ಮೈಸೂರಲ್ಲಿ ಜೆಡಿಎಸ್‌ನ ಸಾ.ರಾ. ಮಹೇಶ್‌ ಮತ್ತು ಜಿಟಿಡಿ ಒಟ್ಟಾಗಿ ಕೆಲಸ ಮಾಡುವರೇ?

ಬೆಂಗಳೂರು: ಮಂಡ್ಯ, ಹಾಸನ, ತುಮಕೂರಿನಲ್ಲಿ ಮಿತ್ರಪಕ್ಷ ಕಾಂಗ್ರೆಸ್‌ನ ಸ್ಥಳೀಯ ನಾಯಕರ ಅಸಹಕಾರ ಧೋರಣೆಗೆ ತಲೆಕೆಡಿಸಿಕೊಂಡಿದ್ದ ಜೆಡಿಎಸ್‌ ನಾಯಕರಿಗೆ ಇದೀಗ, ಮೈಸೂರಿನಲ್ಲಿ ತಮ್ಮದೇ ನಾಯಕರ ನಡುವಿನ ಸಂಘರ್ಷ ತಳಮಳ ಸೃಷ್ಟಿಸಿದೆ.

ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್‌ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರ ‘ನೀಲಿ ಕಣ್ಣಿನ ಹುಡುಗ’ನಾಗಿ ಆಪ್ತ ಒಡನಾಟದಲ್ಲಿ ಮಿಂಚುತ್ತಿರುವುದು ಹಾಗೂ ಜಿಲ್ಲೆಯಲ್ಲಿ ಮಹೇಶ್‌ಗೆ ಮಹತ್ವ ಸಿಗುತ್ತಿರುವುದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡರಲ್ಲಿ ಅಸಮಾಧಾನ ಸೃಷ್ಟಿಸಿದೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ತಮ್ಮ ರಾಜಕೀಯ ಕಡುವೈರಿ ಸಿದ್ದರಾಮಯ್ಯ ವಿರುದ್ಧ ತೊಡೆ ತಟ್ಟಿದ್ದ ಜಿ.ಟಿ.ದೇವೇಗೌಡರಿಗೆ ಈಗ ಅದೇ ನಾಯಕರೊಟ್ಟಿಗೆ ಚುನಾವಣಾ ಪ್ರಚಾರ ನಡೆಸುವ ಇಕ್ಕಟ್ಟು ಒಂದೆಡೆಯಾದರೆ, ವೈಯಕ್ತಿಕವಾಗಿ ಉತ್ತಮ ಸಂಬಂಧವಿಲ್ಲದ ಪಕ್ಷದ ಸಹೋದ್ಯೋಗಿ ಸಾ.ರಾ.ಮಹೇಶ್‌ ಜತೆಗೆ ಕೈಜೋಡಿಸಿ ಕೆಲಸ ಮಾಡಲು ಅವರು ಸಿದ್ಧರಿಲ್ಲ ಎನ್ನಲಾಗಿದೆ.
ಮಂಡ್ಯದಲ್ಲಿ ಕೆಲವು ಮಾಜಿ ಶಾಸಕರು ಸೇರಿ ಸ್ಥಳೀಯ ಮುಖಂಡರು ಮೈತ್ರಿಕೂಟದ ಅಭ್ಯರ್ಥಿಯಾದ ನಿಖಿಲ್‌ ಕುಮಾರಸ್ವಾಮಿ ಪರವಾಗಿ ಕೆಲಸ ಮಾಡುತ್ತಿಲ್ಲ ಎಂದು ಜೆಡಿಎಸ್‌ ನಾಯಕರು ಆಕ್ಷೇಪಿಸುತ್ತಿದ್ದರು. ಇದೀಗ, ಮೈಸೂರಿನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ವಿಜಯಶಂಕರ್‌ ಪರ ಜೆಡಿಎಸ್‌ ನಾಯಕರು ಕೆಲಸ ಮಾಡುತ್ತಿಲ್ಲ ಎಂಬ ಪ್ರತಿದೂರನ್ನು ಎದುರಿಸುವ ಸ್ಥಿತಿ ಜೆಡಿಎಸ್‌ ವರಿಷ್ಠರಿಗೆ ಎದುರಾಗಿದೆ. ಮೈತ್ರಿಕೂಟದ ನಾಯಕರು ಪ್ರಚಾರದ ಅಖಾಡದಲ್ಲಿ ಬ್ಯುಸಿಯಾಗಿದ್ದರೆ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡರು ನೇಪಥ್ಯದಲ್ಲೇ ಉಳಿದಿದ್ದಾರೆ.

ಮೈಸೂರಿನಲ್ಲಿ ಪಕ್ಷದ ನಾಯಕರ ನಡುವಿನ ವೈಷಮ್ಯದ ಸ್ಥಿತಿ ಒಂದೆಡೆಯಾದರೆ, ಮಂಡ್ಯ ಕ್ಷೇತ್ರದ ನಾಗಮಂಗಲ, ಶ್ರೀರಂಗಪಟ್ಟಣ ಮತ್ತಿತರ ಕಡೆಗಳಲ್ಲಿ ಪಕ್ಷದ ತನ್ನದೇ ಮುಖಂಡರು ಹಾಗೂ ಕಾರ್ಯಕರ್ತರನ್ನು ಒಟ್ಟುಗೂಡಿಸಲು ಹೆಣಗಾಡುವ ಸ್ಥಿತಿ ಜೆಡಿಎಸ್‌ ನಾಯಕರಿಗೆ ಎದುರಾಗಿದೆ. ನಾಗಮಂಗಲದಲ್ಲಿ ಕಳೆದ ವಿಧಾನಸಭೆ ಚುನಾವಣೆಗೆ ಮುನ್ನ ಪಕ್ಷಕ್ಕೆ ಸೇರಿ ಶಾಸಕರಾಗಿರುವ ಸುರೇಶ್‌ಗೌಡ ಅವರು ತಮ್ಮ ಪೂರ್ವಾಶ್ರಮದ ಕಾಂಗ್ರೆಸ್‌ ಕಾರ್ಯಕರ್ತರನ್ನು ಮಾತ್ರವೇ ಜತೆಗಿಟ್ಟುಕೊಂಡಿದ್ದು, ಜೆಡಿಎಸ್‌ ಕಾರ್ಯಕರ್ತರನ್ನು ದೂರವಿಟ್ಟಿದ್ದಾರೆ ಎಂಬ ದೂರುಗಳು ಕೇಳಿಬಂದಿವೆ. ಕ್ಷೇತ್ರದಲ್ಲಿ ದಶಕದ ಕಾಲ ತಮ್ಮ ವಿರೋಧಿಗಳಾಗಿದ್ದ ಜೆಡಿಎಸ್‌ ಮುಖಂಡರು ಮತ್ತು ಕಾರ್ಯಕರ್ತರನ್ನು ಶಾಸಕರು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂಬ ಈ ದೂರಿನ ಹಿನ್ನೆಲೆಯಲ್ಲಿ ಜೆಡಿಎಸ್‌ ವರಿಷ್ಠರು ಕ್ಷೇತ್ರದಲ್ಲಿ ಮೇಲ್ಮನೆ ಸದಸ್ಯ ಅಪ್ಪಾಜಿಗೌಡ ಅವರಿಗೆ ಹೆಚ್ಚಿನ ಚುನಾವಣಾ ಜವಾಬ್ದಾರಿ ನೀಡಿದ್ದಾರೆ. ಇದರಿಂದ ಸುರೇಶ್‌ಗೌಡ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ