ನ್ಯಾಯ್ ಯೋಜನೆ ಕುರಿತ ತಮ್ಮ ಹೇಳಿಕೆ ವೈಯಕ್ತಿಕ ಅಭಿಪ್ರಾಯ: ನೀತಿ ಆಯೋಗದ ಉಪಾಧ್ಯಕ್ಷ ಸ್ಪಷ್ಟನೆ

ನವದೆಹಲಿ: ಕಾಂಗ್ರೆಸ್​ ನ ಕನಿಷ್ಠ ಆದಾಯ ಖಾತ್ರಿ ಭರವಸೆ ಯೋಜನೆ ‘ನ್ಯಾಯ್​’ ಕುರಿತ ತಮ್ಮ ಹೇಳಿಕೆ ವೈಯಕ್ತಿಕವಾದದ್ದು ಎಂದು ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್​ ಕುಮಾರ್​ ತಿಳಿಸಿದ್ದಾರೆ.

ಪ್ರಣಾಳಿಕೆ ಬಿಡುಗಡೆಗೂ ಮುನ್ನ ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ, ದೇಶದಲ್ಲಿರುವ ಶೇ.20 ಕಡುಬಡವರ ಬ್ಯಾಂಕ್​ ಖಾತೆಗೆ ಮಾಸಿಕ 6 ಸಾವಿರ ರೂ.ನಂತೆ ವಾರ್ಷಿಕ 72 ಸಾವಿರ ರೂ. ಕನಿಷ್ಠ ಆದಾಯದ ಮೊತ್ತವನ್ನು ಸಂದಾಯ ಮಾಡುವ ನ್ಯಾಯ್​ ಎಂಬ ಯೋಜನೆಯನ್ನು ಘೋಷಿಸಿದ್ದರು. ಇದು ಬಡತನದ ವಿರುದ್ಧದ ಕಾಂಗ್ರೆಸ್​ನ ಸರ್ಜಿಕಲ್​ ಸ್ಟ್ರೈಕ್​ ಎಂದು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್​ ಕುಮಾರ್​, ಚುನಾವಣೆಯನ್ನು ಗೆಲ್ಲುವ ಸಲುವಾಗಿ ಬಾಯಿಗೆ ಬಂದ ಭರವಸೆ ನೀಡಿ ಮತದಾರರನ್ನು ಓಲೈಸುವ ಕಾಂಗ್ರೆಸ್​ ಕಸರತ್ತಿನ ಮುಂದುವರಿದ ಭಾಗ ಎಂದು ಟೀಕಿಸಿದ್ದರು.

ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಕೇಂದ್ರ ಚುನಾವಣಾ ಆಯೋಗ ಸ್ಪಷ್ಟನೆ ಕೋರಿ ರಾಜೀವ್​ ಕುಮಾರ್​ಗೆ ನೋಟಿಸ್​ ಜಾರಿ ಮಾಡಿತ್ತು. ಇದಕ್ಕೆ ಸ್ಪಷ್ಟನೆ ನೀಡಿರುವ ರಾಜೀವ್ ಕುಮಾರ್, ತಮ್ಮ ಟೀಕೆ ವೈಯಕ್ತಿಕವಾದದ್ದು ಎಂದು ಸ್ಪಷ್ಟಪಡಿಸಿದ್ದಾರೆ.

ನ್ಯಾಯ್​ ಕುರಿತ ಟೀಕೆ ನನ್ನ ವೈಯಕ್ತಿಕ ಅಭಿಪ್ರಾಯ. ತಾವೊಬ್ಬ ಆರ್ಥಿಕ ತಜ್ಞನಾಗಿ ಈ ಕುರಿತು ಪ್ರತಿಕ್ರಿಯಿಸಿದ್ದೆ. ಒಂದು ವೇಳೆ ಈ ಯೋಜನೆಯಂತೆ ಜನರಿಗೆ ಹಣ ಕೊಡಲಾರಂಭಿಸಿದರೆ ವಿತ್ತೀಯ ಕೊರತೆ ಶೇ.3.5ರಿಂದ ಶೇ.6ಕ್ಕೆ ಹೆಚ್ಚಳವಾಗುತ್ತದೆ. ಜತೆಗೆ, ಜಾಗತಿಕ ಮೌಲ್ಯಾಂಕನ ಸಂಸ್ಥೆಗಳು ಭಾರತಕ್ಕೆ ಕಳಪೆ ಮೌಲ್ಯಾಂಕನ ನೀಡುತ್ತವೆ. ಇದರಿಂದ ಬಾಹ್ಯ ಸಾಲ ಪಡೆಯಲು ತುಂಬಾ ತೊಂದರೆಯಾಗಬಹುದು ಎಂಬ ಕಾರಣಕ್ಕಾಗಿ ಈ ಹೇಳಿಕೆ ನೀಡಿದ್ದಾಗಿ ತಿಳಿದ್ದಾರೆ.

Niti ayog VC Rajiv Kumar, explain,Election Commission

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ