ಜುನಾಘಡ್ ನಲ್ಲಿ ಏಕೈಕ ಮತದಾರನಿಗಾಗಿ ಮತಗಟ್ಟೆ ಸ್ಥಾಪಿಸಿದ್ದ ಆಯೋಗ; ಹಕ್ಕು ಚಲಾಯಿಸಿ ಸಂತಸ ವ್ಯಕ್ತಪಡಿಸಿದ ಮತದಾರ

ಜುನಾಘಡ್: ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ದೇಶಾದ್ಯಂತ ಮೂರನೇ ಹಂತದ ಹಾಗೂ ಕರ್ನಾಟಕದ ಎರಡನೇ ಹಂತದ ಮತದಾನ ಪ್ರಕ್ರಿಯೆ ಅಂತ್ಯಗೊಂಡಿದ್ದು, ಗುಜರಾಜ್ ನ ಒಂದು ಮತಗಟ್ಟೆಯಲ್ಲಿ ಶೇ.100ರಷ್ಟು ಮತದಾನವಾಗಿದೆ ಎನ್ನಬಹುದು.

ಹೌದು. ಗುಜರಾತ್ ಗಿರ್ ಅರಣ್ಯ ಪ್ರದೇಶದಲ್ಲಿರುವ ಜುನಾಘಡ್ ನಲ್ಲಿ ಏಕೈಕ ಮತದಾರನಿದ್ದು, ಈತನಿಗಾಗಿಯೇ ಚುನಾವಣಾ ಆಯೋಗ ಲಕ್ಷಾಂತರ ಹಣ ವ್ಯಯಿಸಿ ಇಲ್ಲಿ ಮತಗಟ್ಟೆ ಸ್ಥಾಪಿಸಿ ಮತದಾನಕ್ಕೆ ಅವಕಾಶ ಮಾಡಿಕೊಟ್ಟಿತ್ತು.

ಜುನಾಘಡ್ ನಲ್ಲಿ ಭರತ್ ದಾಸ್ ಬಾಪು ಎಂಬ ಮತದಾರನಿದ್ದು, ಈತನ ಏಕೈಕ ಮತಕ್ಕಾಗಿ ಇಲ್ಲಿ ಚುನಾವಣಾ ಆಯೋಗ ಮತಗಟ್ಟೆ ಸ್ಥಾಪನೆ ಮಾಡುವ ಮೂಲಕ ಒಂದೊಂದು ಮತಗಳೂ ಮುಖ್ಯ ಎಂಬ ಸಂದೇಶ ಸಾರಿದೆ. ಅಂತೆಯೇ ಭರತ್ ದಾಸ್ ಬಾಪು ಕೂಡ ಯಾವುದೇ ಕಾರಣಕ್ಕೂ ಮತದಾನದಿಂದ ತಪ್ಪಿಸಿಕೊಳ್ಳದೇ ಇಂದು ತನ್ನ ಹಕ್ಕು ಚಲಾಯಿಸಿ, ತಾನೂ ಕೂಡ ಜವಾಬ್ದಾರಿಯುತ ಪ್ರಜೆ ಎಂಬುದನ್ನು ಸಾಬೀತು ಪಡಿಸಿದ್ದಾನೆ. ಹಾಗಾಗಿ ಇಲ್ಲಿ ಶೇ.100ರಷ್ಟು ಮತದಾನ ವಾಗಿದೆ ಎನ್ನಲಾಗುತ್ತಿದೆ.

ಈ ಬಗ್ಗೆ ಮಾತನಾಡಿರುವ ಭರತ್ ದಾಸ್ ಬಾಪು, ‘ ಈ ಗ್ರಾಮದಲ್ಲಿರುವ ಏಕೈಕ ಮತದಾರ ನಾನು. ನಾನು ನನ್ನ ಮತ ಹಾಕಿದ್ದು, ಇಲ್ಲಿ ಇದೀಗ ಶೇ.100ರಷ್ಟು ಮತದಾನವಾಗಿದೆ ಎಂಬ ಖುಷಿಯಿದೆ. ನನ್ನೊಬ್ಬನಿಗಾಗಿ ಆಯೋಗ ಇಷ್ಟೆಲ್ಲ ಖರ್ಚು ಮಾಡಿ ಕಷ್ಟ ಪಟ್ಟು ಮತಗಟ್ಟೆ ಸ್ಥಾಪನೆ ಮಾಡಿದೆ. ಆ ಮೂಲಕ ನನಗೂ ಮತದಾನಕ್ಕೆ ಅವಕಾಶ ಕಲ್ಪಿಸಿಕೊಟ್ಟಿದೆ ಎಂದು ಹೇಳಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ