ಕೇರಳದ ವಯನಾಡಿನಲ್ಲಿ ಇಂದು ರಾಹುಲ್​ ಗಾಂಧಿ ನಾಮಪತ್ರ ಸಲ್ಲಿಕೆ

ನವದೆಹಲಿಕೇರಳದ ವಯನಾಡ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇಂದು ನಾಮಪತ್ರ ಸಲ್ಲಿಸಲಿದ್ದಾರೆ.

ಇವರೊಂದಿಗೆ ಇವರ ತಂಗಿ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ಜೊತೆಗೆ ಇರಲಿದ್ದಾರೆ ಎನ್ನಲಾಗಿದೆ. ರಾಹುಲ್ ಗಾಂಧಿ ವಯನಾಡಿನಲ್ಲಿ ಸ್ಪರ್ಧೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಕೇರಳದಲ್ಲಿ ರಾಜಕೀಯ ಕಾವು ಜೋರಾಗಿದೆ. ಇನ್ನು ಉತ್ತರಪ್ರದೇಶದ ಅಮೇಥಿಯಲ್ಲಿ ರಾಹುಲ್​ ಗಾಂಧಿ ಪ್ರತಿಸ್ಪರ್ಧಿಯಾಗಿರುವ ಕೇಂದ್ರ ಸಚಿವೆ ಸ್ಮೃತಿ ಇರಾನಿ ಇಂದು ಪ್ರಚಾರಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಅಲ್ಲದೇ, ರಾಯ್​ಬರೇಲಿಯ ಸಲೋನ್​ ವಿಧಾನಸಭಾ ವ್ಯಾಪ್ತಿಯಲ್ಲಿ ನಡೆಯಲಿರುವ ಬಿಜೆಪಿ ಕಿಸಾನ್ ಮೋರ್ಚಾ ಸಮ್ಮೇಳನದಲ್ಲಿ ಭಾಗಿಯಾಗಲಿದ್ದಾರೆ.

ನಾಮಪತ್ರ ಸಲ್ಲಿಕೆ ಹಿನ್ನೆಲೆಯಲ್ಲಿ ನೆನ್ನೆ ರಾತ್ರಿ ಕೇರಳದ ಕೋಜಿಕೊಡ್​ ವಿಮಾನ ನಿಲ್ದಾಣಕ್ಕೆ ಆಗಮಿಸಿದ ರಾಹುಲ್​ ಗಾಂಧಿಗೆ ಕಾಂಗ್ರೆಸ್​ ಕಾರ್ಯಕರ್ತರು ಭರ್ಜರಿ ಸ್ವಾಗತ ನೀಡಿದರು.

ರಾಹುಲ್​ ಗಾಂಧಿ ಕೇರಳದಲ್ಲಿ ಸ್ಪರ್ಧೆ ಮಾಡುತ್ತಿರುವುದಕ್ಕೆ ವ್ಯಂಗ್ಯ ಮಾಡಿದ್ದ ಸ್ಮೃತಿ ಇರಾನಿ, 15 ವರ್ಷದಿಂದ ಇಲ್ಲಿ ಸ್ಪರ್ಧೆ ಮಾಡಿ, ಈಗ ಬೇರೊಂದು ಕ್ಷೇತ್ರಕ್ಕೆ ಹೋಗಿರುವುದು ಅಮೇಥಿಗೆ ಮಾಡಿದ ಅವಮಾನ. ಇಲ್ಲಿನ ಜನರಿಗೆ ರಾಹುಲ್​ ಗಾಂಧಿ ಏನು ಎಂಬುದು ಗೊತ್ತು. ರಾಹುಲ್​ ಗಾಂಧಿ ಸೋಲಿನ ಭೀತಿಯಿಂದಲೇ ಬೇರೊಂದು ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ