ಕಣಿವೆ ರಾಜ್ಯಕ್ಕೆ ಹತ್ತು ಸಾವಿರಕ್ಕೂ ಹೆಚ್ಚು ಯೋಧರ ರವಾನೆ

ಶ್ರೀನಗರ/ನವದೆಹಲಿ, ಜು..27- ಕಣಿವೆ ರಾಜ್ಯ ಕಾಶ್ಮೀರದಲ್ಲಿ ಉಗ್ರರ ದಮನ ಕಾರ್ಯಾಚರಣೆಯನ್ನು ಮತ್ತಷ್ಟು ಚುರುಕುಗೊಳಿಸಲು ಹಾಗೂ ಕಾನೂನು-ಸುವ್ಯವಸ್ಥೆ ಕಾಪಾಡಲು 10,000ಕ್ಕೂ ಹೆಚ್ಚು ಯೋಧರನ್ನು ಜಮ್ಮು ಮತ್ತು ಕಾಶ್ಮೀರಕ್ಕೆ ರವಾನಿಸಲಾಗಿದೆ.

ದೇಶದ ವಿವಿಧ ಭಾಗಗಳಿಂದ ಸೇನಾಪಡೆಗಳನ್ನು ಹೆಲಿಕಾಪ್ಟರ್ ಮತ್ತು ವಿಮಾನಗಳ ಮೂಲಕ ರವಾನಿಸಲಾಗಿದೆ.

ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವೆಲ್ ಅವರು ಕಾಶ್ಮೀರ ಕಣಿವೆಗೆ ಎರಡು ದಿನಗಳ ಭೇಟಿ ನೀತಿ ಹಿಂದಿರುಗಿದ ನಂತರ ಅರೆಸೇನಾ ಪಡೆಗಳ 10,000 ಯೋಧರನ್ನು ಅಲ್ಲಿಗೆ ರವಾನಿಸಲಾಗಿದೆ.

ಭೇಟಿ ವೇಳೆ ಅಜಿತ್ ದೋವಲ್ ಅವರು ಉನ್ನತಾಧಿಕಾರಿಗಳನ್ನು ಭೇಟಿ ಮಾಡಿ ರಾಷ್ಟ್ರಪತಿ ಆಡಳಿತ ಜಾರಿಯಲ್ಲಿರುವ ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿನ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿ ಕುರಿತು ಪರಾಮರ್ಶಿಸಿದರು. ಈ ಚರ್ಚೆಯ ನಂತರ ಇಷ್ಟು ಸಂಖ್ಯೆ ಸೇನಾ ಪಡೆಗಳನ್ನು ಅಲ್ಲಿಗೆ ರವಾನಿಸಲಾಗಿದೆ.

ಕಣಿವೆ ರಾಜ್ಯದಲ್ಲಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯನ್ನು ಮತ್ತಷ್ಟು ತೀವ್ರಗೊಳಿಸುವುದು ಹಾಗೂ ವಿವಿಧೆಡೆ ಉದ್ಭವಿಸಿರುವ ಆತಂಕಕಾರಿ ಪರಿಸ್ಥಿತಿಯನ್ನು ನಿಭಾಯಿಸುವುದು ಸೇನಾ ನಿಯೋಜನೆಯ ಉದ್ದೇಶವಾಗಿದೆ.

ನಿರ್ದಿಷ್ಟವಾಗಿ ಉತ್ತರ ಕಾಶ್ಮೀರದಲ್ಲಿ ಈ ಸೇನಾಪಡೆಗಳನ್ನು ನಿಯೋಜಿಸುವಂತೆ ತಾವು ಈಗಾಗಲೇ ಮನವಿ ಮಾಡಿರುವುದಾಗಿ ಜಮ್ಮು ಮತ್ತು ಕಾಶ್ಮೀರ ಪೆÇಲೀಸ್ ಮಹಾ ನಿರ್ದೇಶಕ ದಿಲ್‍ಬಾಗ್ ಸಿಂಗ್ ಹೇಳಿದ್ದಾರೆ.

ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆಯನ್ನು ಮತ್ತಷ್ಟು ಬಲಪಡಿಸಲು ಹಾಗೂ ಕಣಿವೆ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಹೆಚ್ಚುವರಿ ಪಡೆಗಳನ್ನು ಗೃಹ ಸಚಿವಾಲಯದ ಆದೇಶದ ಮೇರೆಗೆ ನಿಯೋಜಿಸಲಾಗಿದೆ.

ಈ ಪಡೆಗಳು ಉತ್ತರ ಕಾಶ್ಮೀರದಲ್ಲಿ ಕಾರ್ಯಾಚರಣೆ ನಡೆಸಲಿವೆ. 100 ತುಕಡಿಗಳನ್ನು ನಿಯೋಜಿಲಾಗಿದೆ. ತಲಾ ಒಂದೊಂದು ತುಕಡಿಯಲ್ಲಿ 100 ಯೋಧರು ಇರುತ್ತಾರೆ ಎಂದು ದಿಲ್‍ಬಾಗ್ ಸಿಂಗ್ ತಿಳಿಸಿದ್ದಾರೆ.

ಇತ್ತೀಚೆಗಷ್ಟೇ ಅಮರನಾಥ ಯಾತ್ರೆಗಾಗಿ ವಿಶೇಷ ಭದ್ರತೆ ಒದಗಿಸಲು 40,000 ಹೆಚ್ಚುವರಿ ಕೇಂದ್ರೀಯ ಅರೆ ಸೇನಾಪಡೆಗಳನ್ನು ನಿಯೋಜಿಸಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ