ನದಿಗಳಲ್ಲಿ ವಿಷಕಾರಿ ರಸಾಯನಿಕ ವಸ್ತುಗಳ ಮಿಶ್ರಣ

ಬೆಂಗಳೂರು, ಜೂ.17-ರಾಜ್ಯದಲ್ಲಿ ಹರಿಯುವ ಸುಮಾರು 17ಕ್ಕೂ ಹೆಚ್ಚು ನದಿಗಳಲ್ಲಿ ವಿಷಕಾರಿ ರಸಾಯನಿಕ ವಸ್ತುಗಳು ಮಿಶ್ರಣವಾಗಿರುವುದರಿಂದ ಕುಡಿಯುವುದಿರಲಿ ಕಡೆ ಪಕ್ಷ ಸ್ನಾನ ಮಾಡಿದರೂ ಕೂಡ ರೋಗರುಜಿನಗಳು ಆವರಿಸುತ್ತವೆ ಎಂದು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಪಿಎಸ್‍ಪಿಬಿ) ಎಚ್ಚರಿಸಿದೆ.

ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಬಿಡುಗಡೆ ಮಾಡಿರುವ ತ್ರೈಮಾಸಿಕ ವರದಿಯಲ್ಲಿ ಈ ಆತಂಕಕಾರಿ ಅಂಶ ಹೊರಬಿದ್ದಿದೆ. 17ಕ್ಕೂ ಹೆಚ್ಚು ನದಿಗಳಲ್ಲಿರುವ ನೀರನ್ನು ಸ್ನಾನಕ್ಕೇ ಬಳಕೆ ಮಾಡಿಕೊಳ್ಳಲಾಗದಷ್ಟು ಅಪಾಯಕಾರಿಯಾಗಿದೆ ಎಂದು ವರದಿಯಲ್ಲಿ ಉಲ್ಲೇಖವಾಗಿದೆ.

ರಾಜ್ಯದಲ್ಲಿ ಹರಿಯುವ ನದಿಗಳನ್ನು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯು ಸಿ ಮತ್ತು ಡಿ ವಿಭಾಗವೆಂದು ವಿಭಜಿಸಿದೆ. ಸಿ ವಿಭಾಗಕ್ಕೆ ನದಿ ನೀರು ಕುಡಿಯಲು ಯೋಗ್ಯ ಎಂದು ಹೇಳಿದರೆ. ಡಿ ವಿಭಾಗದ ನದಿಗಳ ನೀರು ವನ್ಯಜೀವಿ ಮತ್ತು ಮೀನು ಸಾಕಾಣಿಕೆಗೆ ಬಳಸಲು ಯೋಗ್ಯ ಎಂದು ಹೇಳಿದೆ.

ಡಿ ವಿಭಾಗದಲ್ಲಿ ಬರುವ ನದಿಗಳ ನೀರನ್ನು ಕುಡಿಯುವುದು ಇಲ್ಲವೇ ಸ್ನಾನ ಸೇರಿದಂತೆ ಯಾವುದೇ ರೀತಿ ಬಳಕೆ ಮಾಡಿಕೊಳ್ಳಬಾರದು. ಇದರಲ್ಲಿ ಬಹುತೇಕ ವಿಷಕಾರಿಕ ಅಂಶಗಳೇ ಹೆಚ್ಚಾಗಿವೆ ಎಂದು ಮಂಡಳಿ ಸಲಹೆ ಮಾಡಿದೆ.

ದಕ್ಷಿಣಕನ್ನಡ ಜಿಲ್ಲೆ ಧರ್ಮಸ್ಥಳ ಸಮೀಪ ಹರಿಯುವ ಕುಮಾರದಾರ ಮತ್ತು ನೇತ್ರಾವತಿಗಳ ನೀರನ್ನು ಬಿ ವಿಭಾಗಕ್ಕೆ ಸೇರ್ಪಡೆ ಮಾಡಲಾಗಿದೆ. ಅಂದರೆ ಈ ನದಿ ನೀರಿನಲ್ಲಿ ಸ್ನಾನ ಮಾಡಿದರೆ ಯಾವುದೇ ರೀತಿಯರೋಗರುಜಿನಗಳು ಬರುವುದಿಲ್ಲ.

ನದಿಗಳಿಗೆ ಕಸ-ಕಡ್ಡಿಗಳು ಹಾಕುವುದು, ಸತ್ತ ಪ್ರಾಣಿಗಳನ್ನು ಎಸೆಯುವುದು, ಜಿಡ್ಡುಗಟ್ಟುವಿಕೆ ಸೇರಿದಂತೆ ರಸಾಯನಿಕ ವಸ್ತುಗಳು ಮಿಶ್ರಣವಾಗುತ್ತಿರುವುದರಿಂದ ನದಿಯ ನೀರು ಕಲುಷಿತವಾಗುತ್ತಿದೆ. ಸರ್ಕಾರ ಕೂಡಲೇ ನೀರು ಶುಚಿತ್ವಕ್ಕೆ ಒತ್ತು ಕೊಡಬೇಕು ಎಂದು ಮಂಡಳಿ ಸಲಹೆ ಮಾಡಿದೆ.

2018 ಎಪ್ರಿಲ್ ತಿಂಗಳಿನಿಂದ 2019 ಮಾರ್ಚ್ ತಿಂಗಳ ವರೆಗೆ ಮಾಲಿನ್ಯ ನಿಯಂತ್ರಣ ಮಂಡಳಿ ನಡೆಸಿರುವ ಪರಿಶೋಧನೆ ಪ್ರಕಾರ ನೇತ್ರಾವತಿ ನದಿ ನೀರು ಒಂದಿಷ್ಟು ಸುಧಾರಣೆ ಕಂಡಿದ್ದರೆ. ಅರ್ಕಾವತಿ ಮತ್ತು ಭದ್ರ ನದಿಗಳು ತೀರಾ ಕಳಪೆಯಾಗಿವೆ.

ಇದೇ ರೀತಿ ಯಗಚಿ, ಕಾವೇರಿ, ಕಬಿನಿ, ಕಾಳಿ ನದಿಗಳನ್ನು ಸಿ ವರ್ಗಕ್ಕೆ ಪ್ರತ್ಯೇಕಿಸಲಾಗಿದ್ದು, ಸ್ವಲ್ಪ ಮಟ್ಟಿಗೆ ಸುಧಾರಿಸಿವೆ ಎಂದು ಹೇಳಲಾಗಿದೆ. ಆದರೂ ಸರ್ಕಾರ ತೆಗೆದುಕೊಳ್ಳುತ್ತಿರುವ ಕ್ರಮಗಳು ಏನೇನೂ ಸಾಲದು.ಇನ್ನಷ್ಟು ಬಿಗಿಯಾದ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯವಿದೆ ಎಂದು ಪ್ರತಿಪಾದಿಸಿದೆ.

ಅರ್ಕಾವತಿ, ಲಕ್ಷ್ಮೀತೀರ್ಥ, ಮಲಪ್ರಭಾ, ತುಂಗಭದ್ರಾ, ಕಾವೇರಿ, ಕಬಿನಿ, ಕಗಿನಾ, ಕಾಳಿ, ಕೃಷ್ಣ, ಸಿಂಶಾ, ನೇತ್ರಾವತಿ, ಕುಮಾರದಾರ, ಯಗಚಿ, ಭೀಮಾ ಸೇರಿದಂತೆ ಮತ್ತಿತರ ನದಿಗಳ ನೀರು ತೀರಾ ಅಪಾಯಕಾರಿ ಅಲ್ಲದಿದ್ದರೂ, ಮುಂಜಾಗೃತ ಕ್ರಮವಾಗಿ ತುರ್ತುಕ್ರಮಗಳನ್ನು ಕೈಗೊಳ್ಳಬೇಕು. ಕೆಲವು ಕಡೆ ನೀರಿನಲ್ಲಿ ಕಪ್ಪು ಮತ್ತು ಕೆಂಪು ಮಣ್ಣು ಮಿಶ್ರಿತವಾಗುತ್ತಿರುವುದು, ಇನ್ನು ಕೆಲವು ಕಡೆ ಗಣಿಗಾರಿಕೆ ಚಟುವಟಿಕೆಗಳಿಂದಲೂ ನೀರು ಕಲುಷಿತವಾಗುತ್ತಿದೆ.

ಸಾರ್ವಜನಿಕರಲ್ಲಿ ಸ್ವಯಂ ಪ್ರೇರಿತವಾಗಿ ನೀರನ್ನು ಕಲುಷಿತಗೊಳಿಸದಂತೆ ಅರಿವು ಮೂಡಿಸುವುದು ಅಗತ್ಯ ಎಂದು ಮಂಡಳಿ ತಿಳಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ