ಸ್ಪೀಕರ್ ನೋಟಿಸ್‍ಗೆ ಪ್ರತಿಕ್ರಿಯೆ ನೀಡಿದ ಅತೃಪ್ತ ಶಾಸಕರು

ಬೆಂಗಳೂರು, ಜು.23- ಸ್ಪೀಕರ್ ನೀಡಿರುವ ನೋಟೀಸ್‍ಗೆ ಕುರಿತಂತೆ ಅತೃಪ್ತ ಶಾಸಕರು ತಮ್ಮ ವಕೀಲರ ಮೂಲಕ ವಿವರಣೆ ನೀಡಿ ಮನವಿ ಸಲ್ಲಿಸಲು ಮುಂದಾಗಿದ್ದಾರೆ.
ರಾಜೀನಾಮೆ ನೀಡಿರುವ 13 ಮಂದಿ ಶಾಸಕರಿಗೆ ನಿಮ್ಮನ್ನು ಅನರ್ಹತೆ ಮಾಡಬಾರದೆಂಬುದು ಏಕೆ ಎಂಬ ಬಗ್ಗೆ ವಿವರಣೆ ನೀಡಬೇಕೆಂದು ನಿನ್ನೆ ಸ್ಪೀಕರ್ ರಮೇಶ್‍ಕುಮಾರ್ ಅವರು ನೋಟೀಸ್ ನೀಡಿದ್ದರು.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಅತೃಪ್ತ ಶಾಸಕರು ನೋಟೀಸ್‍ಗೆ ಸಂಬಂಧಿಸಿದಂತೆ 4 ವಾರಗಳ ಕಾಲಾವಕಾಶ ನೀಡಬೇಕು.ನೋಟೀಸ್‍ನೀಡಿದ ನಂತರ ಕನಿಷ್ಠ 7 ದಿನಗಳಾದರೂ ಅವಕಾಶ ಕೊಡಬೇಕಾಗುತ್ತದೆ ಎಂದು ತಮ್ಮ ಮನವಿಯಲ್ಲಿ ತಿಳಿಸಿದ್ದಾರೆ.

ಅನರ್ಹತೆ ಮಾಡಬೇಕೆಂದು ನೀಡಿರುವ ದೂರಿಗೆ ಸಂಬಂಧಿಸಿದಂತೆ ನಮಗಿನ್ನೂ ಯಾವುದೇ ಸಾಕ್ಷ್ಯಾಧಾರಗಳು ಅಥವಾ ಮಾಹಿತಿಗಳು ಕೈ ಸೇರಿಲ್ಲ. ಏಕಾಏಕಿ ವಿಚಾರಣೆ ನಡೆಸುವುದು ಸೂಕ್ತವಲ್ಲ. ನಮಗೂ ಕೂಡ ನಮ್ಮ ಹೇಳಿಕೆಗಳನ್ನು ನೀಡಲು ಅವಕಾಶ ನೀಡಿ ಎಂದು ವಿನಂತಿಸಿದ್ದಾರೆ.
ಇಂದು ಬೆಳಗ್ಗೆ 11 ಗಂಟೆಗೆ ಹಾಜರಾಗಬೇಕೆಂದು ಸ್ಪೀಕರ್ ಕಚೇರಿಯಿಂದ ರಮೇಶ್ ಜಾರಕಿಹೊಳಿ, ಮುನಿರತ್ನ , ಆರ್.ಶಂಕರ್, ಕೆ.ಗೋಪಾಲಯ್ಯ, ಶಿವರಾಮ್ ಹೆಬ್ಬಾರ್, ಬಿ.ಸಿ.ಪಾಟೀಲ್, ಮಹೇಶ್ ಕುಮಟಳ್ಳಿ, ಎಂ.ಟಿ.ಬಿ. ನಾಗರಾಜ್, ಪ್ರತಾಪ್‍ಗೌಡ ಪಾಟೀಲ್ , ಎಸ್.ಟಿ.ಸೋಮಶೇಖರ್, ಬೈರತಿ ಬಸವರಾಜ್, ಅಡಗೂರು ಎಚ್.ವಿಶ್ವನಾಥ್, ನಾರಾಯಣ ಗೌಡ ಅವರಿಗೆ ನೋಟೀಸ್ ನೀಡಿದ್ದ ಹಿನ್ನೆಲೆಯಲ್ಲಿ ಅವರ ಪರ ವಕೀಲರು ವಿಧಾನಸೌಧಕ್ಕೆ ಇಂದು ಬೆಳಗ್ಗೆ ಆಗಮಿಸಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ