ಸುಳ್ಳು ಆರೋಪಕ್ಕೆ ತಕ್ಕ ಪಾಠ ಕಲಿಸಿ : ಭಗವಂತ ಖೂಬಾ

ಬೀದರ್: ಐದು ವರ್ಷಗಳ ಅವಧಿಯಲ್ಲಿ ಸಾಕಷ್ಟು ಅನುದಾನ ತಂದೆ ಅಭಿವೃದ್ಧಿ ಮಾಡಿರುವೆ. ಆದರೆ ಖೂಬಾ ಒಂದು ಕೆಲಸವೂ ಮಾಡಿಲ್ಲ ಎಂದು ಸುಳ್ಳು ಹೇಳುವ ಮೂಲಕ ಕಾಂಗ್ರೆಸ್ ಅಪಪ್ರಚಾರ ನಡೆಸುತ್ತಿದ್ದು, ಮತದಾರರು ಕಾಂಗ್ರೆಸ್‍ಗೆ ಪಾಠ ಕಲಿಸಬೇಕು ಎಂದು ಬಿಜೆಪಿ ಅಭ್ಯರ್ಥಿ, ಸಂಸದ ಭಗವಂತ ಖೂಬಾ ಹೇಳಿದರು.

ತಾಲೂಕಿನ ಮಾಳೆಗಾಂವ, ಚಿಲ್ಲರ್ಗಿ, ಜಂಬಾಡ ಗ್ರಾಮದಲ್ಲಿ ಶುಕ್ರವಾರ ಪ್ರಚಾರ ನಡೆಸಿ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ, ರೈಲ್ವೆ ಯೋಜನೆ ಸೇರಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಲಾಗಿದೆ. ಇದನ್ನು ಸಹಿಸದ ವಿಪಕ್ಷಗಳು ಸುಳ್ಳು ಆರೋಪ ಮಾಡಿ ಜನರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ. ಈ ಬಾರಿಯೂ ಮೋದಿ ಪ್ರಧಾನಿ ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದರು.

ಕಾಂಗ್ರೆಸ್ ಒಂದು ಕುಟುಂಬಕ್ಕೆ ಸೀಮಿತವಾದ ಪಕ್ಷ. ಕಾಂಗ್ರೆಸ್‍ನಿಂದ ದೇಶದ ಅಭಿವೃದ್ಧಿ ಅಸಾಧ್ಯ. ಮತ್ತೆ ಮೋದಿ ಪ್ರಧಾನಿಯಾಗಲು ಬಿಜೆಪಿಗೆ ಬೆಂಬಲಿಸಬೇಕೆಂದು ಕೈ ಮುಗಿದು ಕೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರು 5 ವರ್ಷ ಭ್ರಷ್ಟಾಚಾರ ರಹಿತ ಆಡಳಿತ ನೀಡಿದ್ದಾರೆ. ದೇಶದ ಸುರಕ್ಷತೆಗೆ ಮೋದಿ ಅವಶ್ಯ. ದೇಶದ ಸುಭದ್ರತೆ, ಸುರಕ್ಷತೆ, ಅಭಿವೃದ್ಧಿ ಹಾಗೂ ಸ್ಥಿರ ಸರ್ಕಾರಕ್ಕಾಗಿ ಬಿಜೆಪಿಗೆ ಮತ ನೀಡಬೇಕು ಎಂದರು.
ಪ್ರಮುಖರಾದ ಬಾಬು ವಾಲಿ, ವಿಜಯಕುಮಾರ ಪಾಟೀಲ್ ಗಾದಗಿ, ಪೀರಪ್ಪ ಯರನಳ್ಳಿ, ಈಶ್ವರಸಿಂಗ್ ಠಾಕೂರ್, ರಾಜಕುಮಾರ ಗಾದಗಿ, ಅಶೋಕ ಪಾಟೀಲ್, ಮಹೇಶ್ವರ ಸ್ವಾಮಿ ಇತರರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ