ಅಮಾನತು ಶಿಕ್ಷೆ ಭೀತಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್: ಗಾಂಜಾ ಪ್ರಕರಣದಲ್ಲಿ ಸಿಲುಕಿದ ಫ್ರಾಂಚೈಸಿ ಮಾಲೀಕ

ಕಿಂಗ್ಸ್ ಇಲೆವೆನ್ ಸಹ ಮಾಲೀಕ ನೆಸ್ ವಾಡಿಯಾ ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೊಳಾಗಿ ಬಿಡುಗಡೆಯಾಗಿದ್ದಾರೆ. ಜಪಾನ್‌ನಲ್ಲಿ ಅರೆಸ್ಟ್ ಆದ ನೆಸ್ ವಾಡಿಯಾ, ಜೈಲು ಶಿಕ್ಷೆಯನ್ನೂ ಅನುಭವಿಸಿರೋದು ತಡವಾಗಿ ಬೆಳಕಿಗೆ ಬಂದಿದೆ.

12ನೇ ಆವೃತ್ತಿ ಐಪಿಎಲ್ ಟೂರ್ನಿಯಲ್ಲಿ ಅಂಪೈರ್ ತೀರ್ಪು ಸೇರಿದಂತೆ ಆನ್‌ಫೀಲ್ಡ್‌ನಲ್ಲಿನ ಸಣ್ಣ ಘಟನೆಗಳನ್ನ ಹೊರತು ಪಡಿಸಿದರೆ ವಿವಾದಗಳು ಭುಗಿಲೆದ್ದಿರಲಿಲ್ಲ. ಆದರೆ 12ನೇ ಆವೃತ್ತಿ ಐಪಿಎಲ್ ಟೂರ್ನಿಗೂ ಕಳಂಕ ಅಂಟಿಕೊಳ್ಳುವ ಸಾಧ್ಯತೆ ಹೆಚ್ಚಿದೆ.

ಗಂಜಾ ಇಟ್ಟುಕೊಂಡಿದ್ದ ಪಂಜಾಬ್ ತಂಡದ ಮಾಲೀಕ
ಕಳೆದ ಮಾರ್ಚ್‌ನಲ್ಲಿ ನೆಸ್‌ ಪ್ರವಾಸಕ್ಕೆಂದು ಜಪಾನ್‌ಗೆ ತೆರಳಿದ್ದ ವೇಳೆ ತಮ್ಮ ಬಳಿ 25 ಗ್ರಾಂ ಗಾಂಜಾ ಇಟ್ಟುಕೊಂಡಿದ್ದರು. ಆದರೆ ನ್ಯೂ ಚಿಟೋಸ್‌ ವಿಮಾನ ನಿಲ್ದಾಣದಲ್ಲಿ ತಪಾಸಣೆ ವೇಳೆ ಶ್ವಾನಗಳು ಗಾಂಜಾ ಪತ್ತೆ ಹಚ್ಚಿದ್ದವು. ಹೀಗಾಗಿ ಅವರನ್ನು ಬಂಧಿಸಿ, ವಿಚಾರಣೆಗೆ ಗುರಿಪಡಿಸಲಾಗಿತ್ತು.

ಶಿಕ್ಷೆ ಭೀತಿಯಿಂದ ಪಾರಾಗಿ ಬಂದ ನೆಸ್ ವಾಡಿಯಾ
ವಿಚಾರಣೆ ವೇಳೆ ತಾವು ಸ್ವಂತ ಬಳಕೆಗಾಗಿ ಗಾಂಜಾ ಇಟ್ಟುಕೊಂಡಿದ್ದೆ ಎಂದು ನೆಸ್‌ ಒಪ್ಪಿದ್ದರು. ಇದನ್ನು ಮಾನ್ಯ ಮಾಡಿದ ಕೋರ್ಟ್‌ ನೆಸ್‌ಗೆ 2 ವರ್ಷ ಜೈಲು ಶಿಕ್ಷೆ ವಿಧಿಸಿತ್ತಾದರೂ, ನಿಯಮಗಳ ಅನ್ವಯ ಅವರ ಶಿಕ್ಷೆಯನ್ನು ಅಮಾನತ್ತಿನಲ್ಲಿ ಇಟ್ಟಿತ್ತು. ಹೀಗಾಗಿ ಅವರು ಜೈಲು ಶಿಕ್ಷೆ ಅನುಭವಿಸಬೇಕಾದ ಅಪಾಯದಿಂದ ಪಾರಾಗಿ ಭಾರತಕ್ಕೆ ಮರಳಿದ್ದಾರೆ.

ಮೂರು ವರ್ಷಗಳ ಹಿಂದೆ ಸ್ಪಾಟ್ ಫಿಕ್ಸಿಂಗ್ ಪ್ರಕ್ರಣದಲ್ಲಿ ಫ್ರಾಂಚೈಸಿ ಮಾಲೀಕರು ನಿಯಮ ಉಲ್ಲಂಘಿಸಿದ ಕಾರಣಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ ರಾಯಲ್ಸ್ 2 ವರ್ಷ ನಿಷೇಧಕ್ಕೊಳಗಾಗಿತ್ತು.

ಸಂಕಷ್ಟದಲ್ಲಿ ಸಿಲುಕಿದ ಕಿಂಗ್ಸ್ ಇಲೆವೆನ್ ಪಂಜಾಬ್
ಐಪಿಎಲ್ ಫ್ರಾಂಚೈಸಿ ಮಾಲೀಕರು ಆನ್‌ಫೀಲ್ಡ್, ಆಫ್ ದಿ ಫೀಲ್ಡ್‌ನಲ್ಲಿ ನಿಯಮ ಉಲ್ಲಂಘಿಸುವಂತಿಲ್ಲ. ಮಾಲೀಕರ ಬೆಟ್ಟಿಂಗ್ ಪ್ರಕರಣದಿಂದ ನಿಷೇಧದ ಶಿಕ್ಷೆ ಅನುಭವಿಸಿತು. ಇದೀಗ ನೆಸ್ ವಾಡಿಯಾ ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿದ್ದಾರೆ. ಡೋಪಿಂಗ್‌ನಿಂದ ಆಟಗಾರರನ್ನು ದೂರವಿಡಲು ಬಿಸಿಸಿಐ ಹಾಗೂ ಐಸಿಸಿ ಅವಿರತ ಪ್ರಯತ್ನ ಮಾಡುತ್ತಿದೆ. ಇದೀಗ ಫ್ರಾಂಚೈಸಿ ಮಾಲೀಕರೇ ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿರುವುದು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಸಂಕಷ್ಟ ಮತ್ತಷ್ಟು ಹೆಚ್ಚಿಸಿದೆ.

ನೆಸ್ ವಾಡಿಯಾ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ ಬಿಸಿಸಿಐ
ಕಳೆದ ಮಾರ್ಚ್‌ನಲ್ಲಿ ಈ ಘಟನೆ ನಡೆದಿದೆ. ಇದೀಗ ಈ ಪ್ರಕರಣ ಬೆಳಕಿಗೆ ಬಂದಿದ್ದು, ವಾಡಿಯಾ ಡ್ರಗ್ಸ್ ಪ್ರಕರಣವನ್ನು ಬಿಸಿಸಿಐ ಗಂಭೀರವಾಗಿ ಪರಿಗಣಿಸಿದೆ. ನೆಸ್ ವಾಡಿಯಾ ತಪ್ಪು ಸಾಬೀತಾದಲ್ಲಿ, ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಅಮಾನತು ಶಿಕ್ಷಗೆ ಗುರಿಯಾಗಲಿದೆ. ಪ್ರಕರಣವನ್ನ ಬಿಸಿಸಿಐ ಮೊದಲು ತನಿಖೆ ನಡೆಸಲು ಸಮಿತಿಯನ್ನ ರಚಿಸಲಿದೆ ಎಂದು ಬಿಸಿಸಿಐನ ಹಿರಿಯ ಅಧಿಕಾರಿ ಕೂಡ ಹೇಳಿದ್ದಾರೆ.

ಒಟ್ಟಿನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಈ ಬಾರಿಯ ಟೂರ್ನಿಯಲ್ಲಿ ಪ್ಲೇ ಆಫ್ಗೆ ಹೋಗಲು ಹೋರಾಟ ಮಾಡುತ್ತಿರುವಾಗಲೇ ತಂಡದ ಮಾಲೀಕ ಮಾಡಿದ ತಪ್ಪು ಗಾಯದ ಮೇಲೆ ಬರೆ ಎಳದಂತಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ