ಚುನಾವಣೆಯಲ್ಲಿ ಹಣ ಬಲ, ಮಾಧ್ಯಮಗಳ ದುರ್ಬಳಕೆ ದೊಡ್ಡ ಸವಾಲಾಗಿದೆ: ಚುನಾವಣಾ ಆಯೋಗ ಕಳವಳ

ನವದೆಹಲಿ: ತೆಲಂಗಾಣ ಸೇರಿ ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದ್ದು, ಚುನಾವಣಾ ಆಯೋಗಕ್ಕೆ ಇದೀಗ ಹಣದ ಬಲ ಹಾಗೂ ಮಾಧ್ಯಮಗಳ ದುರ್ಬಳಕೆಗಳು ದೊಡ್ಡ ಸವಾಲಾಗಿ ಪರಿಣಮಿಸಿದೆ.

ತೆಲಂಗಾಣದಲ್ಲಿ ಡಿಸೆಂಬರ್ 7 ರಿಂದ ವಿಧಾನಸಭೆ ಚುನಾವಣೆ ಆರಂಭವಾಗಲಿದೆ. ಚುನಾವಣೆ ಹತ್ತಿರ ಬರುತ್ತಿರುವ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಚುನಾವಣಾ ಮುಖ್ಯ ಆಯುಕ್ತ ಓಂ ಪ್ರಕಾಶ್ ರಾವತ್ ಅವರು, ಹಣ ಬಲ ಹಾಗೂ ಅದರ ದುರ್ಬಳಕೆ, ಮಾಧ್ಯಮಗಳ ದುರ್ಬಳಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ ಎಂದು ಹೇಳಿದ್ದಾರೆ.

ತೆಲಂಗಾಣದಲ್ಲಿ 2014ರಲ್ಲಿ ನಡೆದ ಚುನಾವಣೆವೇಳೆ ರೂ.154 ಕೋಟಿಗೂ ಹೆಚ್ಚು ಹಣವನ್ನು ಆಂಧ್ರಪ್ರದೇಶವೊಂದರಲ್ಲಿಯೇ ವಶಕ್ಕೆ ಪಡೆದುಕೊಳ್ಳಲಾಗಿತ್ತು. ಹಣ ಬಲ ಹಾಗೂ ಮಾಧ್ಯಮಗಳ ದುರ್ಬಳಕೆ ಕುರಿತಂತೆ ರಾಜಕೀಯ ಪಕ್ಷಗಳೂ ಕೂಡ ಕಳವಳ ವ್ಯಕ್ತಪಡಿಸಿವೆ. ಈ ಎರಡೂ ವಿಚಾರಗಳ ಬಗ್ಗೆಯೂ ಆಯೋಗಕ್ಕೆ ಮಾಹಿತಿ ನೀಡಲಾಗಿದೆ ಎಂದು ಹೇಳಿದ್ದಾರೆ.

ಪ್ರತೀ ಚುನಾವಣೆಯಲ್ಲಿಯೂ ಪ್ರಚಾರದ ವೇಳೆ ಮತದಾರರನ್ನು ಒಲಿಸಿಕೊಳ್ಳಲು ಸೃಜನಾತ್ಮಕ ತಂತ್ರಗಳನ್ನು ಹೂಡುತ್ತಾರೆ. ಹಣದ ದುರ್ಬಳಕೆಯಂತೂ ಅತಿರೇಕಕ್ಕೇರಿದೆ. ಮಾಧ್ಯಮಗಳ ಮಾಲೀಕತ್ವಗಳು ರಾಜಕೀಯ ಪಕ್ಷಗಳ ಕೈ ಸೇರಿವೆ. ಹೀಗಾಗಿ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಲು ನಿರ್ಧರಿಸಲಾಗಿದೆ.

ಕೆಲ ಮಾಧ್ಯಮಗಳು ರಾಜಕೀಯ ಪಕ್ಷಗಳ ಹಿಡಿತದಲ್ಲಿರುವುದರಿಂದ ಆ ಮಾಧ್ಯಮ ಆಯಾ ವ್ಯಕ್ತಿಗಳ ಪರ ಪ್ರಚಾರ ಮಾಡುತ್ತಿರುತ್ತದೆ. ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಮತದಾರರ ಪಟ್ಟಿ ಕುರಿತಂತೆ ಎದ್ದಿರುವ ವಿವಾದ ಕುರಿತಂತೆ ಇದೇ ವೇಳೆ ಪ್ರತಿಕ್ರಿಯೆ ನೀಡಿರುವ ಅವರು, ಚುನಾವಣಾ ಸಮಿತಿ ನೂತನ ತಂತ್ರಜ್ಞಾನಗಳನ್ನು ಬಳಕೆ ಮಾಡುತ್ತಿದೆ. ಹಲವು ಖಾತೆಗಳಲ್ಲಿ ಮತದಾರರ ಹೆಸರುಗಳನ್ನು ಅಳಿಸಲಾಗಿದೆ. ಈ ಸಂಬಂಧ ನಾವು ಸಾಕಷ್ಟು ಕಾರ್ಯಕ್ರಮಗಳನ್ನು ಆರಂಭಿಸಿದ್ದೇವೆ. ಮತದಾರ ಚೀಟಿಗಳಲ್ಲಿ ಶುದ್ಧೀಕರಣ ಮಾಡಲು ಹೊಸ ಸಾಫ್ಟ್ ವೇರ್ ಪರಿಚಯಿಸಿದ್ದೇವೆ. ಇದನ್ನು 2015ರಿಂದಲೂ ಮಾಡುತ್ತಿದ್ದೇವೆ. ತೆಲಂಗಾಣ ಸೇರಿ ಹಲವು ರಾಜಕೀಯ ಪಕ್ಷಗಳು ಈಗಾಗಲೇ ತಮ್ಮ ತಮ್ಮ ಪಟ್ಟಿಗಳನ್ನು ಸಲ್ಲಿಕೆ ಮಾಡಿದ್ದೇವೆ. ಈ ಪಟ್ಟಿಯನ್ನು ಪರಿಶೀಲನೆ ನಡೆಸಲು ಅಧಿಕಾರಿಗಳಿಗೆ ಕಳುಹಿಸಿದ್ದೇವೆ.

ಇದೇ ರೀತಿ ರಾಜಸ್ಥಾನದಲ್ಲಿಯೂ ನಾಗರೀಕ ಸಮಾಜಗಳು ದೂರು ನೀಡಿವೆ. ಈ ಸಂಬಂಧ ನಾವು ಕ್ರಮಗಳನ್ನು ಕೈಗೊಂಡಿದ್ದೇವೆ. ಯಾವುದೇ ಸಮಸ್ಯೆಗಳಿಲ್ಲದೆ ಮತದಾರರ ಚೀಟಿಗಳು ಬರಲಿವೆ ಎಂದಿದ್ದಾರೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ