ಮನ್ಸೂರ್​ ಖಾನ್​ನನ್ನು ಬೆಂಗಳೂರಿಗೆ ಕರೆತಂದ ಇಡಿ ಅಧಿಕಾರಿಗಳು; ಶಾಸಕ ರೋಷನ್​ ಬೇಗ್​ಗೆ ಕಂಟಕ?

ಬೆಂಗಳೂರು: ಐಎಂಎ ಜ್ಯುವೆಲರ್ಸ್​​ ಬಹುಕೋಟಿ  ವಂಚನೆ  ಪ್ರಕರಣದ ಪ್ರಮುಖ ಆರೋಪಿ ಮನ್ಸೂರ್ ಖಾನ್​​ನನ್ನು ಜಾರಿ ನಿರ್ದೇಶನ ಅಧಿಕಾರಿಗಳು (ಇಡಿ) ದೆಹಲಿಯಿಂದ ವಿಮಾನದ ಮೂಲಕ ಬೆಂಗಳೂರಿಗೆ ಕರೆತಂದಿದ್ದಾರೆ. ಮನ್ಸೂರ್​ ಮಾಧ್ಯಮಗಳ ಕಣ್ಣಿಗೆ ಬೀಳದಂತೆ ಇಡಿ ಅಧಿಕಾರಿಗಳು ಎಚ್ಚರಿಕೆ ವಹಿಸಿದ್ದಾರೆ.

ಸದ್ಯ, ವೈದ್ಯಕೀಯ ಪರೀಕ್ಷೆಗೆ ಅಧಿಕಾರಿಗಳು ಮನ್ಸೂರ್ ಖಾನ್​​ನನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ವೈದ್ಯಕೀಯ ಪರೀಕ್ಷೆಗೆ ಬಳಿಕ ಮನ್ಸೂರ್ ಖಾನ್​ನನ್ನು ಶಾಂತಿನಗರದಲ್ಲಿರುವ ಇಡಿ ಕಚೇರಿಗೆ ಕರೆ ತರುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಅಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಶೀಘ್ರದಲ್ಲೇ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ವಿಚಾರಣೆ ನಡೆಸುವ ಸಾಧ್ಯತೆ ಇದೆ. ಈ ವೇಳೆ ಶಾಸಕ ರೋಷನ್​ ಬೇಗ್​ ಬಗ್ಗೆ ಇಡಿ ಅಧಿಕಾರಿಗಳು ವಿಚಾರಣೆ ನಡೆಸಲಿದ್ದಾರೆ.

ಗುರುವಾ ತಡರಾತ್ರಿ ದುಬೈನಿಂದ ದೆಹಲಿ ವಿಮಾನ ನಿಲ್ದಾಣಕ್ಕೆ ಮನ್ಸೂರ್​ ಆಗಮಿಸಿದ್ದ. ದೆಹಲಿಗೆ ಬರುತ್ತಿದ್ದಂತೆ ವಶಕ್ಕೆ ಪಡೆಯಲು ಯೋಚಿಸಿದ್ದ ಎಸ್​ಐಟಿಗೂ ಮುನ್ನವೇ ಇಡಿ ಅಧಿಕಾರಿಗಳು ಮನ್ಸೂರ್​ನನ್ನು ವಶಕ್ಕೆ ಪಡೆದಿದ್ದರು. ಮನ್ಸೂರ್ ಭಾರತಕ್ಕೆ ಬರುವ ಬಗ್ಗೆ ಖಚಿತ ಮಾಹಿತಿ ಸಂಗ್ರಹಿಸಿದ ಎಸ್ಐಟಿಯ ಒಂದು ತಂಡ ದೆಹಲಿ ಏರ್ಪೋರ್ಟ್ ನಲ್ಲಿ ಬೀಡು ಬಿಟ್ಟಿತ್ತು. ಆದರೆ,  ಏರ್​ಪೋರ್ಟ್​ನಲ್ಲಿ ಇಮಿಗ್ರೇಷನ್​ ಅಧಿಕಾರಿಗಳು ಎಸ್ಐಟಿ ಬದಲಿಗೆ ಕೇಂದ್ರ ತನಿಖಾ ಸಂಸ್ಥೆ ಇಡಿ ವಶಕ್ಕೆ ಮನ್ಸೂರ್ ಖಾನ್​ನನ್ನು ನೀಡಿದ್ದರು. ಮನ್ಸೂರ್ ಖಾನ್​ ವಿರುದ್ಧ ಕಮರ್ಷಿಯಲ್ ಸ್ಟ್ರೀಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಪ್ರಕರಣವನ್ನು ಸರ್ಕಾರ ಎಸ್ಐಟಿಗೆ ನೀಡಲಾಗಿತ್ತು. ಇದುವರೆಗೂ 40 ಸಾವಿರಕ್ಕೂ ಹೆಚ್ಚು ದೂರುಗಳು ಮನ್ಸೂರ್​ ಖಾನ್​ ವಿರುದ್ಧ ದಾಖಲಾಗಿವೆ.

ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ತಲೆಮರೆಸಿಕೊಂಡಿದ್ದ ಮಹಮ್ಮದ್​ ಮನ್ಸೂರ್​ಗಾಗಿ ಎಸ್​ಐಟಿ ಮತ್ತು ಇಡಿ ತಂಡ ಶೋಧ ನಡೆಸಿತ್ತು. ಮನ್ಸೂರ್​ ಖಾನ್​ ಬಿಡುಗಡೆ ಮಾಡಿದ್ದ ವಿಡಿಯೋದಲ್ಲಿ ಶಿವಾಜಿನಗರ ಶಾಸಕ ರೋಷನ್​ ಬೇಗ್ ಹೆಸರನ್ನೂ ಪ್ರಸ್ತಾಪಿಸಿದ್ದರು. ಈ ಹಿನ್ನೆಲೆಯಲ್ಲಿ 3 ದಿನಗಳ ಹಿಂದೆ ರೋಷನ್​ ಬೇಗ್ ಅವರನ್ನು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದಿದ್ದ ಎಸ್​ಐಟಿ ತಂಡ ವಿಚಾರಣೆ ನಡೆಸಿತ್ತು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ