ಕರ್ತವ್ಯಕ್ಕೆ ಮರಳಿದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್

ಶ್ರೀನಗರ: ಪಾಕಿಸ್ತಾನ ಎಫ್ 16 ಯುದ್ಧ ವಿಮಾನವನ್ನು ಹೊಡೆದುರುಳಿಸಿ ಭಾರತದ ಶೌರ್ಯವನ್ನು ವಿಶ್ವಕ್ಕೇ ಪರಿಚಯಿಸಿದ್ದ ಭಾರತೀಯ ವಾಯುಸೇನೆ ಪೈಲಟ್ ಅಭಿನಂದನ್ ವರ್ಧಮಾನ್ ಮತ್ತೆ ಕರ್ತವ್ಯಕ್ಕೆ ಹಾಜರಾಗಿದ್ದು, ಅಭಿನಂದನ್ ಗೆ ಭರ್ಜರಿ ಸ್ವಾಗತ ದೊರೆತಿದೆ.

ಅಭಿನಂದನ್ ಈ ಹಿಂದೆ ಕರ್ತವ್ಯ ನಿರ್ವಹಿಸಿದ್ದ ಮತ್ತದೇ ಜಮ್ಮು ಮತ್ತು ಕಾಶ್ಮೀರ ವಿಭಾಗದಲ್ಲೇ ಕರ್ತವ್ಯಕ್ಕೆ ಹಾಜರಾಗಿದ್ದು, ತಮ್ಮ ಸಹೋದ್ಯೋಗಿಗಳೊಂದಿಗೆ ಕುಶಲೋಪರಿ ವಿಚಾರಿಸುತ್ತಿರುವ ಅಭಿನಂದನ್ ಅವರ ವಿಡಿಯೋ ಬಿಡುಗಡೆ ಆಗಿದೆ.

ವಿಡಿಯೋದಲ್ಲಿ ಅಭಿನಂದನ್ ಅವರು ತಮ್ಮೆಲ್ಲ ಸಹೋದ್ಯೋಗಿಗಳೊಂದಿಗೆ ಸೆಲ್ಫಿ ತೆಗೆಸಿಕೊಳ್ಳುತ್ತಿದ್ದಾರೆ. ಸೆಲ್ಫಿ ಬಳಿಕ ಅಭಿನಂದನ್ ಮತ್ತು ಅವರ ಸ್ನೇಹಿತರು ಭಾರತ್ ಮಾತಾ ಕಿ ಜೈ ಎನ್ನುತ್ತಿದ್ದರೆ, ಅಭಿನಂದನ್ ಕೂಡ ಭಾರತ್ ಮಾತಾ ಕಿ ಜೈ ಘೋಷಣೆ ಕೂಗಿದ್ದಾರೆ.

ಈ ವೇಳೆ ಮಾತನಾಡಿರುವ ಅಭಿನಂದನ್, ನಾನೀಗ ನಿಮ್ಮೊಂದಿಗೆ ಚಿತ್ರ ತೆಗೆಸಿಕೊಂಡಿದ್ದು, ನಿಮ್ಮ ಕುಟುಂಬಗಳಿಗಾಗಿ, ಅವರ ಹಾರೈಕೆಯಿಂದ ನಾನು ಬೇಗನೆ ಹುಷಾರಾಗಿದ್ದೇನೆ ಎಂದು ಹೇಳಿದ್ದಾರೆ.

ಬಾಲಾಕೋಟ್ ವಾಯುದಾಳಿ ಬಳಿಕ ಭಾರತದ ಮೇಲೆ ದಾಳಿಗೆ ಬಂದಿದ್ದ ಪಾಕಿಸ್ತಾನದ ಯುದ್ಧ ವಿಮಾನಗಳನ್ನು ಬೆನ್ನಟ್ಟಿ ಹೋಗಿದ್ದ ಅಭಿನಂದನ್ ಅವರ ವಿಮಾನ ಪಾಕಿಸ್ತಾನದ ಎಫ್ 16 ಯುದ್ಧ ವಿಮಾನವನ್ನು ಹೊಡೆದುರುಳಿಸಿತ್ತು. ಬಳಿಕ ತಾಂತ್ರಿಕ ಕಾರಣಗಳಿಂದಾಗಿ ಅಭಿನಂದನ್ ಯುದ್ಧ ವಿಮಾನ ಪಾಕಿಸ್ತಾನದಲ್ಲಿ ಧರೆಗುರುಳಿತ್ತು. ಆಗ ಅಭಿನಂದನ್ ಅವರು ಪಾಕಿಸ್ತಾನದ ಸೇನೆ ಕೈಗೆ ಸಿಲುಕಿದ್ದರು. ಎರಡು ದಿನಗಳ ಬಳಿಕ ಪಾಕ್ ಸರ್ಕಾರವು ಅಭಿನಂದನ್ ಅವರನ್ನು ಭಾರತಕ್ಕೆ ಹಸ್ತಾಂತರಿಸಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ