ಚುನಾವಣಾಧಿಕಾರಿಗಳಿಂದ ದಾಖಲೆಯಿಲ್ಲದ ಹಣ ವಶ

ಕೆ.ಆರ್.ಪೇಟೆ, ಏ.4-ತಾಲೂಕಿನಲ್ಲಿ ಚುನಾವಣಾ ನಿಮಿತ್ತ ತೆರೆಯಲಾಗಿರುವ ಎರಡು ಚೆಕ್‍ಪೋಸ್ಟ್ಗಳಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಸುಮಾರು 20ಲಕ್ಷ ರೂಗಳನ್ನು ಚುನಾವಣಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಪಟ್ಟಣದ ಚಿಕ್ಕೋನಹಳ್ಳಿ ಹೌಸಿಂಗ್ ಬೋರ್ಡ್ ಬಡಾವಣೆಯ ಚನ್ನರಾಯಪಟ್ಟಣ-ಕೆ.ಆರ್.ಪೇಟೆ ಮುಖ್ಯ ರಸ್ತೆಯಲ್ಲಿ ತೆರೆಯಲಾಗಿರುವ ಚೆಕ್ ಪೋಸ್ಟ್ ಮೂಲಕ ಚನ್ನರಾಯಪಟ್ಟಣ ಕಡೆಗೆ ಕಾರಿನಲ್ಲಿ ಹೋಗುತ್ತಿದ್ದ ನಿರಂಜನ್ ಎಂಬ ವ್ಯಕ್ತಿಯು ಯಾವುದೇ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 19ಲಕ್ಷದ 46ಸಾವಿರದ 400ರೂಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಮಾರೇನಹಳ್ಳಿ ಹರಿಯಾಲದಮ್ಮದೇವಸ್ಥಾನ ಬಳಿಯ ಶ್ರವಣಬೆಳಗೊಳ-ಕೆ.ಆರ್.ಪೇಟೆ ಮುಖ್ಯ ರಸ್ತೆಯಲ್ಲಿ ತೆರೆಯಲಾಗಿರುವ ಚೆಕ್ ಪೋಸ್ಟ್ ಮೂಲಕ ಶ್ರವಣಬೆಳಗೊಳ ಕಡೆಗೆ ವ್ಯಕ್ತಿಯೊಬ್ಬ ಕಾರಿನಲ್ಲಿ 65ಸಾವಿರ ರೂಗಳನ್ನು ಸಾಗಿಸುತ್ತಿದ್ದಾಗ ಕಾರಿನ ಸಮೇತ ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಹಾಯಕ ಚುನಾವಣಾಧಿಕಾರಿ ವೆಂಕಟೇಶ್ ಮತ್ತು ತಹಸೀಲ್ದಾರ್ ಎಂ.ಶಿವಮೂರ್ತಿ ಅವರು ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ