ಬೆಂಗಳೂರು: ಸಿದ್ದರಾಮಯ್ಯ ಸರ್ಕಾರದ ಜನಪ್ರಿಯ ಯೋಜನೆಯಾದ ಅನ್ನಭಾಗ್ಯ ಯೋಜನೆಯ ಅಕ್ಕಿ ಪ್ರಮಾಣ ಏರಿಕೆಗೆ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಸಿಎಂ ಕುಮಾರಸ್ವಾಮಿ ನಕಾರ ವ್ಯಕ್ತಪಡಿಸಿದ್ದಾರೆ.
ನಾನು ಮತ್ತೊಮ್ಮೆ ಮುಖ್ಯಮಂತ್ರಿಯಾದರೆ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು 10 ಕೆ.ಜಿ ಹೆಚ್ಚಿಸುವುದಾಗಿ ಸಿದ್ದರಾಮಯ್ಯ ವಿಧಾನಸಭಾ ಚುನಾವಣಾ ಪ್ರಚಾರದ ವೇಳೆ ಜನರಿಗೆ ಭರವಸೆ ನೀಡಿದರು. ಇದಾದ ಬಳಿಕ ಅಧಿಕಾರ ಚುಕ್ಕಾಣಿ ಹಿಡಿದ ಕಾಂಗ್ರೆಸ್-ಜೆಡಿಎಸ್ ಸರ್ಕಾರ ಈ ಯೋಜನೆಯನ್ನು ಮುಂದುವರೆಸಿಕೊಂಡು ಹೋಗುವುದಾಗಿ ತೀರ್ಮಾನಿಸಿದ್ದರು.
ಮೈತ್ರಿ ಮೂಲಕ ಅಧಿಕಾರ ನಡೆಸುತ್ತಿರುವ ಹಿನ್ನೆಲೆ ಅಕ್ಕಿಯ ಪ್ರಮಾಣವನ್ನು ಏರಿಕೆ ಮಾಡುವಂತೆ ಸಿದ್ದರಾಮಯ್ಯ ಕುಮಾರಸ್ವಾಮಿಗೆ ಮನವಿ ಮಾಡಿದ್ದರು.
ಆದರೆ ಸಿದ್ದರಾಮಯ್ಯ ಮನವಿಯನ್ನು ಕುಮಾರಸ್ವಾಮಿ ತಳ್ಳಿ ಹಾಕಿದ್ದು, ಯಥಾವತ್ತಾಗಿ 7 ಕೆಜಿಯನ್ನು ಮುಂದುವರೆಸುವುದಾಗಿ ತಿಳಿಸಿದ್ದಾರೆ.
ಅಕ್ಕಿ ಪ್ರಮಾಣ ಏರಿಕೆ ಕುರಿತು ಸಂಪುಟದಲ್ಲಿ ಮಾತನಾಡಿದ ಕುಮಾರಸ್ವಾಮಿ, ಮೊದಲಿನಂತೆ 5ಕೆಜಿ ಅಕ್ಕಿ ಮಾತ್ರ ವಿತರಿಸುವ ಕುರಿತು ಪ್ರಸ್ತಾಪ ಮುಂದಿರಿಸಿದರು. ಆದರೆ ಇದಕ್ಕೆ ಸಚಿವ ಜಮೀರ್ ಅಹ್ಮದ್ ಆಕ್ಷೇಪ ವ್ಯಕ್ತಪಡಿಸಿದರು.
ನಮ್ಮ ಸರ್ಕಾರದ ಜನಪ್ರಿಯ ಯೋಜನೆ ಇದಾಗಿದ್ದು, ಕೇಂದ್ರದಿಂದಲೇ 5 ಕೆಜಿ ಅಕ್ಕಿ ಲಭ್ಯವಾಗುತ್ತಿದೆ. ಇದನ್ನೇ ನೀಡಿದರೆ ರಾಜ್ಯ ಸರ್ಕಾರ ಏನು ಕೊಟ್ಟ ಹಾಗೇ ಆಗುತ್ತದೆ. ಅಕ್ಕಿಯ ಪ್ರಮಾಣವನ್ನು 10 ಕೆಜಿ ಏರಿಸದಿದ್ದರು ಪರವಾಗಿಲ್ಲ, ಕಡಿತಬೇಡ. ಈ ಮೊದಲು ನೀಡುತ್ತಿದ್ದಂತೆ 7 ಕೆ.ಜಿ ಮುಂದುವರಿಸಿ ಎಂದರು.
ಮೈತ್ರಿ ಸರ್ಕಾರದ ಮೊದಲ ಬಜೆಟ್ ಸಂದರ್ಭದಲ್ಲಿ ಕೂಡ ಅಕ್ಕಿ ಕಡಿತ ಮಾಡುವ ಕುರಿತು ಸಿಎಂ ಕುಮಾರಸ್ವಾಮಿ ಚಿಂತಿಸಿದ್ದರು. ಈ ಸಂದರ್ಭದಲ್ಲಿ ಸಿಎಂಗೆ ಪತ್ರ ಬರೆದ ಜಮೀರ್ ಅಹ್ಮದ್ ಯಾವುದೇ ಕಾರಣಕ್ಕೂ ಅಕ್ಕಿ ಕಡಿತಗೊಳಿಸದಂತೆ ತಿಳಿಸಿದ್ದರು.