ಬೀದರ ಲೋಕಸಭೆ ಮತಕ್ಷೇತ್ರದ ಅಭಿವೃದ್ಧಿ ಕುರಿತು ಬಹಿರಂಗ ಚರ್ಚೆಗೆ ಸಿದ್ಧ -ಭಗವಂತ ಖೂಬಾ

ಬೀದರ, ಏ. 13ಃ ಬೀದರ ದಕ್ಷಿಣ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಬಕ್ಕಚೌಡಿ ಗ್ರಾಮದಲ್ಲಿ ಏಪ್ರೀಲ್ 13 ರಂದು ಕಮಠಾಣ ಮತ್ತು ಆಣದೂರ ಗ್ರಾಮಗಳ ಬಿಜೆಪಿ ಬೂತ್ ಮಟ್ಟದ ಕಾರ್ಯಕರ್ತರ ಹಾಗೂ ಪ್ರಮುಖರ ಸಭೆಯನ್ನುದ್ದೇಶಿಸಿ ಬೀದರ ಲೋಕಸಭೆ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಹಾಲಿ ಸಂಸದ ಭಗವಂತ ಖೂಬಾ ಅವರು ಮಾತನಾಡುತ್ತ, ಕಳೆದ 5 ವರ್ಷದಲ್ಲಿ ನಾನೂ ಬೀದರ ಲೋಕಸಭೆ ಮತಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕಾಮಗಾರಿಗಳ ಕುರಿತು ಬೀದರ ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ಈಶ್ವರ ಖಂಡ್ರೆ ಅವರೊಂದಿಗೆ ಬಹಿರಂಗವಾಗಿ ಚರ್ಚಿಸಲು ನಾನೂ ಸಿದ್ಧನಿದ್ದೇನೆ ಎಂದು ಈಶ್ವರ ಖಂಡ್ರೆ ಅವರಿಗೆ ಭಗವಂತ ಖೂಬಾ ಅವರು ಸವಾಲು ಹಾಕಿದ್ದರು.

ಕಾಂಗ್ರೆಸ್ ಅಭ್ಯರ್ಥಿ ಈಶ್ವರ ಖಂಡ್ರೆ ಅವರು ಪದೆ ಪದೇ ಭಗವಂತ ಖೂಬಾ ಅವರು ಸಂಸದರಾಗಿ ಅಭಿವೃದ್ಧಿ ಕಾರ್ಯಗಳು ಮಾಡಿಲ್ಲ ಎಂದು ಆರೋಪ ಮಾಡುತ್ತಿದ್ದಾರೆ. ಈಶ್ವರ ಖಂಡ್ರೆ ಅವರ ಪರಿವಾರದವರು ಕಳೆದ 6 ದಶಕಗಳಿಂದ ರಾಜಕೀಯದಲ್ಲಿ ಸಕ್ರೀಯವಾಗಿದ್ದಾರೆ.
ಕಾಂಗ್ರೆಸ್ ಪಕ್ಷ ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ, ಖಂಡ್ರೆ ಪರಿವಾರದವರು ಅಧಿಕಾರದಲ್ಲಿದ್ದರೂ ಬೀದರ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗಾಗಿ ಯಾವುದೇ ವಿಶೇಷ ಯೋಜನೆ ತಂದಿಲ್ಲ ಎಂದ ಅವರು, ಬೀದರ ಸಹಕಾರ ಸಕ್ಕರೆ ಕಾರ್ಖಾನೆ ಸ್ಥಾಪನೆ ಮಾಡಿದ್ದು, ಖಂಡ್ರೆ ಪರಿವಾರ ಅಲ್ಲ.

ಬೇರೋ ಯಾರೋ ಮಾಡಿದ ಕಾರ್ಯವನ್ನು ಖಂಡ್ರೆ ಪರಿವಾರದವರು ತಾವೇ ಮಾಡಿದ್ದೇವೆಂದು ಲೋಕಸಭೆ ಚುನಾವಣೆಯಲ್ಲಿ ಲಾಭ ಪಡೆಯುವ ಉದ್ದೇಶದಿಂದ ಈ ರೀತಿಯ ಹೇಳಿಕೆ ನೀಡಿ, ಮತದಾರರಿಗೆ ದಾರಿ ತಪ್ಪಿಸುತ್ತಿದ್ದಾರೆ ಎಂದರರು.

ನಾನೂ ಸಂಸದನಾಗಿ 5 ವರ್ಷದ ಅವಧಿಯಲ್ಲಿ ಬೀದರದಿಂದ ದೇಶದ ವಿವಿಧ ಮಹಾನಗರಗಳಿಗೆ 13 ರೈಲು ಸಂಚರಿಸುವಂತೆ ಮಾಡಿದ್ದೇನೆ. ಬೀದರ-ಮುಂಬೈ ರೈಲು ಭಾಲ್ಕಿ ಮಾರ್ಗವಾಗಿ ಹೋಗುತ್ತದೆ. ಇದಲ್ಲದೇ ಬೀದರ ಜಿಲ್ಲೆಯಲ್ಲಿ ಕೇಂದ್ರ ಸರ್ಕಾರದಿಂದ ಅನೇಕ ರಾಷ್ಟ್ರೀಯ ಹೆದ್ದಾರಿ ಮಂಜೂರಿ ಪಡೆದು ಕಾಮಗಾರಿಗಳಿಗೆ ಚಾಲನೆ ನೀಡಿದ್ದು, ಕಾಮಗಾರಿಗಳು ಪ್ರಗತಿಯಲ್ಲಿವೆ. ಬೀದರ ನಗರದಲ್ಲಿ ಪಾಸ್‍ಪೋರ್ಟ್ ಸೇವಾ ಕೇಂದ್ರ ಆರಂಭಿಸಲಾಗಿದ್ದು, ಪ್ರಧಾನ ಮಂತ್ರಿ ಫಸಲ ಭೀಮಾ ಯೋಜನೆಯಡಿ ಬೀದರ ಜಿಲ್ಲೆಯ ರೈತರು ಇದರ ಲಾಭ ಪಡೆಯುವಂತೆ ಮಾಡಿದ್ದೇನೆ ಎಂದರು.

ಪ್ರಧಾನ ಮಂತ್ರಿ ಫಸಲ ಭೀಮಾ ಯೋಜನೆಯಡಿ ಅವ್ಯವಹಾರ ನಡೆದಿದೆ ಎಂದು ಈಶ್ವರ ಖಂಡ್ರೆ ಅವರ ಹೇಳಿಕೆ ಸತ್ಯಕ್ಕ ದೂರವಾಗಿದೆ. ಭೀಮಾ ಕಂಪನಿಯ ಏಜೇನ್ಸಿಯನ್ನು ನೇಮಕ ಮಾಡುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇದೆ. ಇದರಲ್ಲಿ ಭೃಷ್ಟಾಚಾರ ಮಾಡಿರುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದರು.

ಬೀದರ ಜಿಲ್ಲೆಯಲ್ಲಿ ಜನೌಷಧಿ ಕೇಂದ್ರಗಳು ಸ್ಥಾಪಸಿ, ಜನರನ್ನು ಕಡಿಮೆ ದರದಲ್ಲಿ ಔಷಧಿ ದೊರೆಯುವಂತೆ ಮಾಡಿದ್ದೇನೆ. ಕೇಂದ್ರ ಸರ್ಕಾರ ಕಳೆದ 5 ವರ್ಷಗಳಲ್ಲಿ 167 ಕಾಮಗಾರಿಗಳು ಅನುಷ್ಠಾನಕ್ಕೆ ತಂದಿದ್ದು, ಈ ಕಾರ್ಯಕ್ರಮದ ಲಾಭವನ್ನು 22 ಕೋಟಿ ಜನರು ನೇರವಾಗಿ ಪಡೆದಿದ್ದಾರೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರು ದಿನದ 18 ತಾಸು ಕಾಯಕ ಮಾಡಿ, ಪಾಕಿಸ್ತಾನದೊಳಗೆ ಹೋಗಿ ಉಗ್ರರ ನೆಲೆಗಳ ದಾಳಿ ನಡೆಸಿ, ಉಗ್ರರ ಸದ್ದಡಗಿಸಿ, ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ದೇಶದ ಗೌರವ ಹೆಚ್ಚಿಸಿದ್ದಾರೆ. ಪಾಕ್‍ನ ಬಾಲಕೋಟದಲ್ಲಿ ಉಗ್ರರ ನೆಲೆಗಳ ದಾಳಿ ಮಾಡಲು ಸೈನಿಕರಿಗೆ ಪ್ರಧಾನಿ ನರೇಂದ್ರ ಮೋದಿಯವರು ಸಂಪೂರ್ಣ ಅಧಿಕಾರ ನೀಡಿದ್ದರು. ಜಮ್ಮು ಮತ್ತು ಕಾಶ್ಮೀರದಲ್ಲಿ ಸೈನಿಕರ ಸಂಖ್ಯೆ ಕಡಿಮೆ ಮಾಡಲಾಗುವದು ಎಂದು ಕಾಂಗ್ರೆಸ್ ಪಕ್ಷ ತನ್ನ ಘೋಷಣಾ ಪತ್ರದಲ್ಲಿ ಘೋಷಿಸುವ ಮೂಲಕ ಭಾರತೀಯ ಸೈನಿಕರ ಆತ್ಮಸ್ಥೈರ್ಯವನ್ನು ಕುಗ್ಗಿಸಿದ್ದಾರೆ. ಇದರ ಬೆಂಬಲವನ್ನು ಕಾಂಗ್ರೆಸ್ ಜೊತೆ ಕೈ ಜೋಡಿಸಿರುವ ಇತರೆ ಪಕ್ಷಗಳ ನಾಯಕರು ಸೂಚಿಸಿದ್ದಾರೆ ಎಂದರು.

ದೇಶ ಹೊರಗಡೆ ಇರುವ ದೇಶದ್ರೋಹಿಗಳನ್ನು ಪಾಠ ಕಲಿಸುವ ಸಾಮಥ್ರ್ಯವನ್ನು ಪ್ರಧಾನಿ ನರೇಂದ್ರ ಮೋದಿ ಹೊಂದಿದ್ದಾರೆ. ದೇಶದೊಳಗಿರುವ ದ್ರೋಹಿಗಳನ್ನು ಪಾಠ ಕಲಿಸಲು ಈ ಚುನಾವಣೆ ಮಹತ್ವದಾಗಿದೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಡಾ. ಶೈಲೇಂದ್ರ ಬೆಲ್ದಾಳೆ ಅವರು ಮಾತನಾಡಿ, ಭಗವಂತ ಖೂಬಾ ಅವರ ಅವಧಿಯಲ್ಲಿ ಬೀದರ ಜಿಲ್ಲೆಯಲ್ಲಿ ಬಹಳಷ್ಟು ಅಭಿವೃದ್ಧಿ ಕಾರ್ಯಗಳು ಆಗಿವೆ. ಬಿಜೆಪಿಯಲ್ಲಿ ದೇಶ ಮೊದಲು, ಕುಟುಂಬ ನಂತರ ಎಂಬ ಸಿದ್ಧಾಂತದ ಮೇಲೆ ಕಾರ್ಯಕರ್ತರು ಕಾರ್ಯನಿರ್ವಸುತ್ತಾರೆ. ಕಾಂಗ್ರೆಸ್ ಪಕ್ಷ ನೆಹರು ಹಾಗೂ ಗಾಂಧಿ ಪರಿವಾರಕ್ಕಾಗಿ, ಜನತಾದಳ ದೇವೇಗೌಡರ ಕುಟುಂಬಕ್ಕಾಗಿ ಕಾರ್ಯ ಮಾಡುತ್ತವೆ ಎಂದು ದೂರಿದರು.

ವಿಧಾನ ಪರಿಷತ್ ಮಾಜಿ ಸದಸ್ಯರಾದ ಅಮರನಾಥ ಪಾಟೀಲ ಅವರು ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರ ಅವಧಿಯಲ್ಲಿ ದೇಶದ ಆರ್ಥಿಕ ಪ್ರಗತಿ ಹೆಚ್ಚಿಸಿದೆ. ಹಾಗೂ ವಿಶ್ವದಲ್ಲಿ ಭಾರತದ ಸ್ಥಾನಮಾನ ಹಚ್ಚಾಗಿದೆ. ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನ ರಚಿಸುವ ಮೂಲಕ ಸರ್ವರನ್ನು ಮತದಾನದ ಹಕ್ಕು ನೀಡಿದ್ದಾರೆ. ಏಪ್ರೀಲ್ 23 ರಂದು ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ದೇಶದ ಆರ್ಥಿಕ ಮತ್ತು ಭದ್ರತೆಗಾಗಿ ಬಲಪಡಿಸಲು ಎಲ್ಲರೂ ಮತ ಚಲಾಯಿಸಿ, ಮತ್ತೊಮ್ಮೆ ಮೋದಿ ಅವರಿಗೆ ಪ್ರಧಾನ ಮಂತ್ರಿಯನ್ನಾಗಿ ಮಾಡಿ ಎಂದು ಕರೆ ನೀಡಿದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಈಶ್ವರಸಿಂಗ ಠಾಕೂರ ಅವರು ಮಾತನಾಡಿ, ದೇಶದಲ್ಲಿ ರಾಮರಾಜ್ಯ ಸ್ಥಾಪನೆಗೆ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಅವರಿಗೆ ಗೆಲ್ಲಿಸಿ, ನರೇಂದ್ರ ಮೋದಿ ಅವರ ಕೈ ಬಲಪಡಿಸಬೇಕು. ರಾಮರಾಜ್ಯವೆಂದರೆ, ಸಬ್ ಕಾ ಸಾಥ್ ಸಬಕಾ ವಿಕಾಸ ಎಂದರ್ಥ ಕೊಡುತ್ತದೆ ಎಂದರು.

ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಕುಶಾಲರಾವ ಯಾಬಾ ಅವರು ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ರೈತರಿಗೆ ಪ್ರತಿವರ್ಷ 6 ಸಾವಿರ ರೂ. ಘೋಷಿಸಿದಂತೆ ಪ್ರಥಮ ಕಂತಿನ 2 ಸಾವಿರ ರೂ. ರೈತರ ಖಾತೆ ಜಮೆ ಆಗಿದೆ. ಉಜ್ವಲ ಯೋಜನೆಯಡಿ ಮಹಿಳೆಯರಿಗೆ ಅಡುಗೆ ಅನೀಲವನ್ನು ಉಚಿತವಾಗಿ ವಿತರಣೆ ಮಾಡಲಾಗುತ್ತಿದೆ. ಬಡವರಿಗೆ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ. ಬರದಲ್ಲಿಯೂ ದೇಶದ ಸಮಗ್ರ ಏಳಿಗೆಗೆ ದುಡಿಯುವ ಏಕೈಕ ವ್ಯಕ್ತಿ ಪ್ರಧಾನಿ ನರೇಂದ್ರ ಮೋದಿಯವರು ಒಬ್ಬರು.

ಬಿಜೆಪಿ ಬೀದರ ದಕ್ಷಿಣ ಕ್ಷೇತ್ರದ ಅಧ್ಯಕ್ಷ ಜಗನ್ನಾಥರೆಡ್ಡಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂತೋಷ ವಂದಿಸಿದರು.

ಈ ಕಾರ್ಯಕ್ರಮದಲ್ಲಿ ಬಾಬುವಾಲಿ, ಸುರೇಶ ಮಾಶೇಟ್ಟಿ, ಬಾಬುರಾವ ಕಾರಬಾರಿ, ಶಕುಂತಲಾ ಬೆಲ್ದಾಳೆ, ಸುರೇಶ ರಕ್ಷೆ, ವಿಜಯಕುಮಾರ ಭದಭದೆ, ಶಂಕರರೆಡ್ಡಿ ಬೆಳ್ಳೂರು, ಬಸವರಾಜ ಪವಾರ, ಉಮೇಶ ಯಾಬಾ, ಶ್ರೀನಿವಾಸರೆಡ್ಡಿ, ಶ್ರೀಮತಿ ಆರತಿ ಶಂಭು, ಶಿವರಾಜ ಕುದರೆ ಹಾಗೂ ಇತರರು ಇದ್ದರು ಎಂದು ಬೀದರ ಲೋಕಸಭೆ ಕ್ಷೇತ್ರದ ಬಿಜೆಪಿ ಚುನಾವಣಾ ಮಾಧ್ಯಮ ಘಟಕದ ಸಹ ಸಂಚಾಲಕ ಶ್ರೀನಿವಾಸ ಚೌಧರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ