ರಾಜ್ಯದಲ್ಲಿ ಮೂರು ದಿನಗಳ ಕಾಲ ಮಳೆ ಸಾಧ್ಯತೆ

ಬೆಂಗಳೂರು,ಮೇ 25- ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮೇಲ್ಮೈ ಸುಳಿಗಾಳಿ ಹಾಗೂ ಟ್ರಪ್ ನಿರ್ಮಾಣವಾಗಿದ್ದು ಕಳೆದ ಮೂರು ದಿನಗಳಿಂದಲೂ ಚದುರಿದಂತೆ ಮಳೆಯಾಗುತ್ತಿದೆ. ಇನ್ನು ಮೂರು ದಿನಗಳ ಕಾಲ ಮಳೆ ಮುಂದುವರೆಯಲಿದೆ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸ ರೆಡ್ಡಿ ತಿಳಿಸಿದರು.

ರಾಮನಗರ, ಮಂಡ್ಯ, ಮೈಸೂರು, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಹಾಸನ, ಚಿತ್ರದುರ್ಗ, ದಾವಣಗೆರೆ, ಬೆಂಗಳೂರು ಗ್ರಾಮಾಂತರ ಮತ್ತು ನಗರ ಜಿಲ್ಲೆ ಸೇರಿದಂತೆ ಬಹಳಷ್ಟು ಕಡೆ ಚದುರಿದಂತೆ ಮಳೆಯಾಗಿದೆ ಎಂದು ಅವರು ತಿಳಿಸಿದರು.

ಹವಾ ಮುನ್ಸೂಚನೆ ಪ್ರಕಾರ ಮಲೆನಾಡು ದಕ್ಷಿಣ ಒಳನಾಡಿನಲ್ಲಿ ಮೂರರಿಂದ ನಾಲ್ಕುಗಳ ದಿನಗಳ ಕಾಲ ಮಳೆ ಮುಂದುವರೆಯಲಿದೆ. ಸಂಜೆ ಹಾಗೂ ರಾತ್ರಿ ವೇಳೆ ಕೆಲವೆಡೆ ಗುಡುಗು, ಮಿಂಚು ಬಿರುಗಾಳಿ ಸಹಿತ ಮಳೆಯಾಗುವ ಸಾಧ್ಯತೆಗಳಿವೆ ಎಂದರು.

ನಿನ್ನೆ ರಾಮನಗರ ಸೇರಿದಂತೆ ಬಿರುಗಾಳಿ,ಆಲಿಕಲ್ಲು ಮಳೆಯಾದ ವರದಿಯಾಗಿದೆ. ನೈರುತ್ಯ ಮುಂಗಾರು ವಾಡಿಕೆಗಿಂತ ಒಂದು ವಾರ ವಿಳಂಬವಾಗುವ ಮುನ್ಸೂಚನೆ ಇದೆ. ಅಂಡಮಾನ್ ದ್ವೀಪದ ಬಳಿ ಮುಂಗಾರು ಮಾರುತಗಳು ಇದ್ದು, ಕಳೆದ ಬಾರಿಯಷ್ಟು ಪ್ರಬಲವಾಗಿಲ್ಲ.

ಮುಂಗಾರು ಆರಂಭದಲ್ಲೇ ದುರ್ಬಲವಾಗಿರುವುದರಿಂದ ಮೇ 18ರಿಂದ ಅಂಡಮಾನ್ ಬಳಿಯೇ ಇವೆ. ಹೆಚ್ಚಿನ ವೇಗ ಪಡೆದುಕೊಳ್ಳುತ್ತಿಲ್ಲ ಎಂದು ಶ್ರೀನಿವಾಸ್ ರೆಡ್ಡಿ ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ