ಚಿಂಚೋಳಿ,ಮೇ 5- ಡಾ.ಉಮೇಶ್ ಜಾಧವ್ ಅವರು ಹಣಕ್ಕೆ ಮಾರಾಟವಾಗಿದ್ದಾರೆ ಎಂದು ನಾನು ನೀಡಿರುವ ಹೇಳಿಕೆಗೆ ಈಗಲೂ ಬದ್ಧನಾಗಿದ್ದೇನೆ. ನನ್ನ ಮೇಲೆ ಅವರು ಬೇಕಾದರೆ ಮಾನನಷ್ಟ ಮೊಕದ್ದಮೆ ಹಾಕಿಕೊಳ್ಳಲಿ ಎಂದು ಸಚಿವ ಪ್ರಿಯಾಂಕ ಖರ್ಗೆ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೂ ಕಾನೂನು ಗೊತ್ತಿದೆ. ಏನು ಮಾಡಬೇಕೆಂಬುದರ ಬಗ್ಗೆ ಅರಿವಿದೆ. ಅವರು ಹಣಕ್ಕೆ ಮಾರಾಟವಾಗಿದ್ದಾರೆ ಎಂದು ಹೇಳಿದ್ದೆ. ಅದು ನಿಜ ಎಂದು ಪುನರುಚ್ಛರಿಸಿದರು.
ಕಾಂಗ್ರೆಸ್ನಲ್ಲಿ ಶಾಸಕರಾಗಿದ್ದಾಗ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಸಿಕ್ಕರೆ ಸಾಕು ಎನ್ನುತ್ತಿದ್ದರು. ನಂತರ ಸಚಿವ ಸ್ಥಾನ ಸಿಕ್ಕಲಿಲ್ಲ ಎಂದು ಪಕ್ಷ ಬಿಟ್ಟರು ಎಂದು ಕಿಡಿ ಕಾರಿದರು.
ಅಪ್ಪ ಮಕ್ಕಳ ರಾಜಕಾರಣ ಎಂದು ಬೊಬ್ಬೆ ಹೊಡೆಯುತ್ತಿದ್ದ ಅವರು ಈಗ ಕುಟುಂಬ ರಾಜಕಾರಣ ಯಾರದು ಎಂದು ಪ್ರಶ್ನಿಸಿದರು. ಚಿಂಚೋಳಿ ಕ್ಷೇತ್ರದಲ್ಲಿ ಪ್ರಚಾರಕ್ಕೆ ಎಲ್ಲಾ ನಾಯಕರು ಬರುತ್ತಾರೆ. ಯಾರೂ ಮಲತಾಯಿ ಧೋರಣೆ ಮಾಡಿಲ್ಲ. ಈ ಕ್ಷೇತ್ರದಲ್ಲಿ ಗೆಲುವು ನಮ್ಮದೇ ಎಂದು ಅವರು ಹೇಳಿದರು.