ಹೊಸ ಅಪಾರ್ಟ್‍ಮೆಂಟ್ಗಳ ನಿರ್ಮಾಣಕ್ಕೆ ಅವಕಾಶ ಕೊಡಬಾರದು

ಬೆಂಗಳೂರು, ಜೂ.28-ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರ ಸೂಚನೆಯಂತೆ ಮುಂದಿನ ಐದು ವರ್ಷಗಳ ಅವಧಿಯಲ್ಲಿ ಯಾವುದೇ ಹೊಸ ಅಪಾರ್ಟ್‍ಮೆಂಟ್‍ಗಳನ್ನು ನಿರ್ಮಿಸಲು ನಕ್ಷೆ ಮಂಜೂರಾತಿ ನೀಡಬಾರದು ಎಂದು ಆಡಳಿತ ಪಕ್ಷದ ನಾಯಕ ಅಬ್ದುಲ್ ವಾಜೀದ್ ಮೇಯರ್ ಅವರಲ್ಲಿ ಮನವಿ ಮಾಡಿದರು.

ಪಾಲಿಕೆ ಸಭೆಯಲ್ಲಿ ಮಾತನಾಡಿದ ಅವರು, ಜೂನ್ ಕಳೆಯುತ್ತಿದ್ದರೂ ಮಳೆ ಬಂದಿಲ್ಲ. ನೀರಿಗೆ ಹಾಹಾಕಾರ ಇದೆ. ಹಾಗಾಗಿ ಪ್ರಗತಿಯಲ್ಲಿರುವ ಅಪಾರ್ಟ್‍ಮೆಂಟ್‍ಗಳನ್ನು ಮಾತ್ರ ಮುಗಿಸಬೇಕು. ಈ ಕಾಮಗಾರಿ ಪೂರ್ಣಗೊಳ್ಳುವವರೆಗೂ ಹೊಸ ಅಪಾರ್ಟ್‍ಮೆಂಟ್ ನಿರ್ಮಾಣಕ್ಕೆ ಅವಕಾಶ ಕೊಡಬಾರದು ಎಂದು ಕೋರಿದರು.

ಪ್ರಸಕ್ತ ಸಾಲಿನ ಹಣಕಾಸು ವರ್ಷ ಆರಂಭವಾಗಿ 3 ತಿಂಗಳು ಪೂರ್ಣವಾಗುವ ಮುನ್ನವೇ ನಾವು ಶೇ.50ರಷ್ಟು ಆಸ್ತಿ ಸಂಗ್ರಹ ಮಾಡಿ ದಾಖಲೆ ನಿರ್ಮಿಸಿದ್ದೇವೆ. ಇದಕ್ಕೆ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಹಾಗೂ ಅಧಿಕಾರಿಗಳು ಕಾರಣ. ನಾವು 1700 ಕೋಟಿ ಆಸ್ತಿ ತೆರಿಗೆ ಸಂಗ್ರಹ ಮಾಡಿದ್ದೇವೆ. ಉಳಿದಿರುವ ಅವಧಿಯಲ್ಲಿ ನಾವು ನಿಗದಿತ ಆಸ್ತಿ ತೆರಿಗೆ ಸಂಗ್ರಹದಲ್ಲಿ ಸಫಲರಾಗುತ್ತೇವೆ ಎಂದು ತಿಳಿಸಿದರು.

ನಗರದಲ್ಲಿ ರಸ್ತೆ ಅಗಲೀಕರಣಕ್ಕೆ ಹೆಚ್ಚು ಒತ್ತು ಕೊಡಬೇಕು. ಇಲ್ಲದಿದ್ದರೆ ಮುಂದೆ ಸಮಸ್ಯೆ ಆಗಲಿದೆ. ಎಲ್ಲೆಲ್ಲಿ ಟಿಡಿಆರ್ ಕೊಡುತ್ತೇವೋ ಅಲ್ಲಿ ಮೆಟ್ರೋ ಮಾದರಿ ಪರಿಹಾರ ದೊರಕಿಸುವ ಮೂಲಕ ಜನರಿಗೆ ಭೂಮಿ ಬಿಟ್ಟುಕೊಡಲು ಪ್ರೋತ್ಸಾಹ ಅಗತ್ಯವಿದೆ ಎಂದು ಅಬ್ದುಲ್ ವಾಜೀದ್ ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ