ಮಾಜಿ ಸಿ.ಎಂ.ಸಿದ್ದರಾಮಯ್ಯ ಎಲ್ಲಾ ವರ್ಗದ ನಾಯಕರು-ಮಾಜಿ ಸಚಿವ ಶಿವರಾಜ ತಂಗಡಗಿ

ಕೊಪ್ಪಳ,ಏ.4- ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವುದೇ ಒಂದು ಸಮುದಾಯದ ನಾಯಕರಲ್ಲ. ಅವರು ಎಲ್ಲಾ ವರ್ಗಗಳ ನಾಯಕರಾಗಿದ್ದರು.

ಅಂತಹವರನ್ನು ಟೀಕಿಸಲು ಈಶ್ವರಪ್ಪನವರಿಗೆ ಯಾವುದೇ ನೈತಿಕತೆ ಇಲ್ಲ ಎಂದು ಮಾಜಿ ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ.

ನಾನು ರಾಷ್ಟ್ರೀಯವಾದಿ, ಸಿದ್ದರಾಮಯ್ಯ ಜಾತಿವಾದಿ ಎಂದು ಈಶ್ವರಪ್ಪ ಹೇಳಿಕೆಗೆ ತಿರುಗೇಟು ನೀಡಿರುವ ಅವರು, ಈಶ್ವರಪ್ಪನವರ ನಾಲಿಗೆಗೂ ಮೆದುಳಿಗೂ ಸಂಪರ್ಕವೇ ಇಲ್ಲ. ಏನು ಮಾತನಾಡುತ್ತೇನೆ ಎಂಬುದು ಗೊತ್ತಾಗುವುದಿಲ್ಲ. ಸಿದ್ದರಾಮಯ್ಯನವರಂತಹ ನಾಯಕರನ್ನು ಪಡೆದಿರುವುದಕ್ಕೆ ನಾನು ಹೆಮ್ಮೆ ಪಡಬೇಕು ಎಂದು ಹೇಳಿದರು.

ಸಿದ್ದರಾಮಯ್ಯನವರು 5 ವರ್ಷ ಉತ್ತಮ ಆಡಳಿತ ನಡೆಸಿದ್ದಾರೆ. ಎಲ್ಲಾ ವರ್ಗಗಳ ಹಿತ ಕಾಯ್ದಿದ್ದಾರೆ. ಅಂತಹವರ ಬಗ್ಗೆ ಮಾತನಾಡುವಾಗ ಎಚ್ಚರವಿರಬೇಕೆಂದು ತಂಗಡಗಿ ತಿಳಿಸಿದರು.

ಈಶ್ವರಪ್ಪನವರು ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಅವರ ಮಾತುಗಳು ಅವರ ಪಕ್ಷದ ಮೇಲೆ ಪರಿಣಾಮ ಬೀರುತ್ತವೆ. ಅದು ಅವರ ನಾಯಕರಿಗೆ ಗೊತ್ತಾಗುವುದಿಲ್ಲವೇ ಎಂದು ಹೇಳಿದರು.

ಕೊಪ್ಪಳ ಕ್ಷೇತ್ರದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಗೆಲುವು ನಿಶ್ಚಿತ. ಇಲ್ಲಿ ಬಿಜೆಪಿ ಅಭ್ಯರ್ಥಿ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ.

ಸಿದ್ದರಾಮಯ್ಯನವರ 5 ವರ್ಷದ ಆಡಳಿತ, ಮೈತ್ರಿ ಸರ್ಕಾರದ ಅಭಿವೃದ್ಧಿ ಕೆಲಸಗಳಿಗೆ ಜನ ಮನ್ನಣೆ ನೀಡಲಿದ್ದಾರೆ. ನಾವು ವಾಸ್ತವದ ನೆಲಗಟ್ಟಿನಲ್ಲಿ ರಾಜಕಾರಣ ಮಾಡುತ್ತೇವೆ. ಭಾವನೆಗಳೊಂದಿಗೆ ಚೆಲ್ಲಾಟವಾಡುವುದಿಲ್ಲ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ