ಮಧ್ಯಂತರ ಚುನಾವಣೆ ಬರುವ ಸನ್ನಿವೇಶಗಳಿಲ್ಲ-ಎಚ್.ಕೆ.ಪಾಟೀಲ್

ಬೆಂಗಳೂರು, ಜೂ.25- ರಾಜ್ಯ ವಿಧಾನಸಭೆಗೆ ಮಧ್ಯಂತರ ಚುನಾವಣೆ ಬರುವ ಸನ್ನಿವೇಶಗಳು ಸದ್ಯಕ್ಕಿಲ್ಲ ಎಂದು ಮಾಜಿ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಧ್ಯಂತರ ಚುನಾವಣೆ ವಿಚಾರ ಸರ್ಕಾರವನ್ನು ಪತನಗೊಳಿಸಬೇಕು ಎನ್ನುವವರಿಗೆ ಬ್ಲ್ಯಾಕ್‍ಮೇಲ್ ತಂತ್ರವಾಗಿದೆ.

ಮಧ್ಯಂತರ ಚುನಾವಣೆಗೆ ಸೂಕ್ತ ಕಾರಣಗಳೂ ಇಲ್ಲ. ಯಾರೇ ಚುನಾವಣೆ ಬಗ್ಗೆ ಪ್ರಸ್ತಾಪಿಸಿದರೂ ಅಂತಹ ಲಕ್ಷಣಗಳಿಲ್ಲ ಎಂದು ತಳ್ಳಿ ಹಾಕಿದರು.

ಜಿಂದಾಲ್ ಕಂಪನಿಗೆ ನೀಡಲಾಗಿರುವ ಭೂಮಿಯ ಬಗ್ಗೆ ಆಡಿಟ್ ಮಾಡಿಸಬೇಕು. ಆ ಕಂಪನಿ ಕೇಳಿದ್ದೆಷ್ಟು, ಸರ್ಕಾರ ಕೊಟ್ಟಿದ್ದೆಷ್ಟು, ಅವರಿಗೆ ಅಷ್ಟು ಭೂಮಿಯ ಅವಶ್ಯಕತೆ ಇದೆಯೇ ಎಂಬ ಬಗ್ಗೆ ಆಡಿಟ್ ಆಗಬೇಕು.ಈ ವಿಚಾರಗಳ ಬಗ್ಗೆ ಸಚಿವ ಸಂಪುಟ ಉಪಸಮಿತಿ ಮೊದಲು ಗಮನಹರಿಸಬೇಕು ಎಂದು ಹೇಳಿದರು.

ಲೋಕಸಭೆ ಚುನಾವಣೆ ಸೋಲಿಗೆ ಮೈತ್ರಿಯೇ ಕಾರಣ ಎಂಬ ಮಾಜಿ ಸಂಸದರಾದ ವೀರಪ್ಪ ಮೊಯ್ಲಿ ಮತ್ತು ಕೆ.ಎಚ್.ಮುನಿಯಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಎಚ್.ಕೆ.ಪಾಟೀಲ್ ಅವರು, ಸೋಲಿನ ಕಾರಣಗಳಲ್ಲಿ ಅದೂ ಒಂದಾಗಿರಬಹುದು. ಆದರೆ ಅವರಿಬ್ಬರ ಕ್ಷೇತ್ರದ ಪರಿಸ್ಥಿತಿ ಬಗ್ಗೆ ಮಾಹಿತಿ ಇಲ್ಲ. ಉತ್ತರ ಕರ್ನಾಟಕ ಭಾಗದಲ್ಲಾದ ನಮ್ಮ ಪಕ್ಷದ ಸೋಲಿಗೂ, ಮೈತ್ರಿಗೂ ಸಂಬಂಧವಿಲ್ಲ. ಲೋಕಸಭೆ ಚುನಾವಣೆ ಸೋಲಿಗೆ ಹಲವು ಕಾರಣಗಳಿರುತ್ತವೆ. ಮೈತ್ರಿ ಮಾಡಿಕೊಂಡಿದ್ದೇ ಪ್ರಮುಖ ಕಾರಣ ಎಂದು ಹೇಳಲು ಆಗುವುದಿಲ್ಲ. ಒಂದೊಂದು ಕಡೆ ಒಂದೊಂದು ಕಾರಣಗಳಿರುತ್ತವೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ