ಕೋರ್ಟಿಗೆ ಹೋದರೂ ಪ್ರಕರಣ ಇತ್ಯರ್ಥ ಆಗಲು ಸಮಯಾವಕಾಶ ಬೇಕಾಗುತ್ತದೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ