ಹೊರಹೋಗಿರುವ ಶಾಸಕರು ಕೂಡಲೇ ರೆಸಾರ್ಟ್‍ಗೆ ಹಿಂತಿರುಗುವಂತೆ ಸೂಚನೆ

ಬೆಂಗಳೂರು, ಜು.20-ರೆಸಾರ್ಟ್ ಬಿಟ್ಟು ಹೊರ ಹೋಗಿರುವ ಶಾಸಕರು ಕೂಡಲೇ ವಾಪಸ್ ಹಿಂತಿರುಗುವಂತೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಎಲ್ಲಾ ಶಾಸಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಕೆಲ ಶಾಸಕರು ಕುಟುಂಬ ಸದಸ್ಯರನ್ನು ನೋಡಲು ಹಾಗೂ ಇನ್ನು ಕೆಲವರು ಕ್ಷೇತ್ರದಲ್ಲಿ ಪೂರ್ವ ನಿಗದಿತ ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಕಳೆದ ರಾತ್ರಿ ತೆರಳಿದ್ದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಯಡಿಯೂರಪ್ಪ, ಯಾವೊಬ್ಬ ಶಾಸಕರು ರೆಸಾರ್ಟ್ ಬಿಟ್ಟು ಕದಲಬಾರದು. ಸೋಮವಾರ ವಿಧಾನಸಭೆಯಲ್ಲಿ ವಿಶ್ವಾಸ ಮತಯಾಚನೆ ಪ್ರಸ್ತಾವನೆಗೆ ಇತಿಶ್ರೀ ಹಾಡುವುದಾಗಿ ಸ್ಪೀಕರ್ ರಮೇಶ್‍ಕುಮಾರ್ ಹೇಳಿದ್ದಾರೆ.ಇಂತಹ ಸಂದರ್ಭದಲ್ಲಿ ಒಂದೊಂದು ಮತವೂ ಕೂಡ ನಿರ್ಣಾಯಕವಾಗುತ್ತದೆ.ಯಾರೇ ಹೊರ ಹೋಗಿದ್ದರೂ ಕೂಡಲೇ ರೆಸಾರ್ಟ್‍ಗೆ ಹಿಂತಿರುಗಬೇಕೆಂದು ಕಟ್ಟಪ್ಪಣೆ ವಿಧಿಸಿದ್ದಾರೆ.

ಯಾರೊಬ್ಬರೂ ರೆಸಾರ್ಟ್‍ನಿಂದ ಹೊರ ಹೋಗಬಾರದೆಂದು ಮೊದಲೇ ಸೂಚನೆ ಕೊಡಲಾಗಿತ್ತು.ಮುಖ್ಯ ಸಚೇತಕರಿಗೂ ಮಾಹಿತಿ ನೀಡಲಾಗಿದೆ.ಪೂರ್ವ ನಿಗದಿತ ಕಾರ್ಯಕ್ರಮಗಳು ಇದ್ದರೂ ಮುಂದೂಡಬೇಕಿತ್ತು. ಅಷ್ಟು ಆತುರವಾಗಿ ಹೋಗಬೇಕಾದ ಅಗತ್ಯವಾದರೂ ಏನಿತ್ತು ಎಂದು ಬಿಎಸ್‍ವೈ ಸಿಡಿಮಿಡಿಗೊಂಡಿದ್ದಾರೆ.

ಕೂಡಲೇ ಪಕ್ಷದ ಮುಖ್ಯ ಸಚೇತಕ ಸುನೀಲ್‍ಕುಮಾರ್ ಅವರನ್ನು ಸಂಪರ್ಕಿಸಿದ ಯಡಿಯೂರಪ್ಪ ಹೊರ ಹೋಗಿರುವ ಶಾಸಕರನ್ನು ಮಧ್ಯಾಹ್ನದೊಳಗೆ ರೆಸಾರ್ಟ್‍ಗೆ ಕರೆತರಲು ಸೂಚಿಸಿದರು.

ಸದ್ಯಕ್ಕೆ ಯಲಹಂಕದ ರಮಡ ರೆಸಾರ್ಟ್‍ನಲ್ಲಿ 70ಕ್ಕೂ ಹೆಚ್ಚು ಬಿಜೆಪಿ ಶಾಸಕರು ವಾಸ್ತವ್ಯ ಹೂಡಿದ್ದಾರೆ ಎನ್ನಲಾಗುತ್ತಿದೆ.ಹಿರಿಯ ಶಾಸಕರು ಹಾಗೂ ಬೆಂಗಳೂರಿನ ಕೆಲ ಶಾಸಕರು ಕಳೆದ ರಾತ್ರಿ ವಿಧಾನಸೌಧದಿಂದ ರೆಸಾರ್ಟ್‍ಗೆ ಹೋಗದೆ ತಮ್ಮ ತಮ್ಮ ಮನೆಗಳಿಗೆ ತೆರಳಿದ್ದರು.
ಸೋಮವಾರ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿಶ್ವಾಸಮತಯಾಚನೆ ಮಾಡಲಿದ್ದು, ಅಂದು ಪಕ್ಷಗಳ ಬಲಾಬಲ ತಿಳಿಯಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ