ಮೂಡದ ಒಮ್ಮತ; ಸಿದ್ದರಾಮಯ್ಯ ಮಾತಿಗೂ ಕ್ಯಾರೆ ಎನ್ನದ ಮಂಡ್ಯ ರೆಬೆಲ್ಸ್​​

ಮಂಡ್ಯ: ಮೈತ್ರಿ ಅಭ್ಯರ್ಥಿ ಪರ ನಾವು ಪ್ರಚಾರ ನಡೆಸುವುದಿಲ್ಲ. ನಮ್ಮ ಬೆಂಬಲ ಏನಿದ್ದರೂ ಸುಮಲತಾ ಪರ. ಹೈ ಕಮಾಂಡ್​ ಯಾವುದೇ ತೀರ್ಮಾನ ತೆಗೆದುಕೊಂಡರು ಅಷ್ಟೇ ಎಂಬ ಮಾತನ್ನು ಮಂಡ್ಯ ರೆಬೆಲ್​ ನಾಯಕ ಚೆಲುವರಾಯ ಸ್ವಾಮಿ ಮತ್ತೊಮ್ಮೆ ಪುನರ್​ಉಚ್ಚರಿಸಿದ್ದಾರೆ.

ಇಂದು ಮಂಡ್ಯದಲ್ಲಿ ದೇವೇಗೌಡರ ಜೊತೆ ಪ್ರಚಾರಕ್ಕೆ ಮುಂದಾಗಿರುವ ಸಿದ್ದರಾಮಯ್ಯ ಇದಕ್ಕೂ ಮುನ್ನ ಮಂಡ್ಯ ರೆಬೆಲ್​ ನಾಯಕರಾದ ಚೆಲುವರಾಯಸ್ವಾಮಿ,  ನರೇಂದ್ರಸ್ವಾಮಿ, ರಮೇಶ್ ಬಂಡಿಸಿದ್ದೇಗೌಡ, ರವಿ ಗಣಿಗ,ಚಂದ್ರಶೇಖರ್, ಮಧು ಮಾದೇಗೌಡ  ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಈ ವೇಳೆ ಕೂಡ ಮೈತ್ರಿ ಅಭ್ಯರ್ಥಿ ಬೆಂಬಲಿಸಿ ಪ್ರಚಾರದಲ್ಲಿ ಭಾಗಿಯಾಗುವಂತೆ ಸಿದ್ದರಾಮಯ್ಯ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಇದರ ಬದಲಿಗೆ ಆರೋಗ್ಯದ ನೆಪ ಹೇಳಿ ಚೆಲುವರಾಯಸ್ವಾಮಿ ಪ್ರಚಾರಕ್ಕೆ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ.

ಈ  ವೇಳೆ ಸಿಟ್ಟಾದ ಸಿದ್ದರಾಮಯ್ಯ ಅಲ್ರೀ ಹೈಕಮಾಂಡ್ ಸೂಚನೆಯನ್ನ ಧಿಕ್ಕರಿಸುತ್ತಿದ್ದೀರಿ? ನನ್ನ ಮಾತಿಗೂ ಬೆಲೆ ಕೊಡಲ್ಲ ಅಂದ್ರೆ ಏನರ್ಥ ಎಂದು ಧ್ವನಿ ಏರಿಸಿದ್ದಾರೆ. ನಾನು ಹೊರಟೆ, ಆದ್ರೆ ನನ್ನ ಜೊತೆ ಬಾ. ಇಲ್ಲವಾದಲ್ಲಿ ಹೆಲಿಪ್ಯಾಡ್​ನಲ್ಲಿ ಸಿಗುತ್ತೇನೆ ಎಂದಿದ್ದಾರೆ.

ಈ ವೇಳೆ ಉತ್ತರಿಸಿರುವ ಚೆಲುವರಾಯಸ್ವಾಮಿ ಪಕ್ಷದ ನಿರ್ಧಾರಕ್ಕೆ ತಾವು ಬದ್ಧರಾಗಿರುತ್ತೇನೆ ಎಂದಿದ್ದಾರೆ. ಈ ಮಾತುಕತೆ ಬಳಿಕ ನೇರವಾಗಿ ಹೆಲಿಪ್ಯಾಡ್​ಗೆ ಬರುವಂತೆ ತಿಳಿಸಿರುವದನ್ನು ನೋಡಿದರೆ ಅಂತಿಮವಾಗಿ ಹೆಲಿಪ್ಯಾಡ್ ನಲ್ಲಿ ನಡೆಯುವ ಮಾತುಕತೆ ಮೇಲೆ ಎಲ್ಲವೂ ನಿಂತಿದೆ ಎನ್ನಲಾಗಿದೆ.

ಈಗಾಗಲೇ ಎರಡು ಮೂರು ಬಾರಿ ರೆಬೆಲ್​ ನಾಯಕರ ಸಿಟ್ಟು ಶಮನಕ್ಕೆ ಮುಂದಾದರೂ ಪ್ರಯೋಜನವಾಗಿರಲಿಲ್ಲ. ಇನ್ನು ಯುಗಾದಿ ಹಬ್ಬದ ರಾತ್ರಿಯೇ ಮಂಡ್ಯ ಕಾಂಗ್ರೆಸ್​ ನಾಯಕರನ್ನು ಕರೆದು ಮೈತ್ರಿ ಧರ್ಮ ಪಾಲಿಸಿ, ಇಲ್ಲವಾದಲ್ಲಿ ಇದು ದೇಶಕ್ಕೆ ತಪ್ಪು ಸಂದೇಶ ನೀಡುತ್ತದೆ ಎಂದು ಮನವರಿಕೆ ಮಾಡಿದ್ದರು. ಆದರೂ ಕೂಡ ಜೆಡಿಎಸ್​ ಅಭ್ಯರ್ಥಿ ಪರ ನಮ್ಮ ಬೆಂಬಲವಿಲ್ಲ, ನಮಗೆ ಮಾನ ಮಾರ್ಯದೆ ಇಲ್ಲವಾ ಎಂಬ ಮಾತುಗಳು ಕೂಡ ಕೇಳಿ ಬಂದಿತು.

ಇನ್ನು ಕಳೆದೆರಡು ದಿನಗಳಿಂದ ಮಗನ ಪರ ಪ್ರಚಾರ ನಡೆಸಿದ್ದ ಕುಮಾರಸ್ವಾಮಿ ಅವರು ಕೂಡ ಕಾಂಗ್ರೆಸ್​ ಅತೃಪ್ತ ನಾಯಕರ ವಿರುದ್ಧ ಬಹಿರಂಗವಾಗಿ ಸಿಟ್ಟು ಹೊರಹಾಕಿದ್ದರು. ನಮ್ಮ ಪಕ್ಷದಲ್ಲಿಯೇ ಇದ್ದ ಅವರು ಈಗ ಅವರಿಗೆ ಬೆಂಬಲ ನೀಡುತ್ತಿದ್ದಾರೆ. ನಿಖಿಲ್​ ಸೋಲಿಸುವ ಮೂಲಕ ನನ್ನನ್ನು ಅವಮಾನ ಮಾಡುವುದು ಸರ್ಕಾರ ಬೀಳಿಸುವುದು ಅವರ ಉದ್ದೇಶ ಎಂದು ಬಹಿರಂಗ ಆಕ್ರೋಶ ವ್ಯಕ್ತಪಡಿಸಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ