ಬಿಡಬ್ಲ್ಯುಎಸ್‍ಎಸ್‍ಬಿಯಿಂದ ಪ್ರತಿಷ್ಠಿತ ಅಪಾರ್ಟ್‍ಮೆಂಟ್‍ಗಳಿಗೆ ಕಾವೇರಿ ನೀರು-ಸ್ಥಳೀಯ ನಿವಾಸಿಗಳ ಆಕ್ರೋಶ

ಬೆಂಗಳೂರು, ಜೂ.26-ಕಳೆದ ಕೆಲ ತಿಂಗಳುಗಳಿಂದ ಖಾಸಗಿ ಪ್ರತಿಷ್ಠಿತ ಅಪಾರ್ಟ್‍ಮೆಂಟ್‍ಗಳಿಗೆ ಕಾವೇರಿ ನೀರು ಸರಬರಾಜು ಮಾಡುತ್ತಿದ್ದಾರೆ ಎಂದು ಆರೋಪಿಸಿ ಎಚ್.ಎಸ್.ಆರ್.ಲೇಔಟ್‍ನ ನಿವಾಸಿಗಳು ಬಿಡಬ್ಲ್ಯುಎಸ್‍ಎಸ್‍ಬಿ ಅಧಿಕಾರಿಗಳಿಗೆ ಘೇರಾವ್ ಹಾಕಿರುವ ಪ್ರಸಂಗ ನಡೆದಿದೆ.

ಕುಡಿಯಲು ನಮಗೆ ನೀರಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಸ್ಥಳೀಯರಿಗೆ ನೀರು ಬಿಡುವುದನ್ನು ಬಿಟ್ಟು ಖಾಸಗಿ ಅಪಾರ್ಟ್‍ಮೆಂಟ್‍ಗಳಿಗೆ ನೀರು ಮಾರಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿ ಎಇ ಸಾಬಣ್ಣ ಅವರ ವಿರುದ್ಧ ಸ್ಥಳೀಯ ನಿವಾಸಿಗಳು ಮುತ್ತಿಗೆ ಹಾಕಿ ನೀರು ನೀಡುವಂತೆ ಆಗ್ರಹಿಸಿದರು.

ಸ್ಥಳೀಯರ ಆಕ್ರೋಶಕ್ಕೆ ಬಿಡಬ್ಲ್ಯುಎಸ್‍ಎಸ್‍ಬಿ ಸಾಬಣ್ಣ ಕಕ್ಕಾಬಿಕ್ಕಿಯಾಗಿದ್ದು, ಅಲ್ಲಿಂದ ಕಾಲ್ಕಿತ್ತಿದ್ದಾರೆ ಎನ್ನಲಾಗಿದೆ.

ಎಇಇ ನಾಗೇಂದ್ರ ಕೂಡ ವಿಷಯ ತಿಳಿದು ಅವರೂ ಕೂಡ ಸ್ಥಳದಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಕಳೆದ ಕೆಲ ತಿಂಗಳುಗಳಿಂದ ಎಚ್.ಎಸ್.ಆರ್.ಲೇಔಟ್‍ನ ನಿವಾಸಿಗಳು ನೀರಿಲ್ಲದೆ ಹೈರಾಣಾಗಿ ಹೋಗಿದ್ದಾರೆ. ಹಣ ಕೊಟ್ಟು ಬೇರೆ ಕಡೆಯಿಂದ ನೀರು ತರಿಸಿಕೊಳ್ಳುವಂತಹ ಪರಿಸ್ಥಿತಿ ಉಂಟಾಗಿದೆ. ಇನ್ನೂ ಕೆಲವರು ಟ್ಯಾಂಕರ್‍ಗಳ ಮೊರೆ ಹೋಗುವಂತಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಅಪಾರ್ಟ್‍ಮೆಂಟ್‍ಗಳಿಗೆ ನೀರು ಮಾರಿಕೊಳ್ಳುವುದು ಎಷ್ಟು ಸರಿ ಎಂದು ಸ್ಥಳೀಯರು ಅಧಿಕಾರಿಗಳಿಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.

ನೀರಿನ ಸಮಸ್ಯೆ ಶೀಘ್ರ ಪರಿಹರಿಸುವಂತೆ ಆಗ್ರಹಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ