ಪೊಲೀಸರಿಂದ ರೌಡಿಯ ಬಂಧನ

ಹುಣಸೂರು, ಏ.21- ಕ್ಲುಲ್ಲಕ ಕಾರಣಕ್ಕೆ ಪೆಟ್ರೋಲ್ ಬಂಕ್ ಮಾಲೀಕರು ಮತ್ತು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ತಲೆ ಮರೆಸಿಕೊಂಡಿದ್ದ ರೌಡಿಯೊಬ್ಬನನ್ನು ನಗರ ಠಾಣೆ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.

ನಗರದ ನರಸಿಂಹಸ್ವಾಮಿ ತಿಟ್ಟಿನ ನಿವಾಸಿ ಸಲ್ಮಾನ್ ಪಾಷಾ ಬಂಧಿತ ಆರೋಪಿ.

ಘಟನೆ ವಿವರ: ಏ.17ರಂದು ಸಲ್ಮಾನ್ ಪಾಷಾ ತಮ್ಮ ಆಟೋಗೆ ಡಿಸೇಲ್ ಹಾಕಿಸಿಕೊಳ್ಳಲು ಬೈಪಾಸ್ ರಸ್ತೆಯ ಕೋರ್ಟ್ ವೃತ್ತದ ಬಳಿಯ ಛಾಯಾದೇವಿ ಪೆಟ್ರೋಲ್ ಬಂಕ್ ತೆರಳಿದ್ದ ವೇಳೆ ಬಂಕ್ ನೌಕರ ಪಕ್ಕದ ಪೆಟ್ರೋಲ್ ಪಂಪ್ ಬಳಿ ಆಟೋ ನಿಲ್ಲಿಸಲು ಸೂಚಿಸಿದ್ದನು.

ಇದರಿಂದ ಕುಪಿತನಾದ ಸಲ್ಮಾನ್‍ಪಾಷಾ ನೌಕರನ ಮೇಲೆ ಹಲ್ಲೆ ನಡೆಸಿದ್ದಲ್ಲದೇ, ಪ್ರಶ್ನಿಸಿದ ಬಂಕ್ ಮಾಲೀಕರಾದ ಛಾಯಾದೇವಿ ಮೇಲೂ ಹಲ್ಲೆ ನಡೆಸಿದ್ದ. ಈ ಸಂಬಂಧ ನಗರ ಠಾಣೆಯಲ್ಲಿ ಛಾಯಾದೇವಿ ಪ್ರಕರಣ ದಾಖಲಿಸಿದ್ದರು.

ಅಂದಿನಿಂದ ತಲೆ ಮರೆಸಿಕೊಂಡಿದ್ದ ಸಲ್ಮಾನ್ ಪಾಷಾನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದರು.ಖಚಿತ ಮಾಹಿತಿ ಮೇರೆಗೆ ನಗರಕ್ಕೆ ಸಮೀಪದ ಶಬ್ಬೀರ್ ನಗರದ ಸಂಬಂಧಿಕರ ಮನೆಯಲ್ಲಿ ಅವಿತಿದ್ದನ್ನು ಪತ್ತೆ ಹಚ್ಚಿದ ಮುಖ್ಯಪೇದೆ ಜಗದೀಶ್, ಸಿಬ್ಬಂದಿಗಳಾದ ಮಹೇಶ್, ಅನಿಲ್, ಆನಂದತೀರ್ಥ ದಾಳಿ ನಡೆಸಿ, ಆರೋಪಿಯನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.ಆಟೋ ಸಹ ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಸೈ ಮಹೇಶ್ ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ